
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಚುನಾವಣೆ ಗೆಲ್ಲಲು ರಾಜಕೀಯ ಪಕ್ಷಗಳು ಉಚಿತ ಕೊಡುಗೆಗಳನ್ನು ನೀಡುತ್ತಿದ್ದು ಈ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ‘ಇಂಥ ಯೋಜನೆಗಳಿಂದಾಗಿ ಜನರಿಗೆ ಕೆಲಸ ಮಾಡಲು ಮನಸ್ಸೇ ಇಲ್ಲದಂತಾಗಿದೆ. ಹೀಗೆ ಮಾಡುವುದರಿಂದ, ಜನರನ್ನು ಮುಖ್ಯವಾಹಿನಿಗೆ ತಂದು ರಾಷ್ಟ್ರಾಭಿವೃದ್ಧಿಗೆ ಕೊಡುಗೆ ನೀಡಲು ಸಶಕ್ತರಾಗಿಸುವ ಬದಲು, ಪರಾವಲಂಬಿಗಳನ್ನಾಗಿ ಮಾಡುತ್ತಿಲ್ಲವೇ?’ ಎಂದು ಸರ್ಕಾರವನ್ನು ಖಾರವಾಗಿ ಪ್ರಶ್ನಿಸಿದೆ.
ಬುಧವಾರ ನ್ಯಾ। ಬಿ.ಆರ್. ಗವಾಯ್ ಹಾಗೂ ನ್ಯಾ.ಅಗಸ್ಟಿನ್ ಜಾರ್ಜ್ ಮಸೀಹ್ ಅವರನ್ನೊಳಗೊಂಡ ಪೀಠವು ನಗರ ಪ್ರದೇಶಗಳಲ್ಲಿ ನಿರಾಶ್ರಿತರ ಆಶ್ರಯದ ಹಕ್ಕಿನ ಕುರಿತಾದ ಅರ್ಜಿಗಳನ್ನು ವಿಚಾರಣೆ ನಡೆಸಿ ‘ಚುನಾವಣೆಗೆ ಮುನ್ನ ಘೋಷಿಸಿದ ಉಚಿತ ಪಡಿತರ ಹಾಗೂ ‘ಲಡ್ಕಿ ಬಹಿನ್’ (ಕರ್ನಾಟಕದ ಗೃಹಲಕ್ಷ್ಮಿ ಮಾದರಿಯ ಮಹಾರಾಷ್ಟ್ರ ಸ್ಕೀಂ) ರೀತಿಯ ಯೋಜನೆಗಳಿಂದಾಗಿ ಜನರಿಗೆ ಕೆಲಸ ಮಾಡದೆಯೇ ಪಡಿತರ ಮತ್ತು ಹಣ ಸಿಗುವಂತಾಗಿದೆ. ಹೀಗಾಗಿ ಜನರೀಗ ಕೆಲಸ ಮಾಡುವುದಕ್ಕೇ ಹಿಂಜರಿಯುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್, ‘ಕೆಲಸ ಸಿಗುವಂತಿದ್ದರೆ ದೇಶದಲ್ಲಿ ಯಾರೂ ದುಡಿಯುವುದರಿಂದ ಹಿಂದೆ ಸರಿಯುವುದಿಲ್ಲ’ ಎಂದು ಹೇಳಿದ್ದು ಇದಕ್ಕೆ ಉತ್ತರಿಸಿದ ನ್ಯಾ.ಗವಾಯ್, ‘ನೀವು ಅರಿವಿನ ಒಂದು ಬದಿಯನ್ನಷ್ಟೇ ನೋಡಿದ್ದೀರಿ. ನಾನು ಕೂಡ ಮಹಾರಾಷ್ಟ್ರದ ಕೃಷಿ ಕುಟುಂಬದಿಂದ ಬಂದಿದ್ದೇನೆ. ಚುನಾವಣಾ ಪೂರ್ವದಲ್ಲಿ ಘೋಷಿಸಲಾದ ಉಚಿತಗಳಿಂದಾಗಿ ರಾಜ್ಯದಲ್ಲೀಗ ಕೃಷಿಕರಿಗೆ ಕಾರ್ಮಿಕರು ಸಿಗುತ್ತಿಲ್ಲ’ ಎಂದು ಹೇಳಿದರು.



















