ಅಮೃತ ಮಹೋತ್ಸವ ಸಂಭ್ರಮ ಹಾಗೂ ನೂತನ ಕಟ್ಟಡ ಲೋಕಾರ್ಪಣೆ
ಅವಿಭಾಜಿತ ದ. ಕ, ಉಡುಪಿ ಹಾಗೂ ಉ. ಕ ಜಿಲ್ಲಾ ವ್ಯಾಪ್ತಿಯಲ್ಲಿ, ಕಾರ್ಕಳದ ರಾಮಪ್ಪ ಶಾಲೆಗೆ ಸೈನಿಕ ಶಾಲೆಯ ಗರಿ: ಶರತ್ ಕಲ್ಯಾ

ಕಾರ್ಕಳ: ಪುಕ್ಕೇರಿ ರಾಮಪ್ಪ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಇದರ ಅಮೃತ ಮಹೋತ್ಸವ ಕಾರ್ಯಕ್ರಮ ಇತ್ತೀಚೆಗೆ ಜರುಗಿತು. ಇದೇ ಸಂದರ್ಭದಲ್ಲಿ ದಾನಿಗಳು ಹಾಗೂ ಹಳೆವಿದ್ಯಾರ್ಥಿಗಳಿಂದ ನೂತನವಾಗಿ ನಿರ್ಮಿಸಲಾದ ಶಿಶುಮಂದಿರ ಹಾಗೂ ಶಾಲಾ ಕಟ್ಟಡವನ್ನು ದೀಪ ಬೆಳಗಿಸುವುದರ ಮೂಲಕ ಲೋಕಾರ್ಪಣೆಗೊಳಿಸಿದ ವಿದ್ಯಾಭಾರತಿಯ ನಿಕಟಪೂರ್ವ ಮಧ್ಯಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿಯಾದ ಜಿ ಆರ್ ಜಗದೀಶ್ ಇವರು ಸಂಸ್ಥೆಗೆ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಲೆಯ ಆಡಳಿತ ಮಂಡಳಿ ಸದಸ್ಯರಾದ ಶರತ್ ಡಿ ಕಲ್ಯಾ ಇವರು ಹಿರಿಯರಾದ ಕೀರ್ತಿಶೇಷ ರಾಮಪ್ಪರವರ ದೂರದೃಷ್ಟಿತ್ವದಿಂದ ಸ್ಥಾಪಿಸಿದ ಈ ವಿದ್ಯಾಸಂಸ್ಥೆಯನ್ನು ಮುಂದಿನ ದಿನಗಳಲ್ಲಿ ಸೈನಿಕ ಶಾಲೆಯಾಗಿ ಪರಿವರ್ತಿಸುವ ಬಗ್ಗೆ ಸಮಯೋಚಿತವಾಗಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಸುಧೀರ್ ಜೈನ್, ಮ್ಯಾನೇಜರ್ ಹೂಮನ್ ರಿಸೋರ್ಸ್ ಎಂಆರ್ ಪಿಎಲ್ ಮಂಗಳೂರು, ಕೆ ಬಿ ಕೀರ್ತನ್ ಕುಮಾರ್, ಜಂಟಿ ಜನರಲ್ ಮ್ಯಾನೇಜರ್, ಮಾರುಕಟ್ಟೆ ಅಭಿವೃದ್ಧಿ, ಪರದೀಪ್ ಫಾಸ್ಟೇಟ್, ಲಿ ಪಣಂಬೂರು, ಮಂಗಳೂರು, ಆಡಳಿತ ಮಂಡಳಿ ಸದಸ್ಯರಾದ ನಿವೃತ್ತ ಏರ್ವೈಸ್ ಮಾರ್ಷಲ್ ಕ್ಯಾಪ್ಟನ್ ರಮೇಶ್ ಕಾರ್ಣಿಕ್, ಸಂತೋಷ್ ಹೆಗ್ಡೆ, ಸೂರಜ್ ಕಲ್ಯಾ, ಅಮೃತ ಮಹೋತ್ಸವ ಸಮಿತಿ ಗೌರವಾಧ್ಯಕ್ಷರಾದ ಚಂದ್ರಶೇಖರ ಹೆಗ್ಡೆ, ಉಪಾಧ್ಯಕ್ಷರಾದ ಉಮೇಶ್ ರಾವ್, ಶಾಲಾ ಮುಖ್ಯ ಶಿಕ್ಷಕ ಹರೀಶ್ ಶೆಟ್ಟಿ, ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ದಾನಿಗಳು, ನಿವೃತ್ತ ಶಿಕ್ಷಕರು, ಪ್ರಸ್ತುತ ಶಿಕ್ಷಕರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಆಳ್ವಾಸ್ ವಿದ್ಯಾಸಂಸ್ಥೆಯ ಸಂಗೀತ ಶಿಕ್ಷಕಿ ಶೃತಿ ಕೆ ಶಿಂದೆ ವಂದೇಮಾತರಂ ಗೀತೆ ಹಾಡಿದರು. ನಿವೃತ್ತ ಶಿಕ್ಷಕ ವಸಂತ ಎಂ ಪ್ರಸ್ತಾವನೆಗೈದ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀಧರ ಎನ್ ಸುವರ್ಣ ಸ್ವಾಗತಿಸಿದರು. ಅಮೃತ ಮಹೋತ್ಸವ ಕಾರ್ಯಕ್ರಮ ಸಂಚಾಲಕರಾದ ಪ್ರಕಾಶ್ ರಾವ್ ಧನ್ಯವಾದ ಸಮರ್ಪಿಸಿದರು. ಸಹ ಸಂಚಾಲಕ ಶಿವಾನಂದ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ದಾನಿಗಳ ವಿವರಗಳನ್ನು ಅಮೃತ ಮಹೋತ್ಸವ ಸಮಿತಿ ಕಾರ್ಯದರ್ಶಿ ಹರೀಶ್ ಅಂಚನ್ ವಾಚಿಸಿದರು.








