
ಮಂಗಳೂರು: ದ.ಕ. ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ಅಜೀಜ್ ಪರ್ತಿಪ್ಪಾಡಿ ಹಂಪನಕಟ್ಟೆಯ ಬಸ್ ಮಾಲಕರ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿ ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ದರದಲ್ಲಿ ಅಸ್ಥಿರತೆ ಮುಂದುವರಿದಿರುವ ಹಿನ್ನೆಲೆ ತಕ್ಷಣಕ್ಕೆ ಬಸ್ ಟಿಕೆಟ್ ದರ ಏರಿಕೆ ಮಾಡುವ ಯೋಚನೆ ಇಲ್ಲ ಎಂದು ತಿಳಿಸಿದ್ದಾರೆ.
ಯುದ್ಧ ಪರಿಸ್ಥಿತಿಯಿಂದ ಮುಂದಿನ ಒಂದು ತಿಂಗಳಲ್ಲಿ ಡೀಸೆಲ್ ದರವು 20ರಿಂದ 25 ರೂ.ವರೆಗೆ ಏರಿಕೆಯಾಗುವ ಸಾಧ್ಯತೆ ಇದೆ. ಜೊತೆಗೆ ಡೀಸೆಲ್ ಕೊರತೆ ಉಂಟಾಗಿ ಕಾಳ ಸಂತೆಯಲ್ಲಿ ಮಾರಾಟವಾಗುವ ಆತಂಕವೂ ಎದುರಾಗಿದೆ ಎಂದರು.
2021ರ ಬಳಿಕ ಖಾಸಗಿ ಬಸ್ ದರ ಏರಿಕೆ ಮಾಡಿಲ್ಲ. ಆದರೆ ಬ್ಯಾಟರಿ, ಬಿಡಿಭಾಗ, ಬಾಡಿ ನಿರ್ಮಾಣ, ಆಯಿಲ್, ಗ್ರೀಸ್ ಸೇರಿದಂತೆ ವಿವಿಧ ವೆಚ್ಚಗಳು ಶೇ.30ರಿಂದ 50ರಷ್ಟು ಹೆಚ್ಚಳವಾಗಿವೆ. ಟ್ಯಾಕ್ಸ್, ಇನ್ಶೂರೆನ್ಸ್, ಇಎಂಐ ಸೇರಿದಂತೆ ನಿರ್ವಹಣಾ ವೆಚ್ಚವೂ ಹೆಚ್ಚಿರುವುದರಿಂದ ಬಸ್ ಮಾಲಕರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಹೇಳಿದರು.
ಟಿಕೆಟ್ ದರವನ್ನು ಪದೇಪದೆ ಹೆಚ್ಚಿಸುವ ಉದ್ದೇಶ ಇಲ್ಲ. ಇಂಧನ ಪರಿಸ್ಥಿತಿಯನ್ನು ಗಮನಿಸಿ ಮುಂದಿನ ದಿನಗಳಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.



























