“ರಾಜ್ಯ ಸರಕಾರವು ಭೌತಿಕ ಸಮೀಕ್ಷೆ ನಡೆಸಿ ಜನವಸತಿ ಪ್ರದೇಶ ವಿರಹಿತಗೊಳಿಸಿ ಜನರ ಆತಂಕವನ್ನು ನಿವಾರಿಸಬೇಕು”
ಮಲೆಕುಡಿಯ ಸಂಘದ ಜಿಲ್ಲಾಧ್ಯಕ್ಷ, ಗಂಗಾಧರ ಗೌಡ ಆಗ್ರಹ

ಕೇಂದ್ರ ಸರ್ಕಾರವು ಪರಿಸರ ಸೂಕ್ಷ್ಮ ವಲಯವನ್ನು ನಿಗದಿಪಡಿಸಿ ಏಳನೇ ಬಾರಿಗೆ ಕರಡು ಅಧಿಸೂಚನೆ ಪ್ರಕಟಿಸಿದ್ದು ಪಶ್ಚಿಮಘಟ್ಟದ ಗ್ರಾಮಗಳ ರೈತರು, ಬುಡಕಟ್ಟು ಜನಾಂಗಗಳು, ಸಾರ್ವಜನಿಕರಲ್ಲಿ ತೀವ್ರ ಆತಂಕದ ವಾತಾವರಣ ನಿರ್ಮಾಣ ಆಗಿದೆ.
ಈ ಹಿಂದೆ 2024ರಲ್ಲಿ ಪ್ರಕಟ ಆಗಿದ್ದ ಕರಡು ಅಧಿಸೂಚನೆಯಲ್ಲಿ ಬಹುತೇಕ ಅಂಶಗಳೇ ಈ ಬಾರಿಯ ಕರಡಿನಲ್ಲೂ ಇವೆ. ಆದುದರಿಂದ ರಾಜ್ಯ ಸರ್ಕಾರವು ಜನರ ಆತಂಕ ನಿವಾರಿಸುವ ಉದ್ದೇಶದಿಂದ ಭೌತಿಕ ಸರ್ವೇಯನ್ನು ನಡೆಸಿ ಜನವಸತಿ ಪ್ರದೇಶಗಳನ್ನು ವಿರಹಿತಗೊಳಿಸಿ ಕೃಷಿ, ತೋಟಗಾರಿಕೆ ಚಟುವಟಿಕೆಗಳು, ಜೀವನೋಪಾಯ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಯೋಜನೆಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಹಾಗೂ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಬೇಕು.
ಕರಡು ಅಧಿಸೂಚನೆ ನಿಗದಿಪಡಿಸಿದ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮ ಸಭೆಗಳನ್ನು ನಡೆಸಿ ಕೂಡಲೇ ಆಕ್ಷೇಪಣೆ ಸಲ್ಲಿಸಲು ಗ್ರಾಮಸ್ಥರಿಗೆ ಅವಕಾಶ ನೀಡಬೇಕೆಂದು ರಾಜ್ಯ ಸರ್ಕಾರವನ್ನು ಮಲೆಕುಡಿಯ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ಗೌಡ ಒತ್ತಾಯಿಸಿದ್ದಾರೆ.

























































