ಬಡವರಿಗಾಗಿ ನಿಸ್ವಾರ್ಥ ಸೇವೆಗೈಯುತ್ತಿರುವ ಶಿವಾಯ ಫೌಂಡೇಶನ್ – ರಮೇಶ್ ಶೆಟ್ಟಿ ಸಿದ್ದಕಟ್ಟೆ ಜೊತೆ ಕಾರ್ಯದರ್ಶಿ ಬಂಟ್ಸ್ ಸಂಘ ಮುಂಬೈ

ಮುಂಬೈ; ಅಕ್ಟೋಬರ್ 2 ಬುಧವಾರದಂದು ಜೂಹಿ ನಗರ ಬಾಂಬೆ ಬಂಟ್ಸ್ ಅಸೋಸಿಯೇಷನ್ ಬಂಟ್ಸ್ ಸೆಂಟರ್ ನಲ್ಲಿ ಶಿವಾಯ ಫೌಂಡೇಶನ್ (ರಿ.)ಮುಂಬೈಯ ಆರನೇ ವಾರ್ಷಿಕೋತ್ಸವ ಸಂಭ್ರಮಾಚರಣೆ ನಡೆದಿದ್ದು ಈ ವೇಳೆ ದೀಪವನ್ನು ಪ್ರಜ್ವಲಿಸಿ ಭಕ್ತರಿಗೆ ಆಶೀರ್ವಚನ ನೀಡಿ ಮಾತನಾಡಿದ ಒಡಿಯೂರು ಮಹಾಸಂಸ್ಥಾನಂ ನ ಶ್ರೀ ಗುರುದೇವಾನಂದ ಸ್ವಾಮೀಜಿ ತ್ಯಾಗ ಮತ್ತು ಸೇವೆಯ ಆಚರಣೆ ಶಿವಾಯ ಫೌಂಡೇಶನ್ ನಿಂದ ಆಗುತ್ತಿದ್ದು ಅರ್ಹರನ್ನು, ಅಶಕ್ತರನ್ನು ಗುರುತಿಸಿ ಮಾಡುವ ಈ ಫೌಂಡೇಶನ್ನ ಸೇವೆಯು ಎಲ್ಲರಿಗೂ ಮಾದರಿ. ಬಡವರ ಕಣ್ಣೀರು ಒರೆಸುವ ಸೇವೆಯೇ ಭಗವಂತನ ಸೇವೆ. ಇದನ್ನು ಶಿವಾಯ ಫೌಂಡೇಶನ್ ತಮ್ಮ ಸಮಾಜ ಪರ ಕಾರ್ಯವೈಖರಿಯಿಂದ ತೋರಿಸಿಕೊಟ್ಟಿದೆ. ನಮ್ಮ ಸೇವೆಯೇ ಸಾಧನೆಯಾಗಬೇಕು ಎಂದು ಹೇಳಿದರು.


ಶಿವಾಯ ಫೌಂಡೇಶನ್ ನ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ, ಪಾಲಿಮಾರು ಅವರು ಮಾತನಾಡಿ ಸಾಮಾಜಿಕ ಬದ್ಧತೆಯೊಂದಿಗೆ ಬದುಕು ಕಟ್ಟಿಕೊಳ್ಳಬೇಕೆಂಬ ಸದುದ್ದೇಶದಿಂದ 11ಮಂದಿ ಸೇರಿ ದಾದರ್ ನಲ್ಲಿರುವ ದೇಶದ ನಾನಾ ಭಾಗಗಳಿಂದ ಬರುವ ಕ್ಯಾನ್ಸರ್ ರೋಗಗಳಿಗೆ ಆಶ್ರಯ ನೀಡುತ್ತಿರುವ ಸಂತ ಘಾಡ್ಗೆ ಮಹಾರಾಜ್ ಆಶ್ರಮದಲ್ಲಿ ಶಿವಾಯ ಫೌಂಡೇಶನ್ ಸಂಸ್ಥೆಯನ್ನು ಸ್ಥಾಪಿಸಿದ್ದು ಆರಂಭದಲ್ಲಿ ನಾವು ವೈದ್ಯಕೀಯ ಸೇವೆಗೆ ಹೆಚ್ಚು ಮಹತ್ವ ನೀಡಿದ್ದೆವು. ಕ್ರಮೇಣ ಶೈಕ್ಷಣಿಕ ಸೇವೆ ಅಲ್ಲದೆ ಬುದ್ಧಿಮಾಂದ್ಯ ಮಕ್ಕಳ ಶಾಲೆಗೆ ಭೇಟಿ ನೀಡಿ ಸಹಾಯವನ್ನು ನೀಡಲು ನಿರ್ಧರಿಸಿ ತದನಂತರ ವಿಧವ ವೇತನ, ಆರ್ಥಿಕವಾಗಿ ಹಿಂದುಳಿದವರನ್ನು ಗುರುತಿಸಿ ರೇಷನ್ ನೀಡುವ ಕಾರ್ಯವನ್ನು ಪ್ರಾರಂಭಿಸಿದೆವು. ಬೀದಿಬದಿ ನಿರಾಶ್ರಿತರಿಗೆ ಮತ್ತು ಟಾಟಾ, ಕೆ.ಇ.ಎಮ್ ನಂತಹ ಆಸ್ಪತ್ರೆಯ ಹೊರರೋಗಿಗಳಿಗೆ ಒಂದು ಹೊತ್ತಿನ ಊಟ ಒದಗಿಸುವ ಶಿವಾಯ ಫುಡ್ ಡ್ರೈವ್ ನಮ್ಮ ಮಹತ್ವಕಾಂಕ್ಷಿ ಯೋಜನೆಯಾಗಿದೆ. ನಮ್ಮ ಫೌಂಡೇಶನ್ ನ ಸುಮಾರು 100 ಮಂದಿ ಸಮಾನ ಮನಸ್ಕ ಸದಸ್ಯರು ತಮ್ಮ ಹುಟ್ಟುಹಬ್ಬ ಅಲ್ಲದೆ ಇತರ ಹಬ್ಬ ಹರಿದಿನಗಳೆಂದು ಅವರವರ ಮನೆಯಲ್ಲಿ ಆಚರಿಸದೆ ಸದಸ್ಯರೆಲ್ಲ ಸೇರಿ ವೃದ್ಧಾಶ್ರಮ ಅನಾಥಾಶ್ರಮಗಳಲ್ಲಿ ಆಚರಣೆ ಮಾಡುತ್ತಾ ಬಂದಿದ್ದು ನಮ್ಮ ಸದಸ್ಯರೆಲ್ಲರೂ ತಮ್ಮ ದುಡಿಮೆಯ ಅಲ್ಪಾಂಶವನ್ನು ಸಮಾಜಪರ ಕಾರ್ಯಗಳಿಗೆ ಉಪಯೋಗಿಸುತ್ತಿದ್ದಾರೆ ಎನ್ನುವುದೇ ವಿಶೇಷವಾಗಿದೆ. ನಮ್ಮ ವಿವಿಧ ರೀತಿಯ ಸಾಮಾಜಿಕ ಕೆಲಸ ಕಾರ್ಯಗಳನ್ನು ಮೆಚ್ಚಿ ಅನೇಕ ಮಂದಿ ನಮ್ಮ ಜೊತೆಗೆ ಕೈಜೋಡಿಸಿ ಆರ್ಥಿಕ ಸಹಾಯವನ್ನು ಒದಗಿಸುತ್ತಿದ್ದಾರೆ. ಅವರೆಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತಾ ಇದೇ ರೀತಿ ನಾವು ಮಾಡುವ ಕಾರ್ಯಗಳಿಗೆ ನಿಮ್ಮೆಲ್ಲರ ಸಹಕಾರ ಪ್ರೋತ್ಸಾಹ ಇರಲಿ ಎಂದು ಮನವಿ ಮಾಡಿದರು.

ಬಂಟರ ಸಂಘ ಮುಂಬೈಯ ಮೀರಾಬಾಯಂದರ್ ಪ್ರಾದೇಶಿಕ ಸಮಿತಿಯ ಜೊತೆ ಕಾರ್ಯದರ್ಶಿ ರಮೇಶ್ ಶೆಟ್ಟಿ ಸಿದ್ದಕಟ್ಟೆ ಮಾತನಾಡಿ ಬಡವರಿಗಾಗಿ ನಿಸ್ವಾರ್ಥ ಸೇವೆಗೈಯುತ್ತಿರುವ ಶಿವಾಯ ಫೌಂಡೇಶನ್ ಗೆ ಎಲ್ಲರು ಪ್ರೋತ್ಸಾಹ ಸಹಕಾರವನ್ನು ನೀಡಿ ಅವರು ಮಾಡುತ್ತಿರುವ ಸಮಾಜ ಪರ ಚಟುವಟಿಕೆಗಳಲ್ಲಿ ಎಲ್ಲರೂ ಕೈಜೋಡಿಸೋಣ ಎಂದು ಹೇಳಿದರು.

ಶಿವಾಯ ಫೌಂಡೇಶನ್ ವತಿಯಿಂದ ಬಾಂಬೆ ಬಂಟ್ಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಶ್ಯಾಮ ಎನ್ ಶೆಟ್ಟಿ, ನವೀಮುಂಬೈ ಮಾಜಿ ನಗರ ಸೇವಕ ರಂಗೋಲಿ ಸುರೇಶ್ ಜೆ ಶೆಟ್ಟಿ, ಸಮಾಜಸೇವಕ ಜಯ ಕರ್ನಾಟಕ ಜನಪರ ವೇದಿಕೆ ಉಪಾಧ್ಯಕ್ಷ ಪ್ರವೀಣ್ ಶೆಟ್ಟಿ ನಿಡಗೋಡು ಅವರನ್ನು ಶಾಲು ಹೊಂದಿಸಿ ಫಲ ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.















