ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣಕ್ಕೆ ಹೊಸ ತಿರುವು

ಪುಣೆ: ಪುಣೆಯ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದಲ್ಲಿ ಹೊಸ ಮಾಹಿತಿಯೊಂದು ಬೆಳಕಿಗೆ ಬಂದಿದೆ. ಆರೋಪಿ ಸಿಯಾ ಗೋಯಲ್, ಕೇತನ್ ಜೊತೆ ನಿಶ್ಚಿತಾರ್ಥವಾದ ಬಳಿಕವೇ ತನ್ನ ಪ್ರಿಯಕರ ಚೇತನ್ ಚೌಧರಿಯನ್ನು ರಹಸ್ಯವಾಗಿ ವಿವಾಹವಾಗಿದ್ದಳು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.
ಪೊಲೀಸರು ವಶಪಡಿಸಿಕೊಂಡ ಸಿಯಾಳ ಮೊಬೈಲ್ ಹಾಗೂ ವಾಟ್ಸಾಪ್ ಚಾಟ್ಗಳ ಪರಿಶೀಲನೆಯಲ್ಲಿ, ನಾಲ್ಕು ತಿಂಗಳ ಹಿಂದೆಯೇ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ಇಬ್ಬರೂ ಗುಟ್ಟಾಗಿ ಮದುವೆಯಾಗಿದ್ದ ಶಂಕೆಗೆ ಪೂರಕ ದಾಖಲೆಗಳು ಪತ್ತೆಯಾಗಿವೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ವಿಶೇಷ ವಿವಾಹ ಕಾಯ್ದೆಯಡಿ ಮದುವೆ ನೋಂದಣಿಯಾಗಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಮದುವೆ ದೃಢಪಟ್ಟರೆ, ಬಳಿಕ ನಡೆದ ಕೇತನ್-ಸಿಯಾ ನಿಶ್ಚಿತಾರ್ಥದ ಕಾನೂನುಬದ್ಧತೆಯ ಮೇಲೂ ಪ್ರಶ್ನೆ ಮೂಡಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಯಾಳ ಇಬ್ಬರು ಸ್ನೇಹಿತರನ್ನೂ ವಿಚಾರಣೆ ನಡೆಸಲಾಗುತ್ತಿದೆ.
ಸಿಯಾ ಮತ್ತು ಚೇತನ್ ಕಾಲೇಜು ದಿನಗಳಿಂದಲೇ ಪ್ರೀತಿಸುತ್ತಿದ್ದರು. ಕುಟುಂಬದ ವಿರೋಧದ ಭಯದಿಂದ ರಹಸ್ಯವಾಗಿ ಮದುವೆಯಾಗಿ, ಬಳಿಕ ರಾಜಸ್ಥಾನದಲ್ಲಿ ನೆಲೆಸುವ ಯೋಜನೆ ಹೊಂದಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ನವೆಂಬರ್ನಲ್ಲಿ ಕೇತನ್-ಸಿಯಾ ವಿವಾಹ ನಿಗದಿಯಾಗಿದ್ದರೂ, ಜೂನ್ 18ರಂದು ಲೋಹಗಢ ಕೋಟೆಯಲ್ಲಿ ಕೇತನ್ ಪ್ರಪಾತಕ್ಕೆ ಬಿದ್ದು ಮೃತಪಟ್ಟಿದ್ದ. ಆರಂಭದಲ್ಲಿ ಅಪಘಾತ ಎಂದು ಹೇಳಲಾಗಿದ್ದರೂ, ಸಿಸಿಟಿವಿ ಹಾಗೂ ಡಿಜಿಟಲ್ ಸಾಕ್ಷ್ಯಗಳ ಆಧಾರದಲ್ಲಿ ಇದು ಪೂರ್ವಯೋಜಿತ ಕೊಲೆ ಎಂಬುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.
ಇದೇ ವೇಳೆ, ಡಿಲೀಟ್ ಮಾಡಿದ್ದ ಮೊಬೈಲ್ ಡೇಟಾ ಮರುಪಡೆಯುತ್ತಿದ್ದಂತೆ ಸಿಯಾ ಮತ್ತು ಚೇತನ್ ಸಂಕೇತ ಭಾಷೆಯಲ್ಲಿ ಸಂವಹನ ನಡೆಸುತ್ತಿದ್ದ ಮಾಹಿತಿ ಕೂಡ ಲಭ್ಯವಾಗಿದೆ. ಜೂನ್ 14ರಂದೇ ಕೊಲೆ ಯತ್ನ ನಡೆದಿದ್ದು, ವಿಫಲವಾದ ಬಳಿಕ ಜೂನ್ 18 ರಂದು ಇಬ್ಬರು ಸೇರಿ ಕೊಲೆಯ ಸಂಚು ರೂಪಿಸಿ ಯಶಸ್ವಿಗೊಳಿಸಿದ್ದರು. ನಂತರ ಸಿಯಾ ಇದು ಅಪಘಾತ ಎಂದು ಕಟ್ಟುಕಥೆ ಹೆಣೆದಿದ್ದು ಆದರೆ ಆಕೆಯ ವರ್ತನೆಯು ಕೇತನ್ನ ಸಹೋದರಿ ಮತ್ತು ಕುಟುಂಬದವರಿಗೆ ಅನುಮಾನ ತರಿಸಿತು. ತಕ್ಷಣ ಅವರು ತನಿಖೆಗೆ ಒತ್ತಾಯಿಸಿದ್ದು ಇದರಿಂದ ಸಿಯಾ ಹಾಗೂ ಚೇತನ್ ಸಿಕ್ಕಿಹಾಕಿಕೊಂಡರು.











































