
ಬಜರಂಗದಳ ಕಾರ್ಕಳ ಪ್ರಖಂಡದ ವತಿಯಿಂದ ಅಯೋಧ್ಯ ಬಲಿದಾನ್ ದಿವಸ್ ಪ್ರಯುಕ್ತ ರಕ್ತದಾನ ಶಿಬಿರ ಬೈಪಾಸ್ ನ ಕಾರ್ಕಳ ಇನ್ ಸಭಾಂಗಣದಲ್ಲಿ ನಡೆಯಿತು. ಶ್ರೀರಾಮ ಮಂದಿರಕ್ಕಾಗಿ ಹುತಾತ್ಮರಾದ ಧರ್ಮ ಯೋಧರಿಗೆ ರಕ್ತದಾನದ ಮೂಲಕ ಬಜರಂಗದಳದ ಕಾರ್ಯಕರ್ತರು ಗೌರವ ಸಮರ್ಪಿಸಿದರು.

ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ ಗಿರೀಶ್ ರಾವ್ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಬಜರಂಗದಳದ ಕಾರ್ಯಚಟುವಟಿಕೆಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಉದ್ಯಮಿ ಅರುಣ್ ಕುಮಾರ್ ನಿಟ್ಟೆ ಹಾಗೂ ಅಶೋಕ್ ಸುವರ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ವಿಶ್ವ ಹಿಂದೂ ಪರಿಷದ್ ಪ್ರಾಂತ ಗೋ ರಕ್ಷಾ ಪ್ರಮುಖ್ ಸುನಿಲ್ ಕೆ ಆರ್ ಮಾತನಾಡಿ “ಅಯೋಧ್ಯೆ ಶ್ರೀರಾಮ ಮಂದಿರ ಇವತ್ತು ಅತ್ಯಂತ ಭವ್ಯವಾಗಿ ನಿರ್ಮಾಣಗೊಂಡಿರುವ ಕಾರಣ ಅವತ್ತು ನಮ್ಮ ಹಿಂದೂ ಸಮಾಜದ ತ್ಯಾಗ ಮತ್ತು ಬಲಿದಾನ. ರಾಮಜನ್ಮಭೂಮಿಗಾಗಿ ಅದೆಷ್ಟೋ ಕಾರ್ಯಕರ್ತರು ತಮ್ಮ ಪ್ರಾಣವನ್ನೇ ಅರ್ಪಿಸಿದರು ಅಂತಹ ವೀರರನ್ನು ಹಿಂದೂ ಸಮಾಜ ಎಂದಿಗೂ ಮರೆಯಬಾರದು. ನವೆಂಬರ್ 2 ದೇಶಾದ್ಯಂತ ಬಜರಂಗದಳದ ಕಾರ್ಯಕರ್ತರು ಈ ಸಲುವಾಗಿ ರಕ್ತದಾನ ಮಾಡುವ ಮೂಲಕ ಸಮಾಜದ ಏಳಿಗೆಗೆ ಸದಾ ದುಡಿಯುತ್ತಿದ್ದಾರೆ” ಎಂದರು.
ಉಡುಪಿ ಜಿಲ್ಲಾ ಬಜರಂಗದಳ ಸಂಯೋಜಕ ಚೇತನ್ ಪೇರಲ್ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಜ್ಜರಕಾಡು ರಕ್ತನಿಧಿ ವಿಭಾಗದ ಡಾ. ವಿಸ್ಮಿತಾ ಉಪಸ್ಥಿತಿ ಇದ್ದರು. ಬಜರಂಗದಳ ಕಾರ್ಕಳ ತಾಲೂಕು ಸಂಯೋಜಕ ಮನೀಶ್ ನಿಟ್ಟೆ ವಂದಿಸಿ, ವಿಶ್ವ ಹಿಂದೂ ಪರಿಷದ್ ಸಹ ಕಾರ್ಯದರ್ಶಿ ಯಶೋಧರ ಪೇರಲ್ಕೆ ಕಾರ್ಯಕ್ರಮ ನಿರೂಪಿಸಿದರು.






























































































































