
ಕಾರ್ಕಳ: ನಾಡಿನ ಶ್ರೀಮಂತ ಪರಂಪರೆಯನ್ನೊಳಗೊಂಡ ಸಾಹಿತ್ಯವನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು. ನಮ್ಮ ವೈಚಾರಿಕ
ವಿಚಾರಗಳನ್ನು ಉಲ್ಲೇಖಿಸುವಂತಹ ಸಾಹಿತಿಗಳನ್ನು ನಾವು ಪೋಷಿಸಬೇಕು. ಈ ನಿಟ್ಟಿನಲ್ಲಿ ನಮ್ಮ ಪಕ್ಷದಿಂದ ನಡೆಯುವ ಸಾಹಿತಿಗಳ ಸಮ್ಮೇಳನ
ಕಾರ್ಯಕ್ರಮ ಶ್ಲಾಘನೀಯ ಎಂದು ಸಂಸದರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಸೆ. 29ರಂದು ಉಡುಪಿ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಕುಂಜಿಬೆಟ್ಟು ಶಾರದ ಕಲ್ಯಾಣ
ಮಂಟಪದಲ್ಲಿ ನಡೆಯಲಿರುವ ಕರಾವಳಿಯ ಸಾಹಿತಿಗಳು-ಕಲಾವಿದರು, ಲೇಖಕರು, ಕವಿಗಳು ಹಾಗೂ ಚುಟುಕು ಬರಹಗಾರರ ಸಮ್ಮೇಳನದ
ಆಮಂತ್ರಣ ಪತ್ರಿಕೆಯನ್ನು ಸೆ. 22ರಂದು ಕಾರ್ಕಳ ಶಾಸಕರ ವಿಕಾಸ ಜನಸೇವಾ ಕಚೇರಿಯಲ್ಲಿ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರಾದ ಶ್ರೀ ವಿಜಯ್ ಕೊಡವೂರು ಮಾತನಾಡಿ, ಪಕ್ಷ ಕೇವಲ ತನ್ನ ರಾಜಕೀಯ
ಚಟುವಟಿಕೆಯಿಂದ ದೇಶವನ್ನು ಸದೃಢಗೊಳಿಸಲು ಸಾಧ್ಯವಿಲ್ಲ. ಆದ್ದರಿಂದ ಸಾಹಿತ್ಯ ಕಾರ್ಯಕ್ರಮಗಳ ಕಡೆಗೂ ಪಕ್ಷ ಗಮನ ವಹಿಸಬೇಕಾಗಿದೆ. ಈ
ನಿಟ್ಟಿನಲ್ಲಿ ನಮ್ಮ ಮೋರ್ಚಾದ ಮೂಲಕ ಸಾಹಿತಿಗಳ ಸಮ್ಮೇಳನ ನಡೆಯಲಿದೆ ಎಂದರು.
ಬಿಜೆಪಿ ಕಾರ್ಕಳ ಮಂಡಲದ ಉಪಾಧ್ಯಕ್ಷರು ಶ್ರೀ ಅನಂತಕೃಷ್ಣ ಶೆಣೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಿಜೆಪಿ
ಉಪಾಧ್ಯಕ್ಷರಾದ ಶ್ರೀ ಜಯರಾಮ್ ಸಾಲ್ಯಾನ್, ಶ್ರೀ ಮಹಾವೀರ ಹೆಗ್ಡೆ, ಜಿಲ್ಲಾ ವಕ್ತಾರರು ಶ್ರೀ ಮುಟ್ಲುಪಾಡಿ ಸತೀಶ್ ಶೆಟ್ಟಿ, ಜಿಲ್ಲಾ
ಕಾರ್ಯದರ್ಶಿ ಶ್ರೀ ಉದಯ್ ಕೋಟ್ಯಾನ್, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಸುರೇಂದ್ರ ಕುಲಾಲ್,
ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀ ಸತೀಶ್ ಬೋಳ, ಕಾರ್ಯಕ್ರಮದ ಕಾರ್ಕಳ ಪ್ರಭಾರಿ ಶ್ರೀ ಶರತ್ ಶರ್ಮ ಮೊದಲಾದವರು ವೇದಿಕೆಯಲ್ಲಿ
ಉಪಸ್ಥಿತರಿದ್ದರು. ಹಿಂದುಳಿದ ವರ್ಗಗಳ ಮೊರ್ಚಾದ ಕಾರ್ಕಳ ಮಂಡಲ ಅಧ್ಯಕ್ಷ ಪ್ರಸಾದ್ ಐಸಿರ ಕಾರ್ಯಕ್ರಮ ನಿರ್ವಹಿಸಿದರು.













