
ರಾಯ್ಪುರ್: ಚತ್ತೀಸಘಡದ ಜಶಪುರ್ ಮತ್ತು ನಾರಾಯಣಪುರ ಪ್ರದೇಶಗಳ ಮಧ್ಯೆ ಖಾಸಗಿ ವಿಮಾನವೊಂದು ಪತನಗೊಂಡಿರುವ ಮಾಹಿತಿ ಹೊರಬಂದಿದೆ. ನಾರಾಯಣಪುರ ಠಾಣಾ ವ್ಯಾಪ್ತಿಯ ರತ್ನಪಹಲಿ ಅರಣ್ಯದಲ್ಲಿ ಈ ಅಪಘಾತ ಸಂಭವಿಸಿದ್ದು ಪ್ರಾಥಮಿಕ ವರದಿಗಳ ಪ್ರಕಾರ, ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿಲ್ಲ. ಕಡಿಮೆ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ವೇಳೆ ಪರ್ವತ ಪ್ರದೇಶಕ್ಕೆ ತಲುಪಿದಾಗ ಮರಕ್ಕೆ ಡಿಕ್ಕಿಯಾಗಿ ವಿಮಾನ ಕೆಳಗೆ ಬಿದ್ದಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ.
ವಿಮಾನದಲ್ಲಿದ್ದ ಪ್ರಯಾಣಿಕರು ಹಾಗೂ ಸಿಬ್ಬಂದಿ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಅಪಘಾತದ ನಂತರ ವಿಮಾನಕ್ಕೆ ಬೆಂಕಿ ತಗುಲಿದ್ದು, ಸಾವು-ನೋವುಗಳ ಬಗ್ಗೆ ಅಧಿಕೃತ ಮಾಹಿತಿ ಹೊರಬಂದಿಲ್ಲದಿದ್ದರೂ ಗಂಭೀರ ಅನಾಹುತದ ಆತಂಕ ಇದೆ.
ಅರಣ್ಯ ಪ್ರದೇಶವಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆ ವಿಳಂಬವಾಗಿದೆ. ಆದರೂ ಸ್ಥಳೀಯ ಆಡಳಿತ ಮತ್ತು ಪೊಲೀಸರು ಸ್ಥಳಕ್ಕೆ ತೆರಳಿ ಶೋಧ ಕಾರ್ಯ ಮುಂದುವರೆಸುತ್ತಿದ್ದಾರೆ. ವಿಮಾನ ಹಾಗೂ ಪ್ರಯಾಣಿಕರ ವಿವರಗಳನ್ನು ಸಂಗ್ರಹಿಸುವ ಕೆಲಸ ನಡೆಯುತ್ತಿದೆ.
ಸಿಂಗಲ್ ಎಂಜಿನ್ ಪ್ರೊಪೆಲ್ಲರ್ ವಿಮಾನಗಳು ಸಾಮಾನ್ಯವಾಗಿ ಕಡಿಮೆ ಎತ್ತರದಲ್ಲಿ ಹಾರುತ್ತವೆ. ಆದರೆ ಈ ಘಟನೆಯಲ್ಲಿ ಪೈಲೆಟ್ ಅಪಾಯ ಸೂಚನೆಗಳನ್ನು ಗಮನಿಸದೇ ಹಾರಾಟ ಮುಂದುವರಿಸಿದ್ದಾರೆಯೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.













