
ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಸಿಜೆಪಿ ನೇತೃತ್ವದಲ್ಲಿ ದೇಶಾದ್ಯಂತ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಪ್ರತಿಭಟನೆ ಎನ್ಡಿಎ ಸರ್ಕಾರದ ವಿರುದ್ಧ ವ್ಯಾಪಕ ಚರ್ಚೆಗೆ ಕಾರಣವಾಗಿದ್ದ ಬೆನ್ನಲ್ಲೇ, ಯುವ ಸಮಾವೇಶವೊಂದರಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಜೆನ್-ಜಿ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಇತ್ತೀಚಿನ ಪ್ರತಿಭಟನೆಯಲ್ಲಿ ಭಾಗವಹಿಸಿದ ಯುವಕರನ್ನು ದೇಶವಿರೋಧಿಗಳು ಎಂದು ಕರೆಯುವ ಪ್ರವೃತ್ತಿಯನ್ನು ವಿರೋಧಿಸಿದ ಭಾಗವತ್, ಪ್ರತಿಭಟನೆ ನಡೆಸಿದ ಮಾತ್ರಕ್ಕೆ ಯಾರನ್ನೂ ದೇಶವಿರೋಧಿ ಎಂದು ಪರಿಗಣಿಸಲಾಗುವುದಿಲ್ಲ ಎಂದರು. ಜೆನ್-ಜಿ ಮತ್ತು ಜೆನ್ ಆಲ್ಫಾ ಪೀಳಿಗೆ ದೇಶಭಕ್ತಿ ಹಾಗೂ ಸಮಾಜಸೇವೆಯ ಕರೆಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಗುಣ ಹೊಂದಿದ್ದು, ಅವರು ನಮ್ಮ ಮುಂದಿನ ಪೀಳಿಗೆಯ ಶಕ್ತಿಯಾಗಿದ್ದಾರೆ ಎಂದು ಹೇಳಿದರು.
ಜೆನ್ ಜಿ ಪ್ರತಿಭಟಿಸಬಾರದು ಎಂದು ನಾನು ಹೇಳುವುದಿಲ್ಲ, ಆದರೆ ಪ್ರಜಾಪ್ರಭುತ್ವದಲ್ಲಿ ಏನನ್ನು ಹೇಗೆ ಮಾಡಬೇಕು ಎಂಬುದಕ್ಕೆ ಕೆಲವು ಮಾರ್ಗಗಳಿವೆ. ಸಂವಿಧಾನವನ್ನು ರೂಪಿಸಿದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾಷಣಗಳು ಈ ಬಗ್ಗೆ ನಮಗೆ ದಾರಿ ತೋರಿಸುತ್ತವೆ. ಜೆನ್ ಜಿ ವಿರೋಧಿಸುವುದಕ್ಕಾಗಿಯೇ ಧ್ವನಿ ಎತ್ತುತ್ತಿಲ್ಲ. ಅವರಿಗೆ ಕೆಲವು ಸಮಸ್ಯೆಗಳಿವೆ ಮತ್ತು ಅದನ್ನು ಸರಿಪಡಿಸಬೇಕಾಗಿದೆ ಎಂಬುದನ್ನು ನಾವೂ ಅರ್ಥ ಮಾಡಿಕೊಳ್ಳಬೇಕು. ಹೋರಾಟವು ನನ್ನ ಅಥವಾ ನಿಮ್ಮ ವಿರುದ್ಧವಾಗಿರಬಾರದು, ಬದಲಿಗೆ ವ್ಯವಸ್ಥೆಯನ್ನು ಸರಿಪಡಿಸುವುದಕ್ಕಾಗಿ ಇರಬೇಕು” ಎಂದು ಹೇಳಿದ್ದಾರೆ.

























































