
ಶ್ರೀ ಭುವನೇಂದ್ರ ಕಾಲೇಜಿನ ಐಕ್ಯೂಎಸಿ ಆಶ್ರಯದಲ್ಲಿ, ಅಪ್ ಫ್ರಂಟ್ ಸಂಸ್ಥೆ ಬೆಂಗಳೂರು, ಅನುದೀಪ್ ಫೌಂಡೇಶನ್, ಎಡಿಬಿ ಬ್ಯಾಂಕ್ ಇದರ ಸಹಯೋಗದಲ್ಲಿ ಭುವನೇಂದ್ರ ಕಾಲೇಜಿನ ವಿದ್ಯಾರ್ಥಿಗಳಿಗೆ ಕೃತಕ ತಂತ್ರಜ್ಞಾನಕ್ಕೆ ಸಂಬಂಧಿಸಿದ ನಾಲ್ಕು ದಿನಗಳ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮವು ನೆರವೇರಿತು.
ಅಪ್ ಫ್ರಂಟ್ ಸಂಸ್ಥೆಯ ಸೀನಿಯರ್ ಪ್ರೋಗ್ರಾಂ ಮೆನೇಜರ್ ತಹಸೀನಾ ಎಸ್, ಮಾತನಾಡಿ, ಎಐ ತಂತ್ರಜ್ಞಾನ ಇಂದಿನ ದಿನಗಳಲ್ಲಿ ಎಷ್ಟು ಮಹತ್ವ ಪಡೆದಿದೆಯೆಂದರೆ, ಅದರ ಕಲಿಕೆಯನ್ನು ಮುಂದೂಡಿದರೆ ನಾಳೆ ಭವಿಷ್ಯದ ಬದುಕಿನ ಉದ್ಯೋಗಕ್ಕೆ ತೊಂದರೆಯಾಗಬಹುದು. ಹಾಗೆ ಆಗಬಾರದು ಅನ್ನುವ ಕಾರಣಕ್ಕೆ ಕಾಲೇಜು ನಿಮಗೆ ಈ ಅವಕಾಶವನ್ನು ಕೊಟ್ಟಿದೆ. ಕೇವಲ ಬಿ. ಸಿ. ಎ. ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ಎಲ್ಲರಿಗೂ ಒದಗಿಸಿಕೊಟ್ಟಿರುವುದರಿಂದ ಎಲ್ಲರೂ ಪ್ರಯೋಜನ ಪಡೆದುಕೊಂಡರೆ, ಕಾಲೇಜು ಮತ್ತು ನಮ್ಮ ಸಂಸ್ಥೆಗಳ ಉದ್ದೇಶ ಸಾರ್ಥಕವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ ಎ. ಕೋಟ್ಯಾನ್ ಅವರು ಮಾತನಾಡುತ್ತಾ, ಕಾಲೇಜಿನಿಂದ ಹೊರಹೋದ ಎಲ್ಲರಿಗೂ ಉದ್ಯೋಗ ದೊರೆಯುವುದು ಅಸಾಧ್ಯವಾದಾಗ ಎಲ್ಲರೂ ಉದ್ಯೋಗಸ್ಥರಾಗಬೇಕೆಂಬ ನೆಲೆಯಲ್ಲಿ ಕಾಲೇಜು ಇಂತಹ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅನ್ನುವುದು ಎಲ್ಲ
ಕ್ಷೇತ್ರಕ್ಕೂ ಲಗ್ಗೆಯಿಟ್ಟಿರುವುದರಿಂದ ಇಂದಿನ ದಿನಗಳಲ್ಲಿ ಇದರ ಅಗತ್ಯಹೆಚ್ಚು ಇದೆ. ತಂತ್ರಜ್ಞಾನದ ಹೊಸತನದ ಕೌಶಲಕ್ಕೆ ಇವತ್ತು ನಾವು ಬೆನ್ನು ಹಾಕಿದರೆ, ನಮಗೆ ದೊಡ್ಡ ನಷ್ಟವಾಗುವ ಸಾಧ್ಯತೆಯಿದೆ. ಭವಿಷ್ಯದಲ್ಲಿ ಅತೀ ಅಗತ್ಯವಿರುವ ಎಐ ತಂತ್ರಜ್ಞಾನ ನಮ್ಮ ವಿದ್ಯಾರ್ಥಿಗಳಿಗೆ ಕಾಲೇಜಿನ ಹಂತದಲ್ಲಿಯೇ ದೊರಕಲಿ ಎನ್ನುವ ಕಾಲೇಜಿನ ಆಶಯದಂತೆ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಸರಿಯಾಗಿ
ಪಡೆದುಕೊಳ್ಳಬೇಕಾಗಿದೆ ಎಂದರು.
ವೇದಿಕೆಯಲ್ಲಿ ಅಪ್ ಫ್ರಂಟ್ ಸಂಸ್ಥೆಯ ಪ್ರೋಗ್ರಾಮರ್ ಆದ ರೋಶನಿ ಉಪಸ್ಥಿತರಿದ್ದರು.
ಐಕ್ಯೂಎಸಿ ನಿರ್ದೇಶಕರೂ, ಕಾರ್ಯಕ್ರಮ ಸಂಯೋಜಕರೂ ಆದ ಪ್ರೊ. ಲಕ್ಷ್ಮೀನಾರಾಯಣ ಕೆ.ಎಸ್. ಸ್ವಾಗತಿಸಿದರು. ಕಾಲೇಜಿನ ಬಿ.ಎ., ಬಿ.ಕಾಂ, ಬಿ.ಎಸ್ಸಿ, ಬಿ.ಸಿ.ಎ ಹಾಗೂ ಬಿ.ಬಿ.ಎ. ವಿದ್ಯಾರ್ಥಿಗಳು ಈ ತರಬೇತಿ ಶಿಬಿರದಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕಿ, ಮೀನಾಕ್ಷಿ ಕಾರ್ಯಕ್ರಮ ನಿರೂಪಿಸಿದರು . ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ, ಡಾ. ಈಶ್ವರ್ ಭಟ್ ಧನ್ಯವಾದ ಸಮರ್ಪಿಸಿದರು.



















