
ಮಂಗಳೂರು: ಬೈಕಂಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೇರಳದ ಚಿನ್ನದ ವ್ಯಾಪಾರಿ ವಿಕಾಸ್ ಹಾಗೂ ಅವರ ಕುಟುಂಬವನ್ನು ಗುರಿಯಾಗಿಸಿ ನಡೆದ ದರೋಡೆ ಪೂರ್ವಯೋಜಿತ ಕೃತ್ಯವಾಗಿರಬಹುದು ಎಂಬ ಅನುಮಾನ ಬಲಗೊಂಡಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಬಂಟ್ವಾಳದಲ್ಲಿ ಅಪಹರಣಕ್ಕೊಳಗಾಗಿದ್ದ ಸ್ವಿಫ್ಟ್ ಡಿಸೈರ್ ಕಾರು ಪತ್ತೆಯಾಗಿದ್ದು, ಮಹತ್ವದ ಸುಳಿವುಗಳು ಲಭ್ಯವಾಗಿವೆ.
ಬಂಟ್ವಾಳದಲ್ಲಿ ಪತ್ತೆಯಾದ ಕಾರು:
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಪನೆ ಸಮೀಪ ಕಾರನ್ನು ಬಿಟ್ಟು ದರೋಡೆಕೋರರು ಪರಾರಿಯಾಗಿದ್ದಾರೆ. ಕಾರು ಪರಿಶೀಲಿಸಿದಾಗ ಸೀಟ್ ಕವರ್ ಹಾಗೂ ಡಿಕ್ಕಿಯ ಒಳಭಾಗವನ್ನು ಹರಿದು ಸಂಪೂರ್ಣ ಶೋಧಿಸಿರುವುದು ಕಂಡುಬಂದಿದೆ. ಕಾರಿನಲ್ಲಿ ಗೋಲ್ಡ್ ಬಿಸ್ಕತ್ ಅಡಗಿಸಿಡಲಾಗಿದೆ ಎಂಬ ಮಾಹಿತಿ ದರೋಡೆಕೋರರಿಗೆ ಮೊದಲೇ ಇತ್ತೇ ಎಂಬ ಅನುಮಾನ ಪೊಲೀಸರಿಗೆ ಮೂಡಿದೆ.
ಕಾರೇ ಗುರಿ, ಚಿನ್ನಾಭರಣಕ್ಕೆ ಕೈ ಹಾಕಿಲ್ಲ.!
ವ್ಯಾಪಾರಿ ವಿಕಾಸ್, ಅವರ ಪತ್ನಿ ಹಾಗೂ ಮಗ ಧರಿಸಿದ್ದ ಚಿನ್ನಾಭರಣವನ್ನು ದರೋಡೆಕೋರರು ಕಸಿದುಕೊಂಡಿಲ್ಲ. ಮುಂಜಾನೆ ಬೈಕಂಪಾಡಿ ಬಳಿ ವಿಕಾಸ್ ಅವರನ್ನು ಕಾರಿನಿಂದ ಇಳಿಸಿ, ವಾಹನದೊಳಗೆ ಚಿನ್ನಕ್ಕಾಗಿ ಶೋಧ ನಡೆಸಿದ್ದಾರೆ. ಬಳಿಕ ಪತ್ನಿ ಮತ್ತು ಮಗನನ್ನು ದಾರಿಯಲ್ಲಿ ಇಳಿಸಿ ಕಾರಿನೊಂದಿಗೆ ಪರಾರಿಯಾಗಿದ್ದಾರೆ.
ಒಳಮಾಹಿತಿ ಆಧರಿಸಿ ಕೃತ್ಯ?
ಮಹಾರಾಷ್ಟ್ರದಿಂದ ಕೇರಳಕ್ಕೆ ಮರಳುತ್ತಿದ್ದ ವಿಕಾಸ್ ಅವರ ಕಾರಿನಲ್ಲಿ 180 ಗ್ರಾಂ ಚಿನ್ನಾಭರಣ ಮಾತ್ರವಿತ್ತೇ ಅಥವಾ ಹೆಚ್ಚಿನ ಪ್ರಮಾಣದ ಚಿನ್ನ ಸಾಗಿಸಲಾಗುತ್ತಿತ್ತೇ ಎಂಬ ಬಗ್ಗೆ ಪಣಂಬೂರು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಎರಡು ಇನ್ನೋವಾ ಹಾಗೂ ಒಂದು ಸ್ವಿಫ್ಟ್ ಕಾರಿನಲ್ಲಿ ಬಂದಿದ್ದ ದರೋಡೆಕೋರರಿಗೆ ವ್ಯಾಪಾರಿಯ ಸಂಚಾರದ ಬಗ್ಗೆ ನಿಖರ ಮಾಹಿತಿ ಇತ್ತು ಎಂಬ ಶಂಕೆಯೂ ವ್ಯಕ್ತವಾಗಿದೆ.








































