
ಚಿಕ್ಕಮಗಳೂರು: ಡಿ.11 ರಿಂದ 14ರ ವರೆಗೆ ಮುಳ್ಳಯ್ಯನಗಿರಿ ಭಾಗದ ದತ್ತಪೀಠದಲ್ಲಿ ದತ್ತಜಯಂತಿ ಪ್ರಯುಕ್ತ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.
ಜಿಲ್ಲಾಡಳಿತವು ಡಿ.11 ರ ಬೆಳಗ್ಗೆ 6 ಗಂಟೆಯಿಂದ ಡಿ.15ರ ಬೆಳಗ್ಗೆ 10 ಗಂಟೆವರೆಗೂ ಪ್ರವಾಸಿಗರಿಗೆ ಸಂಪೂರ್ಣ ನಿಷೇಧ ಹೇರಿದ್ದು ಈ ನಾಲ್ಕು ದಿನಗಳ ಕಾಲ ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ, ಗಾಳಿಕೆರೆ, ಮಾಣಿಕ್ಯಾಧಾರ ಸೇರಿದಂತೆ ಪಶ್ಚಿಮ ಘಟ್ಟಗಳ ಸಾಲಿನ ಎಲ್ಲಾ ಪ್ರವಾಸಿ ತಾಣಗಳಿಗೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ದತ್ತಪೀಠದಲ್ಲಿ 9 ದಿನಗಳ ಕಾಲ ದತ್ತಜಯಂತಿ ನಡೆಯಲಿದ್ದು ಅದರಲ್ಲಿ 12-13-14 ಈ ಮೂರು ದಿನಗಳು ಸೂಕ್ಷ್ಮ ದಿನಗಳಾಗಿವೆ. ಈ ಮೂರು ದಿನವೂ ದತ್ತಪೀಠದಲ್ಲಿ ನಾನಾ ಕಾರ್ಯಕ್ರಮಗಳು ನಡೆಯಲಿರುವ ಕಾರಣ ಮುಂಜಾಗೃತ ಕ್ರಮವಾಗಿ ಪ್ರವಾಸಿಗರ ವಾಹನ ಹಾಗೂ ದತ್ತ ಮಾಲಾಧಾರಿಗಳ ವಾಹನಗಳಿಂದ ಟ್ರಾಫಿಕ್ ಜಾಮ್ ಆಗಿ ಸಮಸ್ಯೆ ಆಗದಂತೆ ಹಾಗೂ ಭದ್ರತೆಯ ದೃಷ್ಠಿಯಿಂದ ಜಿಲ್ಲಾಡಳಿತ ಈ ನಿರ್ಧಾರ ತೆಗೆದುಕೊಂಡಿದೆ. ಕಾರ್ಯಕ್ರಮ ಮುಗಿಯುವವರೆಗೂ 5,000ಕ್ಕೂ ಅಧಿಕ ಪೊಲೀಸರು ದತ್ತಪೀಠ ಸೇರಿ ಜಿಲ್ಲಾದ್ಯಂತ ಭದ್ರತೆ ಒದಗಿಸಲಿದ್ದಾರೆ.



















