
ಜೈಪುರ: ರಾಜಸ್ಥಾನದ ಜೈಪುರದಲ್ಲಿ ಸರ್ಕಾರಿ ಉದ್ಯೋಗ ಮತ್ತು ಆಸ್ತಿಯ ಲಾಲಸೆಯಿಂದ 23 ವರ್ಷದ ಯುವತಿಯೊಬ್ಬಳು ತನ್ನ ತಾಯಿಯನ್ನೇ ಸುಪಾರಿ ನೀಡಿ ಕೊಲೆ ಮಾಡಿಸಿರುವ ಬೆಚ್ಚಿಬೀಳಿಸುವ ಪ್ರಕರಣ ಬೆಳಕಿಗೆ ಬಂದಿದೆ. ಅಪಘಾತದಂತೆ ಬಿಂಬಿಸಲು ಯತ್ನಿಸಿದ್ದ ಈ ಕೃತ್ಯವನ್ನು ಪೊಲೀಸರು ಭೇದಿಸಿ, ಮಗಳು ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದಾರೆ. ಘಟನೆ ಜುಲೈ 3ರಂದು ಪ್ರತಾಪ್ ನಗರದಲ್ಲಿ ನಡೆದಿದೆ.
ಮೃತೆಯನ್ನು ನೀರಜ್ ಶರ್ಮಾ (45) ಎಂದು ಗುರುತಿಸಲಾಗಿದೆ. ಅವರು ನ್ಯಾಯಾಲಯದಲ್ಲಿ ಕೆಳ ವಿಭಾಗದ ಗುಮಾಸ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮಗನನ್ನು ಕೋಚಿಂಗ್ ಕೇಂದ್ರಕ್ಕೆ ಬಿಟ್ಟು ಮನೆಗೆ ನಡೆದುಕೊಂಡು ಬರುತ್ತಿದ್ದ ವೇಳೆ, ಸ್ಕಾರ್ಪಿಯೋ ಕಾರು ಹಿಂದಿನಿಂದ ವೇಗವಾಗಿ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟರು. ಆರಂಭದಲ್ಲಿ ಇದನ್ನು ಹಿಟ್ ಆ್ಯಂಡ್ ರನ್ ಪ್ರಕರಣವೆಂದು ಭಾವಿಸಲಾಗಿತ್ತು. ಆದರೆ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆಯ ಬಳಿಕ ಇದು ಪೂರ್ವನಿಯೋಜಿತ ಕೊಲೆ ಎಂಬುದು ಬಹಿರಂಗವಾಯಿತು.
ಒಂದು ವರ್ಷದ ಹಿಂದೆ ನೀರಜ್ ಅವರ ಪತಿ ಮೃತಪಟ್ಟಿದ್ದರು. ಅವರ ಸರ್ಕಾರಿ ಉದ್ಯೋಗ ತಾಯಿಗೆ ಸಿಕ್ಕಿದ್ದರಿಂದ ಮಗಳು ಆಯುಷಿ ಶರ್ಮಾಗೆ ಅಸಮಾಧಾನವಿತ್ತು. ತಂದೆಯ ಆಸ್ತಿಯ ವಿಚಾರದಲ್ಲೂ ಇಬ್ಬರ ನಡುವೆ ಭಿನ್ನಾಭಿಪ್ರಾಯವಿದ್ದು, ಈ ಹಿನ್ನೆಲೆಯಲ್ಲಿ ತಾಯಿಯನ್ನು ಕೊಲೆ ಮಾಡುವ ಸಂಚು ರೂಪಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಆಯುಷಿಗೆ ಆಕೆಯ ಚಿಕ್ಕಪ್ಪ ಮೋಹನ್ ಸ್ವರೂಪ್ ಹಾಗೂ ಸಂಬಂಧಿ ಬಲರಾಮ್ ನೆರವು ನೀಡಿದ್ದು, ಭರತ್ಪುರದ ಹೇಮಂತ್ ಶರ್ಮಾ ಎಂಬ ವ್ಯಕ್ತಿಗೆ ಸುಮಾರು ₹7 ಲಕ್ಷ ಸುಪಾರಿ ನೀಡಲಾಗಿದೆ ಎನ್ನಲಾಗಿದೆ. ಒಂದು ತಿಂಗಳ ಕಾಲ ನೀರಜ್ ಅವರ ಚಲನವಲನಗಳ ಮೇಲೆ ನಿಗಾ ಇಟ್ಟು, ಘಟನೆ ನಡೆದ ದಿನ ಸ್ಥಳ ಮಾಹಿತಿ ಹಂಚಿಕೊಂಡು ಕಾರು ಹರಿಸಿ ಹತ್ಯೆ ನಡೆಸಲಾಗಿದೆ.
ಪ್ರಕರಣ ಸಂಬಂಧ ಆಯುಷಿ ಸೇರಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ. ಆದರೆ ಪ್ರಮುಖ ಸಂಚುಕೋರನೆಂದು ಶಂಕಿಸಲಾದ ಬಲರಾಮ್ ಅಲಿಯಾಸ್ ರವಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಶೋಧ ಮುಂದುವರಿಸಿದ್ದಾರೆ.











































