ಭಾಗ 570
ಭರತೇಶ ಶೆಟ್ಟಿ ,ಎಕ್ಕಾರು

ಯಾಗಾಶ್ವ ಮುಂದೆ ಮುಂದೆ ಸಾಗುತ್ತಾ ಸುಂದರವಾದ ಗಿರಿವನ, ಗುಡ್ಡ ಬೆಟ್ಟಗಳನ್ನು ದಾಟಿ, ಬಯಲು ಪ್ರದೇಶವನ್ನುತ್ತರಿಸಿ ರತ್ನಪುರಿ ಎಂಬ ಪಟ್ಟಣದತ್ತ ಮುಖ ಮಾಡಿತು.
ರತ್ನಪುರಿ ಅಂತಿಂತಹ ಪಟ್ಟಣವಲ್ಲ. ಸಮರ್ಥ ರಾಜನ ಆಳ್ವಿಕೆಯಲ್ಲಿ ಸರ್ವ ವಿಚಾರದಲ್ಲೂ ಸಮೃದ್ಧವಾದ, ಬಲಾಢ್ಯವಾದ ಸಾಮ್ರಾಜ್ಯ. ಪರಮ ಧಾರ್ಮಿಕನೂ, ಪರಾಕ್ರಮಿಯೂ ಆದ ಮಯೂರಧ್ವಜ ರತ್ನಪುರಿಯ ಮಹಾರಾಜ. ಕುಮುದ್ವತಿ ಆತನ ಮಹಾರಾಣಿ. ತಾಮ್ರಧ್ವಜನೆಂಬ ಅತುಲ ವಿಕ್ರಮಿಯಾದ ಮಗನೂ ಇದ್ದಾನೆ. ತಂದೆಯನ್ನೇ ಅನುಸರಿಸಿ ಪ್ರಜಾಪರಿಪಾಲಕನೂ, ಧರ್ಮಿಷ್ಠನೂ, ಹರಿಭಕ್ತನೂ ಆಗಿದ್ದ ತಾಮ್ರಧ್ವಜ ತಂದೆಗೆ ತಕ್ಕ ಮಗನಾಗಿ ಸತ್ಕೀರ್ತಿವಂತನಾಗಿದ್ದ. ರತ್ನಪುರಿ ಸಾಮ್ರಾಜ್ಯ ಎಷ್ಟು ಧರ್ಮಾತ್ಮರಿಂದ ತುಂಬಿದೆ ಎಂದರೆ ಇಲ್ಲಿನ ಜನರೂ ಸತ್ಯ ಸಂಧರೂ, ಪ್ರಭುಭಕ್ತಿ ಪರಾಯಾಣರೂ, ದೇಶ ಭಕ್ತರೂ, ದೈವ ಭಕ್ತರೂ ಆಗಿದ್ದು ಸುಖದ ಸಾಗರವಾಗಿತ್ತು. ಪ್ರಜೆಗಳು ದೇಹ ದಣಿಯುವಷ್ಟು ದುಡಿದು ರಾಜ್ಯದ ಧನಸಂಪತ್ತಿನ ವೃದ್ಧಿಗೂ ಕಾರಣರಾಗಿದ್ದರು. ಕೃಷಿ, ಗೋವು ಸಂಪತ್ತು, ಕುಶಲ ಕರ್ಮಿಗಳು ಹೀಗೆ ಯಾವ ವಿಭಾಗದಲ್ಲೂ ರತ್ನಪುರಿಯಲ್ಲಿ ಕೊರತೆ ಇರಲಿಲ್ಲಯೋ
ಇಂತಹ ಸಕಲ ಗುಣ ಸಂಪನ್ನವಾದ ಮಯೂರಧ್ವಜನ ಆಸ್ಥಾನಕ್ಕೆ ಮಹರ್ಷಿ ನಾರದರು ಆಗಮಿಸಿದ್ದರು. ನಾರದರ ಮುಖೇನ ಶ್ರೀ ಕೃಷ್ಣನ ಮಹಿಮೆಯ ಬಹಳಷ್ಟು ಕಥೆಗಳನ್ನು ಕೇಳಿ ಕೇಳಿ ಒಮ್ಮೆ ಜೀವನದಲ್ಲಿ ಶ್ರೀಕೃಷ್ಣನನ್ನು ನೋಡಲೇ ಬೇಕು ಎಂಬ ಮಹದಾಸೆಯನ್ನೇ ಬೆಳೆಸಿಕೊಂಡಿದ್ದ. ಸಮೀಪದ ರಾಜ್ಯಗಳಲ್ಲಿ ಏನಾದರೂ ಕೃಷ್ಣನ ಲೀಲೆಗಳು ಸಂಭವಿಸಿದಾಗ ವರ್ತಮಾನ ಕೇಳಿ ತಿಳಿದರೂ ಕಣ್ಣಾರೆ ಕಾಣುವ ಭಾಗ್ಯ ದೊರೆಯದೆ ಬಹಳಷ್ಟು ದುಃಖಕ್ಕೆ ಒಳಗಾಗಿದ್ದ. ಹಾಗಿದ್ದರೆ ಶ್ರೀಕೃಷ್ಣನನ್ನು ಕಾಣಬೇಕಾದರೆ ಒಂದೋ ನಾನು ಅವನಿದ್ದಲ್ಲಿಗೆ ಹೋಗಬೇಕು ಇಲ್ಲಾ ದೇವನೇ ನಮ್ಮ ಬಳಿ ಬರಬೇಕು. ಹೀಗೆ ಯೋಚಿಸಿ ಈ ವರೆಗೆ ನಿರಂತರ ಏಳು ಬಾರಿ ಅಶ್ವಮೇಧ ಯಾಗ ವಿರಚಿಸಿದ. ತಾಮ್ರಧ್ವಜನಂತಹ ಪರಾಕ್ರಮಿಯ ರಕ್ಷಣೆಯಲ್ಲಿ ದಿಗ್ವಿಜಯ ಬಹಳಷ್ಟು ಸುಲಭವಾಗಿಯೇ ಸಾಗುತ್ತಿತ್ತು. ಏಳನೆಯ ಬಾರಿ ಅಶ್ವಮೇಧ ಯಾಗ ಸಂಪನ್ನಗೊಂಡರೂ ಹರಿದರ್ಶನದ ಭಾಗ್ಯ ಸಿಗಲಿಲ್ಲವಲ್ಲ ಎಂದು ಮಯೂರಧ್ವಜ ಬಹಳಷ್ಟು ಖಿನ್ನತೆಗೆ ಒಳಗಾಗಿ ಬಿಟ್ಟಿದ್ದ. ಇದಾಗಿ ಸ್ವಲ್ಪ ದಿನದಲ್ಲಿ ಮತ್ತೆ ರತ್ನಪುರಿಗೆ ಆಗಮಿಸಿದ ಮಹರ್ಷಿ ನಾರದರು ಎಂಟನೆಯ ಅಶ್ವಮೇಧ ಆರಂಭಿಸುವಂತೆ ಸೂಚನೆ ನೀಡಿದರು. ಮಾತ್ರವಲ್ಲ ಈ ಬಾರಿ ನಿನ್ನ ಆಸೆ ಕೈಗೂಡುವುದೆಂದು ತಿಳಿಸಿದರು.
ಅಂತೆಯೇ ನರ್ಮದಾ ನದಿ ತಟದಲ್ಲಿ ಯಾಗಶಾಲೆ ನಿರ್ಮಿಸಿ ವಿಧಿವತ್ತಾಗಿ ಯಾಗ ಆರಂಭಿಸಿ ದಿವ್ಯಾಶ್ವವನ್ನು ಪೂಜಿಸಿ ಬಿಡಲಾಯಿತು. ಮಹಾರಾಜ ಮಯೂರಧ್ವಜನ ಮಗ ತಾಮ್ರಧ್ವಜ ಮತ್ತೆ ಯಾಗಾಶ್ವದ ಬೆಂಗಾವಲಿಗನಾಗಿ ಎಂಟನೆಯ ಅಶ್ವಮೇಧಕ್ಕೆ ಹೊರಟನು.
ನರ್ಮದೆಯ ತಟಿ ಪ್ರದೇಶವನ್ನು ದಾಟಿ ಬಯಲು ಪ್ರದೇಶದತ್ತ ಬರುತ್ತಿರುವಂತೆಯೇ ಅತ್ತ ಪಾಂಡವರ ಅಶ್ವಮೇಧದ ಕುದುರೆ – ಇತ್ತ ಮಯೂರಧ್ವಜನ ಅಶ್ವಮೇಧದ ಕುದುರೆ ಮುಖಾಮುಖಿ ಆಯಿತು.








































