ಹೊಸ ಕಟ್ಟುನಿಟ್ಟಿನ ನಿಯಮ ಜಾರಿ

ಬೆಂಗಳೂರು: ಶಾಸಕರ ಭವನದಲ್ಲಿರುವ ಸರ್ಕಾರಿ ವಾಹನಗಳ ದುರ್ಬಳಕೆಗೆ ಕಡಿವಾಣ ಹಾಕಲು ಕರ್ನಾಟಕ ವಿಧಾನಸಭೆ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಇನ್ನು ಮುಂದೆ ಶಾಸಕರು ತಮ್ಮ ಆಪ್ತ ಸಹಾಯಕರು, ಅತಿಥಿಗಳು ಅಥವಾ ಪರಿಚಯಸ್ಥರಿಗೆ ವಾಹನ ಬಳಕೆಗೆ ಶಿಫಾರಸು ಮಾಡುವಂತಿಲ್ಲ.
ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಹೊರಡಿಸಿದ ಆದೇಶದಂತೆ, ವಾಹನಗಳನ್ನು ಬೆಂಗಳೂರು ನಗರದ ಗಡಿ (GBA) ವ್ಯಾಪ್ತಿಯೊಳಗೆ ಮಾತ್ರ ಬಳಸಬಹುದು. ವಿಮಾನ ನಿಲ್ದಾಣಕ್ಕೆ ತೆರಳಲು ಮಾತ್ರ ವಿನಾಯಿತಿ ಇದ್ದು, ತುರ್ತು ಸಂದರ್ಭಗಳಲ್ಲಿ ಹೊರ ಜಿಲ್ಲೆಗೆ ತೆರಳಬೇಕಾದರೆ ಸ್ಪೀಕರ್ ಅವರ ಪೂರ್ವಾನುಮತಿ ಕಡ್ಡಾಯವಾಗಿದೆ.
ಶಾಸಕರ ಹೆಸರಿನಲ್ಲಿ ಬೆಂಬಲಿಗರು, ಪಕ್ಷದ ಕಾರ್ಯಕರ್ತರು ಹಾಗೂ ಅತಿಥಿಗಳು ವಾಹನಗಳನ್ನು ಬಳಸುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಬೆಂಗಳೂರಿಗೆ ಆಗಮಿಸುವ ಶಾಸಕರಿಗೆ ಅಗತ್ಯ ಸಮಯದಲ್ಲಿ ವಾಹನಗಳ ಕೊರತೆ ಉಂಟಾಗುತ್ತಿತ್ತು.
ಪ್ರಸ್ತುತ ಶಾಸಕರಿಗಾಗಿ ಸುಮಾರು 80 ಹಾಗೂ ವಿಧಾನ ಪರಿಷತ್ ಸದಸ್ಯರು ಮತ್ತು ಮಾಜಿ ಸದಸ್ಯರಿಗಾಗಿ 40 ವಾಹನಗಳು ಲಭ್ಯವಿವೆ. ವಾಹನ ಮತ್ತು ಚಾಲಕರ ಕೊರತೆಯನ್ನೂ ಗಮನದಲ್ಲಿಟ್ಟುಕೊಂಡು ಸಚಿವಾಲಯ ಈ ನಿರ್ಧಾರ ಕೈಗೊಂಡಿದೆ.
ಹೊಸ ನಿಯಮದಂತೆ ಪ್ರತಿ ಕಿಲೋಮೀಟರ್ಗೆ ₹8ರಿಂದ ₹12ರವರೆಗೆ ಶುಲ್ಕ ನಿಗದಿಯಾಗಿದ್ದು, ಸಂಪೂರ್ಣ ನಗದುರಹಿತ ವ್ಯವಸ್ಥೆ ಜಾರಿಯಲ್ಲಿರಲಿದೆ. ಶಾಸಕರ ಸಂಬಳದಿಂದ ಹಾಗೂ ಮಾಜಿ ಶಾಸಕರ ಪಿಂಚಣಿಯಿಂದ ನೇರವಾಗಿ ಹಣ ಕಡಿತವಾಗಲಿದ್ದು, ವಾಹನ ಬಳಕೆಯಲ್ಲಿ ಪಾರದರ್ಶಕತೆ ಹೆಚ್ಚಲಿದೆ ಎಂದು ಮೂಲಗಳು ತಿಳಿಸಿವೆ.











































