
ಬೆಂಗಳೂರು: ಬಸವೇಶ್ವನಗರ ಠಾಣೆಯಲ್ಲಿ ಇಬ್ಬರು ಕಿರುತೆರೆ ಸಹಕಲಾವಿದೆಯರು ಮೂರು ತಿಂಗಳ ಹಿಂದೆಯೇ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಂದೇಶ ಸಂಬಂಧ ಚಿತ್ರದುರ್ಗದ ರೇಣುಕಾಸ್ವಾಮಿ ವಿರುದ್ಧ ನೀಡಿದ್ದ ದೂರಿನ ಬಗ್ಗೆ ನಿರ್ಲಕ್ಷ್ಯತನ ತೋರಿದ್ದರು ಎಂಬ ಆರೋಪ ಕೇಳಿ ಬಂದಿದ್ದು ಕಿರುತೆರೆಯಲ್ಲಿ ನಟಿಸಿರುವ ಇಬ್ಬರು ಸಂತ್ರಸ್ತೆಯರಿಗೂ, ಇನ್ಸ್ಟಾಗ್ರಾಂನಲ್ಲಿ ಗೌತಮ್ ಹೆಸರಿನಲ್ಲೇ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿ ಕಾಟ ಕೊಟ್ಟಿದ್ದು ಈ ದೂರನ್ನು ಬಸವೇಶ್ವರನಗರ ಪೊಲೀಸರು ಗಂಭೀರವಾಗಿ ತೆಗೆದುಕೊಂಡಿದ್ದರೆ ಈಗಿನ ಅನಾಹುತ ತಪ್ಪಿಸಬಹುದಿತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ.
ಇನ್ಸ್ಟಾಗ್ರಾಂನಲ್ಲಿ ಕಿರುತೆರೆ ಸಹನಟಿಯರು ರೀಲ್ಸ್ ಮಾಡುತ್ತಿದ್ದು ಈ ರೀಲ್ಸ್ಗಳಿಗೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದ. ಇದಲ್ಲದೆ ಕೆಲ ಬಾರಿ ಖಾಸಗಿಯಾಗಿ ಸಂದೇಶ ಕಳುಹಿಸುತ್ತಿದ್ದು ಇದೇ ವರ್ಷದ ಫೆಬ್ರವರಿಯಿಂದ ಈ ಸಂತ್ರಸ್ತೆಯರಿಗೆ ಅಶ್ಲೀಲ ಸಂದೇಶಗಳನ್ನು ನಿರಂತರವಾಗಿ ಕಳುಹಿಸಿ ರೇಣುಕಾಸ್ವಾಮಿ ತೊಂದರೆ ಕೊಡುತ್ತಿದ್ದ. ಈ ಸಂತ್ರಸ್ತೆಯರಿಗೂ ಕೂಡ ತನ್ನ ಗುಪ್ತಾಂಗದ ಪೋಟೋ ಕಳುಹಿಸಿ ಆತ ಅಸಹ್ಯವಾಗಿ ವರ್ತಿಸಿದ್ದ ಎಂದು ಸಂತ್ರಸ್ತೆಯರು ತಿಳಿಸಿದ್ದಾರೆ.
ಈ ಕುರಿತು ಸಂತ್ರಸ್ತೆಯೊಬ್ಬರು ಬೆಂಗಳೂರಿನ ನೆರೆ ಜಿಲ್ಲೆಯಲ್ಲಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಆಗಿರುವ ತನ್ನ ಹಿರಿಯ ಸೋದರನಿಗೆ ತಿಳಿಸಿದ್ದು ಆಗ ಸೋದರನ ಸೂಚನೆ ಮೇರೆಗೆ ಸಲುಗೆ ಮಾತುಗಳಿಂದ ರೇಣುಕಾಸ್ವಾಮಿಯನ್ನು ಮಾತನಾಡಿಸಿ ಆತನಿಂದ ವೈಯಕ್ತಿಕ ವಿವರವನ್ನು ಪಡೆದುಕೊಂಡಿದ್ದರು.
ತನ್ನ ಹೆಸರು ಗೌತಮ್ ಚಿತ್ರದುರ್ಗ ಜಿಲ್ಲೆಯವನು. ಕೆ.ಆರ್.ಪುರದ ಟಿನ್ ಫ್ಯಾಕ್ಟರಿ ಸಮೀಪ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಪೋಟೋ ಸಹಿತ ಮೊಬೈಲ್ ಸಂಖ್ಯೆಯನ್ನು ಕೊಟ್ಟಿದ್ದಾನೆ. ಈ ಮೊಬೈಲ್ ಸಂಖ್ಯೆ ಪಡೆದ ಸಂತ್ರಸ್ತೆ ಸೋದರ, ರೇಣುಕಾಸ್ವಾಮಿಗೆ ಬೈದಿದ್ದರಿಂದ ಕೂಡಲೇ ಸಂತ್ರಸ್ತೆಯನ್ನು ಇನ್ಸ್ಟಾಗ್ರಾಂನಲ್ಲಿ ಬ್ಲಾಕ್ ಮಾಡಿದ್ದ. ಈ ಬಗ್ಗೆ ಮಾರ್ಚ್ 25 ರಂದು ಬಸವೇಶ್ವರ ನಗರ ಠಾಣೆಗೆ ದೂರು ಸಲ್ಲಿಸಲು ಸಂತ್ರಸ್ತೆಯರು ತೆರಳಿದ್ದ ವೇಳೆ ಪೊಲೀಸರು ಲಘುವಾಗಿ ವರ್ತಿಸಿದ್ದರಿಂದ ಬೇಸರಗೊಂಡು ಅವರು ಹಿಂದಿರುಗಿದ್ದರು ಎಂದು ವರದಿಯಾಗಿದೆ.