
ಬೆಂಗಳೂರು: ಅನುದಾನ ಬಿಡುಗಡೆಗೆ ಮೀನಾಮೇಷ ಎಣಿಸುತ್ತಿರುವ ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘ ನಿರ್ಣಾಯಕ ಬಾಕಿ ಬಿಲ್ ಬಿಡುಗಡೆಗಾಗಿ ಹೋರಾಟಕ್ಕೆ ಮುನ್ನಡಿ ಬರೆದಿದೆ.
ಬಾಕಿ ಬಿಲ್ ಬಗ್ಗೆ ಗಮನಕ್ಕೆ ತಂದರೂ ಕ್ರಮ ಆಗಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿರುವ ಗುತ್ತಿಗೆದಾರರ ಸಂಘವು ಸರ್ಕಾರದ ಸಪ್ತ ಸಚಿವರಿಗೆ ಪತ್ರ ಬರೆದು ಬಿಲ್ ಬಿಡುಗಡೆಗಾಗಿ 7 ದಿನಗಳ ಕಾಲವಕಾಶ ನೀಡಿದ್ದು ಈ 7 ದಿನದೊಳಗೆ ಸಭೆ ಕರೆದು ನ್ಯಾಯ ಒದಗಿಸಬೇಕು. ಇಲ್ಲವಾದ್ರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತೆ ಎಂದು ಎಚ್ಚರಿಸಿದ್ದಾರೆ.
ಇದಲ್ಲದೆ ಬಾಕಿ ಬಿಲ್ ಗಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿರುವ ಗುತ್ತಿಗೆದಾರರ ಸಂಘ ಸರ್ಕಾರದ ವಿರುದ್ಧ ಕಮಿಷನ್ ಆರೋಪವನ್ನೂ ಮಾಡಿದೆ. 32 ಸಾವಿರ ಕೋಟಿ ಬಾಕಿ ಹಣ ಬರಬೇಕಿದೆ. ಒಡವೆ ಮಾರಾಟ ಮಾಡಿ ಕಾಂಟ್ರಾಕ್ಟ್ ಕೆಲಸ ಮಾಡಿದ್ದೇವೆ. ಹಣ ಬಿಡುಗಡೆಯಾಗದಿದ್ರೆ ನಮ್ಮ ಗತಿಯೇನು? ಗುತ್ತಿಗೆ ನೀಡಲು ಶಾಸಕರು ಶೇ. 15ರಷ್ಟು ಕಮಿಷನ್ ನೇರವಾಗಿ ಕೇಳುತ್ತಿದ್ದಾರೆ ಅಂತಾ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಗನ್ನಾಥ್ ಗಂಭೀರ ಆರೋಪ ಮಾಡಿದ್ದಾರೆ.



















