ಮುಂಡ್ಲಿ ಕಾಂಗ್ರೆಸ್ ಕಾರ್ಯಕರ್ತರ ಸ್ಪಷ್ಟನೆ

ಕಾರ್ಕಳ :ಯಕ್ಷಗಾನ ಪ್ರದರ್ಶನ ತಡೆದ ಪ್ರಯತ್ನಕ್ಕೂ ,ಕಾಂಗ್ರೆಸ್ ಹಾಗೂ ನಾಯಕ ಮುನಿಯಾಲು ಉದಯ್ ಕುಮಾರ್ ಶೆಟ್ಟಿಯವರಿಗೂ ಯಾವ ಸಂಬಂಧವೂ ಇಲ್ಲ ಎಂದು ಮುಂಡ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತ ರಮೇಶ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.
ಜಾರ್ಕಳ ಮುಂಡ್ಲಿ ಗ್ರಾಮದಲ್ಲಿ ನಡೆದ ಯಕ್ಷಗಾನ ತಡೆದ ಪ್ರಯತ್ನದ ಹಿಂದೆ ಉದಯ್ ಕುಮಾರ್ ಶೆಟ್ಟಿಯವರ ಹೆಸರನ್ನು ಎಳೆದು ತರುವ ಮೂಲಕ ರಾಜಕೀಯ ತೀಟೆಯನ್ನು ತೀರಿಸಿಕೊಳ್ಳುವ ಬಿಜೆಪಿ ನಾಯಕರ ಪ್ರಯತ್ನ ನಾಚಿಕೇಡಿನ ಪರಮಾವಧಿ ಎಂದು ಅವರು ಹೇಳಿದ್ದಾರೆ.
ಯಕ್ಷಗಾನ ಪ್ರದರ್ಶನ ತಡೆಯಲು ಪೋಲಿಸರು ಮುಂದಾದಾಗ ಸಾರ್ವಜನಿಕರ ಮುಂದೆಯೇ ಸ್ವತಹ ಉದಯ್ ಕುಮಾರ್ ಶೆಟ್ಟಿಯವರು ದೂರವಾಣಿ ಮೂಲಕವಾಗಿ ಅಜೆಕಾರು ಠಾಣಾ ಉಪನಿರೀಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದು, ಯಕ್ಷಗಾನ ಯಾವುದೇ ತಡೆಯಿಲ್ಲದೆ ನಡೆಯಲು ಸಹಕಾರ ನೀಡಿದ್ದಾರೆ. ಈ ಬಗ್ಗೆ ಸ್ಪಷ್ಟನೆ ಬೇಕಾದಲ್ಲಿ ಅಲ್ಲಿದ್ದ ಸಾರ್ವಜನಿಕರನ್ನು ಅಥವಾ ಸಂಘಟಕರನ್ನು ಸಂಪರ್ಕಿಸಬಹುದು. ಊರಿನ ಕಾರ್ಯಕ್ರಮಗಳಲ್ಲಿ ಸಾಮರಸ್ಯದಿಂದ ಪಕ್ಷಾತೀತವಾಗಿ ಶ್ರಮವಹಿಸಿ ದುಡಿಯುವ ಗ್ರಾಮಸ್ಥರ ಮಧ್ಯೆ ವೈಷಮ್ಯ ಮೂಡಿಸಿ ರಾಜಕೀಯ ಬೇಳೆ ಬೇಯಿಸುವ ಬಿಜೆಪಿ ನಾಯಕರ ನಡೆಗೆ ನಮ್ಮಧಿಕ್ಕಾರವಿದೆ ಎಂದು ಅವರು ಪ್ರಕಟಣೆಯಲಿ ತಿಳಿಸಿದಾರೆ.





















