
ಬೆಂಗಳೂರು: ಸಚಿವ ಬಿ. ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಬಿಜೆಪಿ ಆಗ್ರಹಿಸುತ್ತಿರುವ ಬೆನ್ನಲ್ಲೇ, ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ನಾಗೇಂದ್ರ ಅವರನ್ನು ವಿಧಾನಸಭೆಯಲ್ಲಿ ಸಮರ್ಥಿಸಿಕೊಂಡಿದ್ದಾರೆ.
ಎಸ್ಐಟಿ ಸಲ್ಲಿಸಿರುವ ಪ್ರಾಥಮಿಕ ಹಾಗೂ ಹೆಚ್ಚುವರಿ ಆರೋಪಪಟ್ಟಿಗಳಲ್ಲಿ ನಾಗೇಂದ್ರ ಅವರ ಹೆಸರನ್ನು ಆರೋಪಿಯಾಗಿ ಸೇರಿಸಿಲ್ಲ. ಯಾವುದೇ ನ್ಯಾಯಾಲಯವೂ ಅವರನ್ನು ತಪ್ಪಿತಸ್ಥರೆಂದು ಘೋಷಿಸಿಲ್ಲ. ಹೀಗಾಗಿ ಅವರ ವಿರುದ್ಧದ ಪ್ರತಿಪಕ್ಷದ ಆರೋಪಗಳು ಆಧಾರರಹಿತ ಎಂದು ಪರಮೇಶ್ವರ್ ಹೇಳಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ₹187.33 ಕೋಟಿ ವರ್ಗಾವಣೆಯಾಗಿದ್ದು, ₹89.63 ಕೋಟಿ ಅಪರಿಚಿತ ಖಾತೆಗಳಿಗೆ ಹೋಗಿತ್ತು. ಪ್ರಕರಣದಲ್ಲಿ ಸಿಐಡಿ 14 ಮಂದಿಯನ್ನು ಬಂಧಿಸಿದ್ದು, ₹79.68 ಕೋಟಿ ಮೌಲ್ಯದ ಆಸ್ತಿ ವಶಪಡಿಸಿಕೊಂಡಿದೆ ಎಂದು ಮಾಹಿತಿ ನೀಡಿದರು.
ಪ್ರಕರಣದ ಹಿನ್ನೆಲೆಯಲ್ಲಿ ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಎಸ್ಐಟಿ ಎರಡು ಆರೋಪಪಟ್ಟಿ ಸಲ್ಲಿಸಿದ್ದರೂ ನಾಗೇಂದ್ರ ಅವರನ್ನು ಆರೋಪಿಯನ್ನಾಗಿ ಮಾಡಿಲ್ಲ. ಇ.ಡಿ. ಪ್ರಕರಣದಲ್ಲಿ ಅವರನ್ನು ಮೊದಲ ಆರೋಪಿಯನ್ನಾಗಿ ಹೆಸರಿಸಿದ್ದರೂ, ನ್ಯಾಯಾಲಯಗಳು ಅವರಿಗೆ ಜಾಮೀನು ಹಾಗೂ ನಿರೀಕ್ಷಣಾ ಜಾಮೀನು ನೀಡಿವೆ ಎಂದು ಪರಮೇಶ್ವರ್ ತಿಳಿಸಿದರು.
“ನಾಗೇಂದ್ರ ಅವರನ್ನು ಯಾವುದೇ ನ್ಯಾಯಾಲಯವೂ ತಪ್ಪಿತಸ್ಥರೆಂದು ಘೋಷಿಸಿಲ್ಲ” ಎಂದು ಅವರು ಸದನದಲ್ಲಿ ಪುನರುಚ್ಚರಿಸಿದರು.



















































































