
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಪ್ರತಿದಿನ ಬೆಳಿಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗುವುದನ್ನು ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸೂಚನೆಯಂತೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಈ ನಿರ್ದೇಶನ ನೀಡಿದ್ದಾರೆ.
ಇನ್ನು ಮುಂದೆ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ‘ಕರ್ತವ್ಯ ಆ್ಯಪ್’ ಮೂಲಕ ಬೆಳಿಗ್ಗೆ ‘ಚೆಕ್ ಇನ್’ ಮತ್ತು ಕಚೇರಿಯಿಂದ ತೆರಳುವ ವೇಳೆ ‘ಚೆಕ್ ಔಟ್’ ಮಾಡಬೇಕು. ಹಾಜರಾತಿ ವಿವರಗಳನ್ನು ಇ-ಆಡಳಿತ ಇಲಾಖೆ ಎಐ ತಂತ್ರಜ್ಞಾನದ ಮೂಲಕ ಸಂಬಂಧಿತ ಇಲಾಖಾ ಮುಖ್ಯಸ್ಥರಿಗೆ ರವಾನಿಸಲಿದೆ.
ಇಲಾಖಾ ಮುಖ್ಯಸ್ಥರು ‘ಕರ್ತವ್ಯ ಡ್ಯಾಶ್ಬೋರ್ಡ್’ನಲ್ಲಿ ಹಾಜರಾತಿ ವರದಿಯನ್ನು ಪರಿಶೀಲಿಸಿ, ಗೈರುಹಾಜರಾತಿ ಅಥವಾ ದಾಖಲಿಸದ ಸಿಬ್ಬಂದಿಗೆ ಸೂಚನೆ ನೀಡಬೇಕಿದೆ. ಅಧಿಕೃತ ಪ್ರವಾಸದಲ್ಲಿರುವ ಸಿಬ್ಬಂದಿ ‘OOD’ ಆಯ್ಕೆಯ ಮೂಲಕ ಮಾಹಿತಿ ದಾಖಲಿಸಿ ಮೇಲಾಧಿಕಾರಿಗಳ ಅನುಮೋದನೆ ಪಡೆಯಬೇಕು.
ಬುಧವಾರ ನಡೆದ ಕಾರ್ಯದರ್ಶಿಗಳ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭ್ರಷ್ಟಾಚಾರ ರಹಿತ ಆಡಳಿತ, ಪಾರದರ್ಶಕ ಕಾರ್ಯವೈಖರಿ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
































