
ಮಂಗಳೂರು: ಕೆಲ ದಿನಗಳ ಹಿಂದೆ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ತಲಪಾಡಿ ಕೆ.ಸಿ.ರೋಡ್ ಶಾಖೆಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ತಮಿಳುನಾಡಿನ ತಿರುನಲ್ವೇಲಿಯಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಂಗಳೂರಿನಲ್ಲಿ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರು ಜನವರಿ 20ರಂದು ಈ ಕುರಿತು ಮಾತನಾಡಿ ಮೂವರು ಆರೋಪಿಗಳ ತೀವ್ರ ವಿಚಾರಣೆ ನಡೆಸಲಾಗುತ್ತಿದ್ದು, ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಂಡ ನಂತರ ಹೆಚ್ಚಿನ ಮಾಹಿತಿ ನೀಡುತ್ತೇವೆ. ಮುಂಬಯಿಯ ಧಾರಾವಿಯ ಡೆಡ್ಲಿ ಗ್ಯಾಂಗ್ ಸೇರಿದ ಮುರುಗನ್ ಡಿ, ಮಣಿವಣ್ಣನ್ ಮತ್ತು ಪ್ರಕಾಶ್ ಅಲಿಯಾಸ್ ಜೋಶ್ವಾ ಬಂಧಿತ ಆರೋಪಿಗಳಾಗಿದ್ದು ಇವರ ಬಳಿ ಮಹಾರಾಷ್ಟ್ರದ ನೋಂದಣಿ ಸಂಖ್ಯೆಯ ಕಾರು, ಶಸ್ತ್ರಾಸ್ತ್ರಗಳು, 2 ತಲವಾರು, 2 ಪಿಸ್ತೂಲುಗಳು ಮತ್ತು ಚಿನ್ನ ಮತ್ತು ಹಣ ತುಂಬಿದ ಗೋಣಿಚೀಲಗಳನ್ನು ಕೂಡ ವಶಪಡಿಸಿಕೊಂಡಿದ್ದೇವೆ ಎಂದು ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ಪೊಲೀಸ್ ತಂಡಗಳು ದರೋಡೆ ಕೃತ್ಯಕ್ಕೆ ಬಳಸಿದ್ದ ಕಾರನ್ನು ಬೆನ್ನಟ್ಟಿ ಕಾರ್ಯಾಚರಣೆ ನಡೆಸಿದ್ದು ದರೋಡೆಕೋರರು ದರೋಡೆ ನಡೆಸಿದ ಬಳಿಕ ತಲಪಾಡಿ ಟೋಲ್ ಮೂಲಕ ಕೇರಳಕ್ಕೆ ಪರಾರಿಯಾಗಿದ್ದರು.





















