ಭಾಗ – 556
ಭರತೇಶ್ ಶೆಟ್ಟಿ, ಎಕ್ಕಾರು

ಈವರೆಗೆ ವಿದ್ಯೆ ಕಲಿಸಿದ ಗುರು ದ್ರೋಣಾಚಾರ್ಯರೇ ಮೆಚ್ಚಿ ಶ್ಲಾಘಿಸಿರುವಂತೆ ಪಾರ್ಥ ಏಕಮೇವ ಧನುರ್ಧರನೇ ಹೌದು. ಅದೇ ರೀತಿಯ ಸಾಹಸವನ್ನು ಎಲ್ಲೆಡೆ ಮೆರೆದವನಾಗಿದ್ದಾನೆ. ಇಂದು ಅಂತಹ ಮಹಾವಿಕ್ರಮಿ ಅರ್ಜುನನೇ ಪ್ರತಿಯಾಗಿ ಇನ್ನೋರ್ವ ಅರ್ಜುನನೊಡನೆ ಹೋರಾಡುತ್ತಿರುವಂತೆ ಭಯಂಕರ ಯುದ್ದವೇ ಸಾಗುತ್ತಿದೆ.
ಆದರೂ ಅರ್ಜುನ ಹಂತ ಹಂತವಾಗಿ ನಿಸ್ತೇಜನಾದಂತೆ ಕಾಣಿಸುತ್ತಿದ್ದಾನೆ. ಬಬ್ರುವಾಹನನ ಪ್ರಭೆಯೇ ವೈಭವದಿಂದ ಮೆರೆಯುತ್ತಿದೆ. ಗಂಗೆಯ ಶಾಪ ಊರ್ಜಿತಕ್ಕೆ ಬಂದಂತೆಯೇ ಕಾಣಿಸುತ್ತಿದೆ. ಅರ್ಜುನ ಧನುರ್ವೇದ ಪ್ರಾವಿಣ್ಯತೆಯ ಯಾವ ತೆರನಾದ ಕೌಶಲ್ಯ ಮೆರೆದರೂ ಬಬ್ರುವಾಹನ ಪ್ರತಿಭಟಿಸಿ ಕಾದಾಡುತ್ತಿದ್ದಾನೆ. ಸಮರ ಸಾಗುತ್ತಿದ್ದಂತೆ ಬಬ್ರುವಾಹನ ಜ್ವಾಲಾಮುಖದ ಕಾಮರೂಪದ ವಡಭಾಗ್ನಿಯಂತಹ ಬೆಂಕಿಯ ಕೆನ್ನಾಲಿಗೆಗಳನ್ನು ಸೂಸುವ ಅರ್ಧ ಚಂದ್ರಾಕೃತಿಯ ಅಲಗುಳ್ಳ ಹರಿತವಾದ ಬಾಣವನ್ನು ಕೈಗೆತ್ತಿಕೊಂಡನು. ಇದು ಸಾಮಾನ್ಯ ಶರವಲ್ಲ. ಮಾಹಿಷ್ಮತಿಯ ಮಹಾರಾಣಿ ಜ್ವಾಲಾ ಮರಣೋತ್ತರವಾಗಿ ಸಂಕಲ್ಪದಂತೆ ಪರಿವರ್ತನೆಗೊಂಡು ಬಂದು ಬಬ್ರುವಾಹನನ ಬತ್ತಳಿಕೆ ಸೇರಿರುವ ವಿಶೇಷ ಶರ. ಉಗ್ರವಾದ ಪ್ರಭೆಯಿಂದ ಕೋರೈಸುತ್ತಿರುವ ಬಾಣವನ್ನೆತ್ತಿ ಸಂಧಾನ ಮಾಡಿಯೇ ಬಿಟ್ಟನು.
ಬಬ್ರುವಾಹ ಧನುಸ್ಸಿಗೆ ಶರ ಜೋಡಿಸುಮಾಡುತ್ತಿದ್ದಂತೆಯೇ ಇಂದ್ರಾದಿ ದೇವತೆಗಳೆಲ್ಲರೂ ಮರುಗತೊಡಗಿದರು. ಉಲ್ಕೆಗಳು ಬೀಳತೊಡಗಿದವು. ಮೋಡಗಳಿಂದ ರಕ್ತದ ಮಳೆ ಸುರಿಯತೊಡಗಿತು.ಮಣ್ಣು ಮರಳು, ತರಗೆಲೆ ಕಡ್ಡಿ ಕಸಗಳೆಲ್ಲ ಸೇರಿ ಹಾರುತ್ತಿರುವ ಭೀಕರ ಬಿರುಗಾಳಿಯೆದ್ದಿತು. ನರಿ ತೋಳಗಳೂ ಅರಚತೊಡಗಿದವು. ಸೇನೆಯಲ್ಲಿರುವ ಆನೆಗಳು ಘೀಳಿಟ್ಟರೆ, ತುರಗಗಳು ಕೆನೆಯ ತೊಡಗಿದವು. ಆಗಸದಲ್ಲಿ ಹಾರುತ್ತಿದ್ದ ಹಕ್ಕಿಗಳು ಕಕ್ಕಾಬಿಕ್ಕಿಯಾಗಿ ಕರ್ಕಶ ಕೂಗಿನ ದನಿಯೆಬ್ಬಿಸುತ್ತಾ ಕಂಡತ್ತ ಹಾರಿಹೋಗತೊಡಗಿದವು.
ಇಂತಹ ವಿಕೋಪ ದೃಶ್ಯಗಳು ಕಣ್ಣೆದುರೇ ಆಗುತ್ತಿದ್ದರೂ ವಿಚಲಿತನಾಗದ ಬಬ್ರುವಾಹನ ವಿಶೇಷ ಬಾಣವನ್ನು ಹೂಡಿ ಪ್ರಯೋಗಿಸಿಯೇ ಬಿಟ್ಟನು. ಅರ್ಜುನ ಸುಮ್ಮನುಳಿಯದೆ ಪ್ರತ್ಯಸ್ತ್ರ ಪ್ರಯೋಗಿಸಿದನಾದರೂ, ಗುರಿತಪ್ಪದ ಪಾರ್ಥನ ಶರ ಪಥ ಮಧ್ಯದಲ್ಲೇ ಕತ್ತರಿಸಲ್ಪಟ್ಟಿತು. ತನ್ನ ಶರವನ್ನು ತುಂಡರಿಸಿ ಮುನ್ನುಗ್ಗುತ್ತಿರುವ ಬಬ್ರುವಾಹನನ ಶರಗತಿಯನ್ನು ಗಮನಿಸಿದ ಪಾರ್ಥನಿಗೆ ಅನಾಹುತದ ಸೂಚನೆ ಸಿಕ್ಕಿತು. ಕೂಡಲೇ ಹರಿಧ್ಯಾನ ಮಾಡಲು ಕೃಷ್ಣನನ್ನು ಸ್ಮರಿಸುವೆ ಎಂದು ಮನದಲ್ಲೇ ಯೋಚಿಸಿ ಕೃಷ್ಣಾ! ಎಂದು ಕೂಗುವ ಪ್ರಯತ್ನದಲ್ಲಿರುವಾಗಲೇ ಸ್ವರ ಗಂಟಲು ದಾಟಿ ಹೊರ ಬರುವ ಮೊದಲೇ ಅರ್ಧ ಚಂದ್ರಾಕೃತಿಯ ಬಾಣ ಪಾರ್ಥನ ಕೊರಳನ್ನು ಕತ್ರಿಸಿಯಾಗಿದೆ. ಶಿರಚ್ಚೇಧನಕ್ಕೊಳಗಾದ ಪಾರ್ಥನ ರುಂಡ ಮುಂಡಗಳು ತುಂಡಾಗಿ ಪ್ರತ್ಯೇಕವಾಗಿಯಾಗಿದೆ. ಕುಂಡಲ ಮಂಡಿತವಾಗಿರುವ ಅರ್ಜುನನ ತಲೆಯು ಆಕಾಶಕ್ಕೆ ಎಸೆಯಲ್ಪಟ್ಟು ಸೂರ್ಯಮಂಡಲದ ಗ್ರಹವೊಂದು ಕಳಚಿ ಕೆಳ ಬಿತ್ತೋ ಎಂಬಂತೆ ಶಿರಸ್ಸು ರಣ ಭೂಮಿಗೆ ಬಿತ್ತು. ಮುಂಡವು ನಿಯಂತ್ರಣವಿಲ್ಲದೆ ಕೈಯಲ್ಲಿ ಗಾಂಡೀವ, ಬೆನ್ನಿಗೆ ಬಿಗಿದ ಅಕ್ಷಯ ತೂಣಿರ ಸಹಿತವಾಗಿ ದೊಪ್ಪನೆ ರಥದಿಂದ ಕೆಳಗೆ ಬಿತ್ತು. ಕೇಶವಾ, ಕೃಷ್ಣಾ, ಮುಕುಂದಾ, ಮುರಾರೀ ಎಂದು ನಾಮಸ್ಮರಣೆ ಮಾಡುತ್ತಾ ಪಾರ್ಥನ ಶಿರವೇ ಕೆಳಗುರುಳಿ ಬಿತ್ತು.

































