ವಾಹನ, ಕಲ್ಲು ಪೋಲಿಸರ ವಶಕ್ಕೆ: ಪ್ರಕರಣ ದಾಖಲು

ಕಾರ್ಕಳ: ನಗರ ಪೊಲೀಸರು ಕುಕ್ಕುಂದೂರು ಗ್ರಾಮದ ಅಯ್ಯಪ್ಪ ನಗರ ಶಂಕರಬೆಟ್ಟು ಎಂಬಲ್ಲಿನ ಗಣಿಗಾರಿಕಾ ಪ್ರದೇಶದಲ್ಲಿ ನಡೆಸುತ್ತಿದ್ದ ಅಕ್ರಮ ಕಲ್ಲು ಗಣಿಗಾರಿಕೆ, ಸಾಗಾಟ ಆರೋಪದಡಿ ಕೃತ್ಯಕ್ಕೆ ಬಳಸಿದ ವಾಹನ ಹಾಗೂ ಕಲ್ಲನ್ನು ಜಪ್ತಿ ಮಾಡಿ ಎಂಟು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಪೊಲೀಸ್ ಸಬ್ ಇನ್ಸ್ಪೆಕ್ಟರ್ ದಿಲೀಪ್ ಜಿ ಆರ್. ಅವರ ನೇತೃತ್ವದ ಪೊಲೀಸ್ ಸಿಬ್ಬಂದಿ ತಂಡವು ಕಾರ್ಕಳ ಪೊಲೀಸ್ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಡಾ. ಹರ್ಷ ಪ್ರಿಯವಂದಾ ಅವರ ನಿರ್ದೇಶನದಂತೆ ಶನಿವಾರ ಬೆಳಗ್ಗೆ ದಾಳಿ ನಡೆಸಿದ್ದು ಈ ವೇಳೆ ಸರಕಾರಿ ಪಾದೆಯಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಕೆಲವು ಮಂದಿ ಕಲ್ಲುಗಳನ್ನು ಲೋಡ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ವೇಳೆ ಸ್ಥಳದಲ್ಲಿ ಟಿಪ್ಪರ್ ಚಾಲಕ ಮಹಮ್ಮದ್ ರಫೀಕ್ (38) ಹಾಗೂ ಗೂಡ್ಸ್ ವಾಹನ ಚಾಲಕ ಮಣಿಕಂಠ (34) ಎಂಬವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಅಕ್ರಮವಾಗಿ ಕಲ್ಲುಸಾಗಾಟ ಮಾಡುತ್ತಿದ್ದ ಮೂರು ಲಕ್ಷ ರೂ ಮೌಲ್ಯದ ಟಿಪ್ಪರ್, ಆರು ಸಾವಿರ ಮೌಲ್ಯದ ಕಲ್ಲು, 1.60 ಲಕ್ಷ ರೂ ಮೌಲ್ಯದ ಗೂಡ್ಸ್ ವಾಹನ ಹಾಗೂ ಎಂಟು ಮಂದಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ…





















