
ಬೆಂಗಳೂರು: ಶಾಲಾ ಬಸ್ಗಳಲ್ಲಿ ಪ್ರಯಾಣಿಸುವ ಮಕ್ಕಳ ಸುರಕ್ಷತೆಯ ಸಂಪೂರ್ಣ ಹೊಣೆಗಾರಿಕೆ ಸಂಬಂಧಿತ ಶಾಲಾ ಆಡಳಿತ ಮಂಡಳಿಯದ್ದೇ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಮಗು ಬಸ್ ಹತ್ತಿದ ಕ್ಷಣದಿಂದ ಸುರಕ್ಷಿತವಾಗಿ ಪೋಷಕರ ಬಳಿಗೆ ತಲುಪುವವರೆಗೆ ಅದರ ರಕ್ಷಣೆ ಶಾಲೆಯ ಜವಾಬ್ದಾರಿಯಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಶಾಲಾ ಬಸ್ ಅಪಘಾತದಲ್ಲಿ 4ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಕಣ್ಣಿನ ದೃಷ್ಟಿ ಕಳೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿ, ಮಂಡ್ಯ ಜಿಲ್ಲೆಯ ಮದ್ದೂರಿನ ದಿವ್ಯಜ್ಯೋತಿ ಶಾಲಾ ಆಡಳಿತ ಮಂಡಳಿ ಸಲ್ಲಿಸಿದ್ದ ಪ್ರಕರಣ ರದ್ದು ಕೋರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ತಿರಸ್ಕರಿಸಿದ್ದಾರೆ.
ತೀರ್ಪಿನಲ್ಲಿ, ಮಕ್ಕಳ ಸುರಕ್ಷತೆ ಕೇವಲ ಔಪಚಾರಿಕ ನಿಯಮವಲ್ಲ, ‘ಕರ್ನಾಟಕ ಶಿಕ್ಷಣ ಸಂಸ್ಥೆಗಳ ನಿಯಮಾವಳಿಗಳು-2018’ರಡಿ ಕಡ್ಡಾಯವಾಗಿ ಪಾಲಿಸಬೇಕಾದ ಕಾನೂನುಬದ್ಧ ಜವಾಬ್ದಾರಿ ಎಂದು ನ್ಯಾಯಾಲಯ ತಿಳಿಸಿದೆ. ಮಗು ಬಸ್ ಹತ್ತಿದ ಬಳಿಕ ಕೊನೆಯ ನಿಲ್ದಾಣದವರೆಗೆ ಶಾಲೆ ತನ್ನ ಹೊಣೆಗಾರಿಕೆಯಿಂದ ಹಿಂದೆ ಸರಿಯಲು ಸಾಧ್ಯವಿಲ್ಲ ಎಂದಿದೆ.
ಅಪಘಾತ ನಡೆದ ವೇಳೆ ಬಸ್ನಲ್ಲಿ ಅಟೆಂಡರ್ ಇದ್ದರೇ, ಸಿಸಿಟಿವಿ ಕಾರ್ಯನಿರ್ವಹಿಸುತ್ತಿತ್ತೇ ಹಾಗೂ ಅಪಾಯಕಾರಿ ವಸ್ತು ಬಸ್ಗೆ ಹೇಗೆ ಬಂದಿತು ಎಂಬ ಅಂಶಗಳು ತನಿಖೆಯಲ್ಲಿ ಸ್ಪಷ್ಟವಾಗಬೇಕಿದೆ. ಇಂತಹ ಪ್ರಶ್ನೆಗಳಿಗೆ ತನಿಖೆಯೇ ಉತ್ತರ ನೀಡಬೇಕಿದ್ದು, ಈ ಹಂತದಲ್ಲೇ ಪ್ರಕರಣ ರದ್ದುಪಡಿಸಲು ಅವಕಾಶವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಅಲ್ಲದೆ, ಪುಟ್ಟ ವಿದ್ಯಾರ್ಥಿನಿಯೊಬ್ಬಳು ಜೀವನಪೂರ್ತಿ ದೃಷ್ಟಿಹೀನತೆಯ ಸಮಸ್ಯೆ ಎದುರಿಸುವಂತಾಗಿರುವುದು ಗಂಭೀರ ವಿಷಯವಾಗಿದೆ. ಆಡಳಿತ ಮಂಡಳಿಯ ನಿರ್ಲಕ್ಷ್ಯವಿದೆಯೇ ಎಂಬುದು ಸಮಗ್ರ ತನಿಖೆಯ ಬಳಿಕವೇ ನಿರ್ಧಾರವಾಗಬೇಕಿರುವುದರಿಂದ, ಅರ್ಜಿಯನ್ನು ವಜಾಗೊಳಿಸಿ ಹೈಕೋರ್ಟ್ ಆದೇಶಿಸಿದೆ.








































