
ನವದೆಹಲಿ: ದೆಹಲಿಯಲ್ಲಿ ಜುಲೈ 31 ರಂದು ಒಂದೇ ದಿನ 108 ಮಿಲಿ ಮೀಟರ್ ಮಳೆಯಾಗಿದ್ದು ಇದರಿಂದ ಹೊಸ ಸಂಸತ್ ಭವನದಲ್ಲಿ ನೀರು ಸೋರಿಕೆಯಾಗುತ್ತಿದೆ. ಈ ಬಗ್ಗೆ ಕಾಂಗ್ರೆಸ್ ಸಂಸದ ಮಾಣಿಕ್ಕಂ ಟ್ಯಾಗೋರ್ ಅವರು ಈ ವಿಷಯದ ಕುರಿತು ಮುಂದೂಡಿಕೆ ನಿರ್ಣಯವನ್ನು ಮಂಡಿಸಿದರೆ, ಅಖಿಲೇಶ್ ಯಾದವ್ ಹೊಸ ಸಂಸತ್ತನ್ನು ನಿರ್ಮಿಸಲು ಕೋಟ್ಯಂತರ ಖರ್ಚು ಮಾಡಿದೆ ಎಂದು ಬಿಜೆಪಿಯನ್ನು ಲೇವಡಿ ಮಾಡಿದರು ಮತ್ತು ಕಲಾಪವನ್ನು ಹಳೆಯ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಒತ್ತಾಯ ಮಾಡಿದ್ದಾರೆ.
ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರಕ್ಕೆ ಮುಜುಗರ ಎನಿಸುವಂತೆ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಗಳು ಹೊಸ ಸಂಸತ್ ಭವನದಲ್ಲಿ ನೀರು ಸೋರಿಕೆಯಾಗುತ್ತಿರುವ ವಿಡಿಯೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಿವೆ.ಈ ಕುರಿತು ಪೋಸ್ಟ್ ಮಾಡಿದ ಮಾಣಿಕ್ಕಂ ಟ್ಯಾಗೋರ್, “ಹೊರಗೆ ಪೇಪರ್ ಲೀಕ್, ಸಂಸತ್ನ ಒಳಗೆ ವಾಟರ್ ಲೀಕ್. ಸಂಸತ್ ಭವನದಲ್ಲಿ ಇತ್ತೀಚೆಗೆ ಆಗುತ್ತಿರುವ ವಾಟರ್ ಲೀಕೇಜ್, ಹೊಸ ಬಿಲ್ಡಿಂಗ್ ಇನ್ನೂ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಿಲ್ಲ ಎನ್ನುವುದನ್ನು ತರಿಸಿದೆ. ಸಂಸತ್ ಭವನ ಪೂರ್ಣಗೊಂಡ ಒಂದೇ ವರ್ಷದಲ್ಲಿ ಈ ರೀತಿಯ ಸಮಸ್ಯೆ ಆಗಿದೆ’ ಎಂದು ಬರೆದು ಹಂಚಿಕೊಂಡಿದ್ದಾರೆ.ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಕನೌಜ್ ಸಂಸದ ಅಖಿಲೇಶ್ ಯಾದವ್ ಅವರು ಮುಂಗಾರು ಅಧಿವೇಶನದ ಉಳಿದ ಭಾಗವನ್ನು ಹಳೆಯ ಸಂಸತ್ತಿನ ಕಟ್ಟಡಕ್ಕೆ ಸ್ಥಳಾಂತರಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ”ಹಳೆ ಸಂಸದರು ಕೂಡ ಬಂದು ಭೇಟಿಯಾಗುತ್ತಿದ್ದ ಹಳೆ ಸಂಸತ್ ಇದಕ್ಕಿಂತ ಚೆನ್ನಾಗಿತ್ತು, ಕೋಟ್ಯಂತರ ರೂಪಾಯಿವೆಚ್ಚದಲ್ಲಿ ನಿರ್ಮಿಸಿರುವ ನೂತನ ಕಟ್ಟಡದಲ್ಲಿ ‘ನೀರು ತೊಟ್ಟಿಕ್ಕುವ ಕಾರ್ಯಕ್ರಮ’ ನಡೆಯುವವರೆಗೂ ಹಳೇ ಸಂಸತ್ತಿಗೆ ಏಕೆ ಹೋಗಬಾರದು ” ಎಂದು ಯಾದವ್ ಟ್ವೀಟ್ ಮಾಡಿದ್ದಾರೆ.













