
ಹೆಬ್ರಿ:ತಂದೆ, ತಾಯಿಗಳ ಋಣ ಬಹಳ ದೊಡ್ಡದು.ಜೀವಿತಾವಧಿಯಲ್ಲಿ ಅವರ ಸೇವೆಯನ್ನು ಮಾಡುವುದು ಮಕ್ಕಳ ಆದ್ಯ ಕರ್ತವ್ಯ. ಹಾಗೆಯೇ ಮರಣಾನಂತರವೂ ಅವರ ಔರ್ಧ ದೈಹಿಕ ಕ್ರಿಯೆಗಳನ್ನು ಮಾಡುವುದು ಅತಿ ಅವಶ್ಯವಾಗಿದೆ. ಮಾತಾ ಪಿತರ ಆಶೀರ್ವಾದ ನಮಗೆ ಸದಾ ಇದ್ದಾಗ ಭಗವಂತನು ನಮ್ಮ ಕೆಲಸ ಕಾರ್ಯಗಳಿಗೆ ಅನುಗ್ರಹವನ್ನು ನೀಡುತ್ತಾನೆ. ಆ ನಿಟ್ಟಿನಲ್ಲಿ ಹೆಬ್ರಿ ಭಾಗದಲ್ಲಿ ಅತ್ಯಂತ ಸುಸಜ್ಜಿತವಾದ ಮೋಕ್ಷಧಾಮ ಕಟ್ಟಡ ನಿರ್ಮಾಣದ ಸಂಕಲ್ಪವನ್ನು ಇಟ್ಟುಕೊಂಡಿದ್ದೇವೆ. ಗಿಲ್ಲಾಳಿ ಆಚಾರ್ಯ ಕುಟುಂಬಸ್ಥರು ದಾನವಾಗಿ ನೀಡಿದ ಗೋಶಾಲೆಯಲ್ಲಿ ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ ಕಾರ್ಯಗಳು ನಡೆಯುವಂತೆ ಮೋಕ್ಷಧಾಮದಲ್ಲಿ ಪಿತೃ ಯಜ್ಞಕ್ಕೆ ಅನುಕೂಲವಾಗುವಂತೆ ಪ್ರಾಜ್ಞ ಸದನ, ಜನಾರ್ದನ ಧಾಮ,ವಾಸುದೇವ ಸದನ, ಅತಿಥಿ ಗೃಹವನ್ನೊಳಗೊಂಡ ಮೋಕ್ಷಧಾಮ ಕಟ್ಟಡಕ್ಕೆ ಕರ್ಣಾಟಕ ಬ್ಯಾಂಕ್ ವತಿಯಿಂದ 15 ಲಕ್ಷ ರೂಪಾಯಿ ಅನುದಾನ ಒದಗಿಸಿ ಸಾಮಾಜಿಕ ಬದ್ಧತೆಯ ಕಾರ್ಯಕ್ಕೆ ಕೈಜೋಡಿಸಿದ್ದಾರೆ.75 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಈ ಕಾರ್ಯಕ್ಕೆ ಎಲ್ಲರೂ ಸಹಕರಿಸುವ ಮೂಲಕ ದೇವರ ಅನುಗ್ರಹವನ್ನು ಪಡೆಯೋಣ ಎಂದು ಉಡುಪಿ ಪೇಜಾವರ ಮಠದ ಯತಿಗಳಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀ ಪಾದರು ಹೇಳಿದರು.
ಅವರು ಹೆಬ್ರಿ ಗಿಲ್ಲಾಳಿ ಗೋಶಾಲೆ, ಶ್ರೀ ಪೇಜಾವರ ಅಧೋಕ್ಷಜ ಮಠ ಗಿಲ್ಲಾಳಿ ಹೆಬ್ರಿ ವತಿಯಿಂದ ನಡೆದ ಮೋಕ್ಷಧಾಮ ಕಟ್ಟಡದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಮಂಗಳೂರು ಕರ್ಣಾಟಕ ಬ್ಯಾಂಕ್ ಲಿಮಿಟೆಡ್ ನ ಎಂ. ಡಿ. ಮತ್ತು ಸಿ. ಇ. ಓ.ರಾಘವೇಂದ್ರ ಭಟ್ ಮಾತನಾಡಿ ಉತ್ತಮ ಸಾಮಾಜಿಕ ಬದ್ಧತೆಯ ಕಾರ್ಯಗಳಿಗೆ ಬ್ಯಾಂಕ್ ವತಿಯಿಂದ ಇನ್ನಷ್ಟು ಸಹಕಾರವನ್ನು ನೀಡಲಿದ್ದೇವೆ. ಹೆಬ್ರಿಯಲ್ಲಿ ಸುಸಜ್ಜಿತವಾದ ಮೋಕ್ಷಧಾಮ ಕಟ್ಟಡ ನಿರ್ಮಾಣವಾಗುತ್ತಿರುವುದು ಇಲ್ಲಿನ ಜನರ ಸೌಭಾಗ್ಯ ಎಂದು ಹೇಳಿದರು.
ಹೆಬ್ರಿ ಅನಂತಪದ್ಮನಾಭ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ರಾಘವೇಂದ್ರ ಆಚಾರ್, ಹೆಬ್ರಿ ರಾಘವೇಂದ್ರ ಆಸ್ಪತ್ರೆಯ ವೈದ್ಯರಾದ ರಾಮಚಂದ್ರ ಐತಾಳ್ ಪಾಲ್ಗೊಂಡು ಶುಭ ಹಾರೈಸಿದರು. ಗೋಶಾಲೆಯ ಟ್ರಸ್ಟಿಯವರಾದ ಎಂ. ರವಿ ರಾವ್ ಹೆಬ್ರಿ,ಗಿಲ್ಲಾಳಿ ವಿಷ್ಣುಮೂರ್ತಿ ಆಚಾರ್ಯ, ಶ್ರೀಕಾಂತ್ ಭಟ್ ಅಜೆಕಾರು, ವಿಷ್ಣುಮೂರ್ತಿ ನಾಯಕ್ ಹೆಬ್ರಿ, ಲಕ್ಷ್ಮಣ ಭಟ್ ಹೆಬ್ರಿ,ಬೆಳ್ವೆ ಗಣೇಶ್ ಕಿಣಿ, ಲಕ್ಷ್ಮೀನಾರಾಯಣ ಜೋಯಿಸ್ ಹೆಬ್ರಿ , ಡಾ. ಭಾರ್ಗವಿ ಐತಾಳ್, ಗೋಶಾಲೆಯ ಉಸ್ತುವಾರಿ ಸುಬ್ರಮಣ್ಯ ನಾಯಕ್ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು. ಗೋಶಾಲೆಯ ಟ್ರಸ್ಟಿಯವರಾದ ಗಿಲ್ಲಾಳಿ ಪದ್ಮನಾಭ ಆಚಾರ್ಯ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಕಾರ್ಯಕ್ರಮ ನಿರೂಪಿಸಿ, ಗೋಶಾಲೆಯ ಟ್ರಸ್ಟಿಯವರಾದ ಗುರುದಾಸ ಶೆಣೈ ವಂದಿಸಿದರು.












