ಕಥೆ (ಭಾಗ- 28)
ಚೇತನ್ ವರ್ಕಾಡಿ

ತಾನು ಇಷ್ಟ ಪಟ್ಟ ಹುಡುಗಿಯನ್ನೇ ಹೃದಯದೇಗುಲದ ಒಳಗಿಟ್ಟು ಪೂಜಿಸುತ್ತಿದ್ದ ಎಂಬ ಸತ್ಯಾಂಶದ ಒಂದು ಸಣ್ಣ ಸುಳಿವೂ ಮಿಥುನ್ಗೆ ತಿಳಿಯದೆ ಹೋಯಿತು.ಮಂಗಳಳನ್ನು ಮಧುವಿನ ಮನೆಗೆ ಸೇರಿಸಿ ಮತ್ತೆ ತನ್ನ ಕೆಲಸದತ್ತ ಬೆಂಗಳೂರಿಗೆ ಮುಖಮಾಡಿದ.ಹಳ್ಳಿ ಹುಡುಗಿಗೆ ಪೇಟೆಯ ಪ್ಯಾಶನ್ ಲೋಕಕ್ಕೆ ಬದಲಾಗಲು ಸ್ವಲ್ಪ ಕಷ್ಟವಾಯಿತು!ಆದರೂ ಸುಗಂಧಿಯೊಂದಿಗೆ ಸೇರಿಕೊಂಡು ಅವಳ ಎಲ್ಲಾ ಕೆಲಸಕಾರ್ಯಗಳಲ್ಲೂ ಭಾಗಿಯಾಗಿ ಒಬ್ಬಳು ಮನೆಕೆಲಸದವಳಂತೆ ನೋಡಿಕೊಳ್ಳದೆ ಅವಳೂ ಆ ಮನೆಮಗಳಂತಾದಳು.ಇತ್ತ ಮಧುವಿನ ಎಲ್ಲಾ ಕೆಲಸವನ್ನು ತಾಯಿ ಸುಗಂಧಿ ಮಾಡಿದರೆ!ಅಡುಗೆ ಕೆಲಸ ಮನೆಕೆಲಸ ಎಲ್ಲವನ್ನೂ ಮಂಗಳ ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಿದ್ದಳು.ಹಳ್ಳಿಯ ಶುಚಿರುಚಿಯಾದ ಬಗೆ ಬಗೆಯ ತಿಂಡಿತಿನಸುಗಳನ್ನು ತಿನ್ನುವ ಭಾಗ್ಯ ಸೋಮಶೇಖರರಾಯರಿಗೂ,ಸುಗಂಧಿಗೂ ಒದಗಿಬಂತು.ಆದರೆ ಕೈ ತುತ್ತು ತಿನ್ನುವುದಕ್ಕೂ ತಾಯಿಯನ್ನೆ ಅವಲಂಬಿಸಿದ ಮಧುವಿಗೆ ಮಂಗಳಳ ಕೈಯಿಂದ ಮಾಡಿದ ಅಡುಗೆರುಚಿಯನ್ನು ಸವಿದರೂ ಪ್ರತ್ಯುತ್ತರ ನೀಡದ ಪರಿಸ್ಥಿತಿ ಅವನದ್ದು.ಹೆತ್ತ ಕರುಳು ಹೊತ್ತ ಹರಕೆಗಳು ಅದೆಷ್ಟೋ ಲೆಕ್ಕ ಸಿಗದಷ್ಟು..
ಮಧುವಿನ ನಗು ಕಾಣದೆ ಆ ಮನೆ ಅದೇಕೋ ಅಳುವಂತಿತ್ತು.ಪ್ರತಿದಿನ ಮಿಥುನ್ ಸುಗಂಧಿಗೆ ಪೋನ್ ಮಾಡಿ ಗೆಳೆಯನ ಬಗ್ಗೆ ವಿಚಾರಿಸುತ್ತಿದ್ದರೆ!ಅತ್ತ ರಾಘವ ಮತ್ತು ಯಶೋಧ ಮುದ್ದು ಮಗಳು ಮಂಗಳಳಿಗೆ ಕರೆನೀಡಿ ಒಂದಷ್ಟು ಹರಟೆ ಹೊಡೆಯುತ್ತಿದ್ದರು..
ದಿನಗಳು ಉರುಳಿದವು…!ಮಧುವಿನ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿಲ್ಲ…
ಅದೊಂದು ದಿನ ಸುಗಂಧಿ ಮನೆಯಲ್ಲಿ ಇಲ್ಲದ ಸಮಯವದು…..!ತಂದೆ ಸೋಮರೇಖರರಾಯರು ಅಂಗಳದಲ್ಲಿದ್ದ ಹೂವಿನ ಗಿಡಕ್ಕೆ ನೀರು ಹಾಕುತ್ತಿದ್ದರು.ಮಂಗಳ ಮನೆಕೆಲಸದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಳು.ಮಧುವಿನ ರೂಮಿನೊಳಗಿನಿಂದ ಅದೇನೋ ಶಬ್ದ ಸಡನ್ನಾಗಿ ಮಂಗಳಳ ಕಿವಿಗೆ ಕೇಳಿದ್ದೇ ತಡ ಓಡಿ ಹೋಗಿ ಮಧುವನ್ನು ನೋಡಬೇಕಾದರೆ ಆಕೆಯ ಕಣ್ಣುಗಳು ತುಂಬಿ ಬಂದವು….?
(ಮುಂದುವರಿಯುವುದು)













