ಗುಣಮಟ್ಟದ ಶಿಕ್ಷಣದೊಂದಿಗೆ, ಸಮಾಜಮುಖಿ ಕಾರ್ಯ ಪ್ರಶಂಸನೀಯ: ಉದಯ ಶೆಟ್ಟಿ ಮುನಿಯಾಲು
ಶಿಕ್ಷಣ, ಧಾರ್ಮಿಕ,ಆರೋಗ್ಯ,ಹಲವು ರಂಗದಲ್ಲಿ ಕ್ರಿಯೇಟಿವ್ ಸಾಧನೆ: ಡಾ.ರವೀಂದ್ರ ಶೆಟ್ಟಿ ಬಜಗೋಳಿ
ಗ್ರಾಮದ ಅಭಿವೃದ್ಧಿಗೆ, ಕ್ರಿಯೇಟಿವ್ ಕೊಡುಗೆ ಮಹತ್ವವಾದದು: ಸಂತೋಷ್ ಶೆಟ್ಟಿ
ಸಹಕಾರದಿಂದ ಬದುಕೋಣ: ಆದರ್ಶ್. ಎಂ. ಕೆ
ಕ್ರಿಯೇಟಿವ್ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿ ಉದ್ಘಾಟನಾ ಕಾರ್ಯಕ್ರಮ

ಕಾರ್ಕಳ: ಕ್ರಿಯೆಟಿವ್ ಶಿಕ್ಷಣ ಸಂಸ್ಥೆಗಳು ಸೃಜನಾತ್ಮಕ ಚಟುವಟಿಕೆಗಳಿಗೆ ಹೊಸ ರೂಪ ನೀಡುವ ಮೂಲಕ ಗ್ರಾಮಾಭಿವೃದ್ಧಿಗೆ ಸಹಕಾರ ನೀಡುತ್ತಿದೆ ಎಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು.
ಅವರು ಕಾರ್ಕಳದ ಹಿರ್ಗಾನದಲ್ಲಿರುವ ಮಾವಿನಕಟ್ಟೆಯ ಪಿಂಟೋ ಅವೆನ್ಯೂನಲ್ಲಿ ಸ್ಥಾಪಿಸಲಾದ ಕ್ರಿಯೇಟಿವ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯನ್ನು ಉದ್ಘಾಟಿಸಿ,
ಬಳಿಕ ಕಾಲೇಜಿನ ಸಪ್ತಸ್ವರ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಕ್ರಿಯೇಟಿವ್ ಕಾಲೇಜು ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಬೆಳೆಯುತ್ತಿದ್ದು, ಶೈಕ್ಷಣಿಕ ಕ್ಷೇತ್ರದ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿಯೂ ಪ್ರೇರಣೆಯಾಗುತ್ತಿದೆ. ಪುಸ್ತಕ ಮನೆ ಮೂಲಕ ಸುಮಾರು 85 ಸಾವಿರಕ್ಕೂ ಹೆಚ್ಚು ಪುಸ್ತಕಗಳ ವಿತರಣೆಯಾಗಿದ್ದು, ಯುವ ಸಮುದಾಯಕ್ಕೆ ಸ್ಪೂರ್ತಿದಾಯಕ ಕಾರ್ಯಗಳನ್ನು ಮಾಡುತ್ತಿದೆ. ಕಾರ್ಕಳದ ಅಭಿವೃದ್ಧಿಗೆ ಕ್ರಿಯೇಟಿವ್ ಸಂಸ್ಥೆಯ ಕೊಡುಗೆ ಅಪಾರವಾಗಿದೆ ಎಂದರು..
ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಮಾತನಾಡಿ, ಕ್ರಿಯೇಟಿವ್ ಸಂಸ್ಥೆ ಗುಣಮಟ್ಟದ ಶಿಕ್ಷಣ ಮತ್ತು ಸೃಜನಾತ್ಮಕ ಚಟುವಟಿಕೆಗಳ ಮೂಲಕ ಹೆಸರುವಾಸಿಯಾಗಿದೆ. ಕ್ರಿಯೇಟಿವ್ ಸಂಸ್ಥೆಯಿಂದ ಇನ್ನಷ್ಟು ಸಮಾಜಮುಖಿ ಕಾರ್ಯಗಳಾಗಲಿ ಸಂಸ್ಥೆ ಬೆಳೆಯಲಿ ಎಂದು ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಉಡುಪಿ ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕರಾದ ಲಾವಣ್ಯ ಕೆ.ಆರ್, ಸಹಕಾರಿ ಸಂಸ್ಥೆಗಳು ಸಾಮಾಜಿಕ ಸೇವೆಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿವೆ. ರಾಷ್ಟ್ರೀಕೃತ ಬ್ಯಾಂಕುಗಳ ಭಾಷಾ ಸಮಸ್ಯೆಯಿಂದ ಗ್ರಾಮೀಣ ಜನರಿಗೆ ಸೇವೆ ತಲುಪಲು ಅಡಚಣೆ ಉಂಟಾಗಿದ್ದು, ಈ ಕೊರತೆಯನ್ನು ಸಹಕಾರಿ ಸಂಸ್ಥೆಗಳು ಭರಿಸುತ್ತಿವೆ ಎಂದು ಹೇಳಿದರು.
ರಾಜ್ಯ ಕ್ರಷರ್ ಅಸೋಸಿಯೇಶನ್ ಅಧ್ಯಕ್ಷ, ಡಾಕ್ಟರ್ ರವೀಂದ್ರ ಶೆಟ್ಟಿ ಮಾತನಾಡಿ, ಶಿಕ್ಷಣ ಸಂಸ್ಥೆಗಳ ಮೂಲಕ ಧಾರ್ಮಿಕ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಮಾಜ ನಿರ್ಮಾಣದ ಕಾರ್ಯ ನಡೆಯುತ್ತಿದೆ ಎಂದರು.
ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಿರ್ಗಾನ ಸಂತೋಷ್ ಶೆಟ್ಟಿ ಮಾತನಾಡಿ, ಹಿರ್ಗಾನದ ಅಭಿವೃದ್ಧಿಗೆ ಈ ಸಂಸ್ಥೆಯ ಕೊಡುಗೆ ಮಹತ್ವದ್ದಾಗಿದೆ. ಪಂಚಾಯತ್ ಆದಾಯವೂ ಹೆಚ್ಚಾಗಿದೆ ಎಂದರು.
ಕ್ರಿಯೇಟಿವ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಡಾ. ಗಣನಾಥ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿ, ಕ್ರಿಯೇಟಿವ್ ಸಂಸ್ಥೆ 642 ಜನರಿಗೆ ಉದ್ಯೋಗ ಒದಗಿಸಿದೆ. ಬಂಡವಾಳ ಸಂಗ್ರಹಿಸಿ ಸೇವೆ ನೀಡುವ ಮೂಲಕ ಗ್ರಾಮಾಭಿವೃದ್ಧಿಗೆ ಕೊಡುಗೆ ನೀಡುತ್ತಿದೆ. ಸುಮಾರು 5 ಕೋಟಿ ರೂಪಾಯಿಗಳನ್ನು ಉಚಿತ ಶಿಕ್ಷಣಕ್ಕೆ ವಿನಿಯೋಗಿಸಿದ್ದು, ಪುಸ್ತಕ ಮನೆ ಮೂಲಕ ಲಕ್ಷಾಂತರ ಪ್ರಕಟಣೆಗಳನ್ನು ವಿತರಿಸಲಾಗಿದೆ. ಸಿಇಟಿ, ನೀಟ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳನ್ನು ಸರ್ಕಾರಿ ಕಾಲೇಜುಗಳಿಗೆ ನೀಡಲಾಗುತ್ತಿದೆ ಎಂದರು.
ಸಾಮಾಜಿಕ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿಯೂ ಕ್ರಿಯೇಟಿವ್ ಸಂಸ್ಥೆ ಮಹತ್ವದ ಹೆಜ್ಜೆ ಇಡುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆದರ್ಶ ಎಂ.ಕೆ. ಮಾತನಾಡಿ, ಗ್ರಾಮದಲ್ಲಿ ಸಹಕಾರವೇ ಮುಖ್ಯ, ಸಹಕಾರದಿಂದ ಬದುಕೋಣ ಎಂದು ಹೇಳಿದರು.
ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಸಿರಿಯಣ್ಣ ಶೆಟ್ಟಿ ಶುಭಾಶಯ ಕೋರಿದರು.
ಉಪಾಧ್ಯಕ್ಷರಾದ ಅಶ್ವತ್ ಎಸ್.ಎಲ್., ವಿಮಲ್ ರಾಜ್, ಅಮೃತ್ ರೈ, ವಿದ್ವಾನ್ ಗಣಪತಿ ಭಟ್, ರವಿ ಹೆಗಡೆ, ಆಶಾ ಕೆ.ಎಲ್, ಗಣಪತಿ ಭಟ್., ಸುನೀಲ್ ಶೆಟ್ಟಿ, ಅಕ್ಷತಾ, ರಶ್ಮಿ, ಹರೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬಿ.ಎಂ. ಶಾಲೆಗೆ ಹಾಗೂ ಅಗತ್ಯವಿರುವವರಿಗೆ ಧನಸಹಾಯ ವಿತರಿಸಲಾಯಿತು. ಷೇರುದಾರರಿಗೆ ಪ್ರಮಾಣಪತ್ರಗಳು ಮತ್ತು ಸಾಲ ಸೌಲಭ್ಯಗಳನ್ನು ನೀಡಲಾಯಿತು. ನವಿನ್ ಪಿಂಟೋ, ಸುನೀಲ್ ಕುಮಾರ್ ಜಿ., ಯೋಗೀಶ್ ಇವರುಗಳನ್ನು ಗೌರವಿಸಲಾಯಿತು.
ಉಪನ್ಯಾಸಕ ಲೋಹಿತ್ ಕಾರ್ಯಕ್ರಮ ನಿರೂಪಿಸಿದರು. ಸೊಸೈಟಿಯ ಕಾರ್ಯನಿರ್ವಾಹಣಾಧಿಕಾರಿ ರವಿ ಹೆಗಡೆ ಧನ್ಯವಾದ ಅರ್ಪಿಸಿದರು.














