
ಹಾರೋಹಳ್ಳಿ: ಮುಖ್ಯಮಂತ್ರಿ ಆದ ಬಳಿಕ ಮೊದಲ ಬಾರಿಗೆ ಹಾರೋಹಳ್ಳಿ ಹಾಗೂ ಕನಕಪುರಕ್ಕೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್, ಜನರ ಪ್ರೀತಿ ಮತ್ತು ಬೆಂಬಲವನ್ನು ಸ್ಮರಿಸಿ ಭಾವುಕರಾದರು. ‘ನಿಮ್ಮ ಪಾಲಿಗೆ ನಾನು ಸಿ.ಎಂ ಅಲ್ಲ, ಸೇವಕ. ಕೊನೆಯುಸಿರು ಇರುವವರೆಗೂ ನಿಮ್ಮ ಮನೆ ಮಗನಾಗಿ ಸೇವೆ ಮಾಡುವೆ. ಇದು ಕೇವಲ ಎರಡು ವರ್ಷಕ್ಕಷ್ಟೇ ಅಲ್ಲ. 2028ಕ್ಕೂ ನಿಮ್ಮ ಆಶೀರ್ವಾದ ನನ್ನ ಮೇಲಿರಬೇಕು. ನನ್ನ ಶಕ್ತಿ, ಬದುಕು, ಉಸಿರು ಎಲ್ಲವೂ ನೀವೇ. ನಿಮ್ಮ ಸೇವಕನಾಗಿ ಋಣ ತೀರಿಸುತ್ತೇನೆ’ ಎಂದರು.
ಬೆಳಗ್ಗೆಯಿಂದ ರಾತ್ರಿ ತನಕ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಶಿವಕುಮಾರ್, ತಮ್ಮ ಗೆಲುವಿಗೆ ಕಾರಣರಾದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು. ಲೋಕಸಭೆ ಚುನಾವಣೆಯಲ್ಲಿ ಬೆಂಬಲ ನೀಡದವರ ಮೇಲೂ ಯಾವುದೇ ಬೇಸರ ಇಲ್ಲ ಎಂದು ಸ್ಪಷ್ಟಪಡಿಸಿದರು.
ತಮ್ಮ ಬದುಕಿನಲ್ಲಿ ಜನರ ಪಾತ್ರ ದೊಡ್ಡದು ಎಂದು ಹೇಳಿದ ಅವರು, ತಿಹಾರ್ ಜೈಲಿನಲ್ಲಿದ್ದ ವೇಳೆ ಕ್ಷೇತ್ರದ ಜನರು ಮಾಡಿದ ಪ್ರಾರ್ಥನೆ ಮತ್ತು ಬೆಂಬಲವನ್ನು ನೆನೆದರು. ಹಣ ಅಥವಾ ಅಧಿಕಾರಕ್ಕಿಂತ ಜನರ ಜೀವನದಲ್ಲಿ ಬದಲಾವಣೆ ತರುವುದು ತಮ್ಮ ಗುರಿ ಎಂದರು.
ಜಿಲ್ಲೆಗೆ ‘ಬೆಂಗಳೂರು ದಕ್ಷಿಣ’ ಎಂಬ ಗುರುತು ಬಂದ ಬಳಿಕ ಅಭಿವೃದ್ಧಿ ಮತ್ತು ಭೂಮಿಯ ಮೌಲ್ಯ ಹೆಚ್ಚಿದೆ ಎಂದು ಹೇಳಿದ ಅವರು, ಟೀಕೆಗಳು ತಾತ್ಕಾಲಿಕ, ಆದರೆ ಅಭಿವೃದ್ಧಿ ಕಾರ್ಯಗಳು ಶಾಶ್ವತ ಎಂದು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು.
ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳುವ ಬಗ್ಗೆ ಎಚ್ಚರಿಕೆ ನೀಡಿದ ಅವರು, ಸರ್ಕಾರಿ ಸೌಲಭ್ಯಗಳ ಪ್ರಯೋಜನ ಪಡೆಯಲು ಮತದಾರರ ನೋಂದಣಿ ಮಹತ್ವದ್ದಾಗಿದೆ ಎಂದು ತಿಳಿಸಿದರು.
































