
ತಮಿಳುನಾಡು: ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ (HR&CE) ಸಚಿವ ಎಸ್. ರಮೇಶ್ ತಿರುಚಿಯ ಶ್ರೀರಂಗಂನಲ್ಲಿ ಮಾತನಾಡಿ ರಾಜ್ಯದ ಪ್ರಮುಖ ದೇವಸ್ಥಾನಗಳ ಆವರಣದಲ್ಲಿ ಸೆಪ್ಟೆಂಬರ್ 1ರಿಂದ ಮೊಬೈಲ್ ಫೋನ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ತಿಳಿಸಿದ್ದಾರೆ.
ದೇವಸ್ಥಾನದ ಗರ್ಭಗುಡಿ ಹಾಗೂ ಪೂಜಾ ವಿಧಿವಿಧಾನಗಳ ವೀಡಿಯೊಗಳನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವುದು ಹೆಚ್ಚಾಗಿದೆ. ಅಲ್ಲದೆ, ದೇವಸ್ಥಾನಗಳಲ್ಲಿ ರೀಲ್ಸ್ ಮತ್ತು ಶಾರ್ಟ್ಸ್ ಮಾಡುವುದನ್ನು ತಡೆಯುವುದು ಹಾಗೂ ದೇವಾಲಯಗಳ ಪಾವಿತ್ರ್ಯ ಕಾಪಾಡುವ ಉದ್ದೇಶದಿಂದ ದೇವಸ್ಥಾನ ಪ್ರವೇಶಿಸುವ ಮುನ್ನ ಭಕ್ತರು ಮೊಬೈಲ್ ಫೋನ್ಗಳನ್ನು ಜಮಾ ಮಾಡಲು ಪ್ರವೇಶ ದ್ವಾರ ಅಥವಾ ದೇವಸ್ಥಾನದ ಹೊರಭಾಗದಲ್ಲಿ ಪ್ರತ್ಯೇಕ ಕೌಂಟರ್ಗಳನ್ನು ತೆರೆಯಲಾಗುವುದು ಎಂದು ಹೇಳಿದ್ದಾರೆ.
ಪ್ರಮುಖ ದೇವಸ್ಥಾನಗಳಲ್ಲಿ ಮೊಬೈಲ್ ಸುರಕ್ಷಿತವಾಗಿ ಇರಿಸಲು ‘ಡೆಪಾಸಿಟ್ ಕೌಂಟರ್’ಗಳನ್ನು ಸ್ಥಾಪಿಸಲಾಗುವುದು. ವರದಿಗಳ ಪ್ರಕಾರ, ಪ್ರತಿ ಮೊಬೈಲ್ಗೆ ₹5 ಶುಲ್ಕ ಪಡೆದು ಭಕ್ತರು ದರ್ಶನ ಮುಗಿಸಿ ಬರುವವರೆಗೆ ಫೋನ್ಗಳನ್ನು ಸುರಕ್ಷಿತವಾಗಿ ಇರಿಸಲಾಗುತ್ತದೆ.
ಇನ್ನು ವಿಐಪಿ ಭೇಟಿಗಳಿಂದ ಸಾಮಾನ್ಯ ಭಕ್ತರಿಗೆ ತೊಂದರೆಯಾಗದಂತೆ ಹೊಸ ಮಾರ್ಗಸೂಚಿ ಜಾರಿಗೊಳಿಸಲಾಗಿದೆ. ರಾಜಕಾರಣಿಗಳು, ಸಿನಿಮಾ ತಾರೆಯರು ಹಾಗೂ ಇತರ ಗಣ್ಯರು ದೇವಸ್ಥಾನಕ್ಕೆ ಭೇಟಿ ನೀಡುವ ಮುನ್ನ HR&CE ಆಯುಕ್ತರಿಗೆ ಮಾಹಿತಿ ನೀಡಬೇಕು. ವಿಐಪಿ ಭೇಟಿಯ ಸಂದರ್ಭದಲ್ಲೂ ಫೋಟೋ ಅಥವಾ ವೀಡಿಯೋ ಚಿತ್ರೀಕರಣಕ್ಕೆ ಅವಕಾಶ ಇರುವುದಿಲ್ಲ.

























































