
ಬೆಂಗಳೂರು: ಶ್ರೀಮಂತ ರಾಜಕಾರಣಿಗಳು ಐಷಾರಾಮಿ ಜೀವನ ನಡೆಸುತ್ತಾರೆ ಎಂಬ ಮಾತಿನ ನಡುವೆ, ಸಿಎಂ ಡಿ.ಕೆ. ಶಿವಕುಮಾರ್ ಅವರ ₹ 50 ಹೇರ್ಕಟ್ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಇಂಗ್ಲಿಷ್ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಡಿಕೆಶಿ, ತಾವು ಸರಳ ಜೀವನವನ್ನು ಇಷ್ಟಪಡುತ್ತೇನೆ. ಇತ್ತೀಚೆಗೆ ದೆಹಲಿಗೆ ತೆರಳಿದ್ದಾಗ ಕೇವಲ ₹ 50 ನೀಡಿ ಹೇರ್ಕಟ್ ಮಾಡಿಸಿಕೊಂಡಿದ್ದೇನೆ. ಅಗತ್ಯವಿರುವಷ್ಟೇ ಹಣ ಖರ್ಚು ಮಾಡುತ್ತೇನೆ, ದುಂದುವೆಚ್ಚ ನನಗೆ ಇಷ್ಟವಿಲ್ಲ ಎಂದರು.
ಈ ಹೇಳಿಕೆಗೆ ನೆಟ್ಟಿಗರು ಹಾಗೂ ವಿರೋಧ ಪಕ್ಷದ ನಾಯಕರು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಈಗಿನ ಕಾಲದಲ್ಲಿ ₹ 50ಕ್ಕೆ ಹೇರ್ಕಟ್ ಮಾಡುವ ಬಾರ್ಬರ್ ಎಲ್ಲಿದ್ದಾರೆ ಎಂದು ಪ್ರಶ್ನಿಸಿರುವ ಅವರು, ಬಹುಶಃ ಮುಖ್ಯಮಂತ್ರಿಗಳು ಟಿಪ್ಸ್ ಕೊಡೋದನ್ನು ಹೇಳುತ್ತಿರಬೇಕೆಂದು ವ್ಯಂಗ್ಯ ಮಾಡಿದ್ದಾರೆ.
ಜೆಡಿಎಸ್ ಕೂಡ ಡಿಕೆ ಶಿವಕುಮಾರ್ ಅವರನ್ನು ಟೀಕಿಸಿದ್ದು, ₹ 50 ಹೇರ್ಕಟ್ ಬಗ್ಗೆ ಹೇಳುವ ಅವರು ರೊಲೆಕ್ಸ್ ವಾಚ್ ಧರಿಸುತ್ತಾರೆ. ಜನರು ನಿಮ್ಮ ಮಾತುಗಳನ್ನು ನಂಬುವ ಮುಟ್ಟಾಳರು ಎಂದು ಭಾವಿಸಿದ್ದೀರಾ ಎಂದು ಪ್ರಶ್ನಿಸಿದೆ. ಬಿಜೆಪಿ ಶಾಸಕ ಮಾಜಿ ಸಚಿವ ಸುರೇಶ್ ಕುಮಾರ್ ಕೂಡ ‘ಸಿಂಪಲ್ ಲಿವಿಂಗ್’ಗೂ ಡಿಕೆಶಿಗೂ ಸಂಬಂಧವಿದೆಯೇ ಎಂದು ವ್ಯಂಗ್ಯವಾಗಿ ಕೇಳಿದ್ದಾರೆ.
ಇದೇ ಸಂದರ್ಶನದಲ್ಲಿ ತಮ್ಮನ್ನು ‘ಕಾಂಗ್ರೆಸ್ನ ಅಮಿತ್ ಶಾ’ ಎಂದು ಕರೆಯುವುದಕ್ಕೂ ಡಿಕೆಶಿ ವಿರೋಧ ವ್ಯಕ್ತಪಡಿಸಿದರು. ತಾನು ಕಾಂಗ್ರೆಸ್ನ ಸಾಮಾನ್ಯ ಕಾರ್ಯಕರ್ತನಾಗಿದ್ದು, ಪಕ್ಷ ನೀಡುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದಷ್ಟೇ ತನ್ನ ಕರ್ತವ್ಯ ಎಂದು ಹೇಳಿದರು.
2028ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ: ಡಿಕೆಶಿ
2028ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ ಚುನಾವಣೆಗಿಂತಲೂ ಹೆಚ್ಚಿನ ಸ್ಥಾನಗಳನ್ನು ಪಕ್ಷ ಗೆಲ್ಲಲಿದೆ ಎಂದ ಅವರು, 2029ರ ಲೋಕಸಭಾ ಚುನಾವಣೆಯ ಬಳಿಕ ಕೇಂದ್ರದಲ್ಲೂ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾಗುವ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.





















































































