ತಿಂಗಳ ಉಪನ್ಯಾಸ ಅರಿವು ತಿಳಿವು ಕಾರ್ಯಕ್ರಮ

ಕಾರ್ಕಳ :ನಾಮರೂಪಗಳ ಆಚೆಗಿರುವ ಪರಮಾತ್ಮನ ಶಕ್ತಿಯ ಪರಿಚಯವನ್ನು ಮಾಡಿಸಿ ಅಂತಹ ಪರಮಾತ್ಮನೆಡೆಗೆ ಸಾಗಲು ನೆರವಾಗುವ ಇಂದ್ರಿಯಗಳ ನಿಗ್ರಹ, ಪರಿಶ್ರಮದ ಸಾಧನೆಯ ವಿವರಗಳನ್ನು ಶಿಷ್ಯರಿಗೆ ಬೋಧಿಸಿದ ಜ್ಞಾನವೇ ಬೃಹದಾರಣ್ಯಕ ಉಪನಿಷತ್ತು ಆಗಿದೆ ಎಂಬುದಾಗಿ ಸಂಸ್ಕೃತ ವಿದ್ವಾಂಸರು ಹಾಗೂ ನಿವೃತ್ತ ಪ್ರಾಧ್ಯಾಪಕರೂ ಆಗಿರುವ ವಿದ್ಯಾವಾರಿಧಿ ಡಾ. ವಾಗೀಶ್ವರೀ ಶಿವರಾಮ್ ಅವರು ಇಲ್ಲಿ ಮಾತನಾಡುತ್ತಾ ತಿಳಿಸಿದರು.
ಕನ್ನಡ ಸಂಘ ಕಾಂತಾವರ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ಮತ್ತು ಅಲ್ಲಮಪ್ರಭು ಪೀಠ ಕಾಂತಾವರ ಇವುಗಳ ಸಹಯೋಗದಲ್ಲಿ ನವಂಬರ್ ೧೬ರಂದು ಕಾರ್ಕಳದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ನಡೆದ ತಿಂಗಳ ಉಪನ್ಯಾಸ ‘ಅರಿವು ತಿಳಿವು’ ಕಾರ್ಯಕ್ರಮದಲ್ಲಿ ಅವರು ‘ಬೃಹದಾರಣ್ಯಕ ಉಪನಿಷತ್ತು’ ಇದರ ಕುರಿತು ಉಪನ್ಯಾಸ ನೀಡಿದರು.
ನಮ್ಮ ವಿವೇಕದ ಪ್ರಜ್ಞೆಯನ್ನು ಜಾಗ್ರತಗೊಳಿಸಿ ಪಂಚೇಂದ್ರಿಯಗಳಿಗೆ ನಿಲುಕುವ ಭೌತಿಕ ಜ್ಞಾನವನ್ನು ಮೀರಿದ ಇಂದ್ರಿಯಾತೀತ ಜ್ಞಾನವನ್ನು ನೀಡುವ ಉಪನಿಷತ್ತುಗಳು ಜ್ಞಾನದ ಬೆಳಕಿನೆಡೆಗೆ ನಮ್ಮನ್ನು ಕರೆದೊಯ್ಯುತ್ತವೆ. ನಮ್ಮನ್ನು ದುರ್ಬಲಗೊಳಿಸುವ ಅಹಂಕಾರ, ಮಮಕಾರ, ನಕಾರಾತ್ಮಕ ಚಿಂತನೆಗಳನ್ನು ಹೋಗಲಾಡಿಸಿ ಲೋಕಹಿತದ ಕಾರ್ಯದಲ್ಲಿಯೇ ಆನಂದವನ್ನು ಕಂಡುಕೊಳ್ಳುವ ಬಗ್ಗೆ ಉಪನಿಷತ್ತು ನಮಗೆ ಮಾರ್ಗದರ್ಶನ ನೀಡುತ್ತದೆ ಅಂದರು.
ಡಾ.ನಾ.ಮೊಗಸಾಲೆಯವರು ಸಭಾಧ್ಯಕ್ಷತೆಯನ್ನು ವಹಿಸಿದ್ದು ಶ್ರೀ ನಿತ್ಯಾನಂದ ಪೈ ಮತ್ತು ಶ್ರೀಮತಿ ಮಿತ್ರಪ್ರಭಾ ಹೆಗ್ಡೆಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಗೀತಾ ಮಲ್ಯ ಪ್ರಾರ್ಥಿಸಿ ಶ್ರೀಮತಿ ಪೂರ್ಣಿಮಾ ಶೆಣೈಯವರು ಅತಿಥಿಗಳನ್ನು ಪರಿಚಯಿಸಿದರು. ಶ್ರೀಮತಿ ಮಾಲತಿ ವಸಂತರಾಜ್ ಕಾರ್ಯಕ್ರಮ ನಿರೂಪಿಸಿದರು. ಸದಾನಂದ ನಾರಾವಿ ಸ್ವಾಗತಿಸಿ ಜಗದೀಶ್ ಗೋಖಲೆ ವಂದಿಸಿದರು.



















