ಭಾಗ – 641
ಭರತೇಶ ಶೆಟ್ಟಿ,ಎಕ್ಕಾರು

ರಾಜಾ ಕೌಶಿಕನು ವಸಿಷ್ಟರಲ್ಲಿ “ಪೂಜ್ಯ ಮಹರ್ಷಿಗಳೆ, ಸೇನಾ ಸಮೇತನಾಗಿ ಬೇಟೆಗಾಗಿ ಬಂದು, ಹಸಿವು ಬಾಯಾರಿಕೆಗಳಿಂದ ಕಂಗಾಲಾಗಿದ್ದೆವು. ಆ ಸಮಯ ನಮ್ಮ ಜೀವ ಉಳಿಸುವಷ್ಟು ಪುಣ್ಯಕ್ಕೆ ಸಮವಾದ ಊಟವನ್ನು ನೀವಿತ್ತಿದ್ದೀರಿ. ಇಂತಹ ಊಟ ಸ್ವಯಂ ಅರಸನಾಗಿ ನಮ್ಮ ಸಾಮ್ರಾಜ್ಯದ ಶ್ರೇಷ್ಟ ಪಾಕತಜ್ಞರು ಸಿದ್ಧಪಡಿಸಿದಾಗಲೂ ಸಿಕ್ಕಿಲ್ಲ. ನನ್ನ ಜೀವಮಾನದಲ್ಲಿ ಇಷ್ಟು ಉತ್ಕೃಷ್ಟವಾದ ಸವಿಯೂಟವನ್ನು ಉಂಡ ನೆನಪಿಲ್ಲ. ಈಗ ನನ್ನ ಮನದಲ್ಲಿ ಒಂದು ಕೌತುಕ ಉದ್ಭವಿಸಿದೆ. ತೀರಾ ಕಡಿಮೆ ಎನ್ನಬಹುದಾದಷ್ಟು ಸಮಯ ಅಂದರೆ ನಾವು ಮಿಂದು ಶುಚಿರ್ಭೂತರಾಗಿ ಬರುವುದರೊಳಗಾಗಿ ಇಷ್ಟೆಲ್ಲಾ ಸವಿಯಾದ ಸ್ವಾದಿಷ್ಟ ಭೋಜನ ಸಿದ್ಧ ಪಡಿಸಿದವರು ಯಾರು? ಹೇಗೆ ಸಾಧ್ಯವಾಯಿತು? ತಿಳಿಸಬಹುದೆ?” ಎಂದು ಪ್ರಶ್ನಿಸಿದನು.
ವಸಿಷ್ಟರು ಸತ್ಯವಾದಿಗಳು. ಸ್ವರ್ಗದ ಕಾಮಧೇನು ಸುತೆ ನಂದಿನಿಯಿಂದ ಇದು ಸಾಧ್ಯವಾಯಿತು. ಲೋಕ ಕಲ್ಯಾಣಾರ್ಥವಾಗಿ ಯಾಗ ವಿರಚಿಸುವಲ್ಲಿ ನಮ್ಮ ಸಹಾಯಕ್ಕಾಗಿ ದೇವೇಂದ್ರನಿಂದ ಬೇಡಿ ತಂದಿದ್ದೇನೆ ಎಂದು ಹೇಳಿದರು. ಆಗ ಕೌಶಿಕ ಮಹಾರಾಜ ಇನ್ನಷ್ಟು ಕುತೂಹಲಿಗನಾಗಿ ಸ್ವರ್ಗದ ಧೇನುವೇ! ನೋಡಬಹುದೆ ಎಂದು ಕೇಳಿದನು. ಆಗ ವಸಿಷ್ಟರು ಕಾಮಿಸಿದ್ದನ್ನು ಕರುಣಿಸುವ ಸುರಧೇನುವನ್ನು ತೋರಿಸಿದರು. ಆಹಾ ಏನು ಸೌಂದರ್ಯ, ರೂಪ ಲಾವಣ್ಯ, ತೇಜಸ್ಸು. ಧೇನುವಿನ ಪ್ರಧಾನ ಆರು ಅವಯವಗಳಾದ ತಲೆ, ಕತ್ತು , ಗಂಗೆದೊಗಲು, ಕೆಚ್ಚಲು, ಹಿಂಭಾಗದ ತೊಡೆಗಳು, ಕೆಚ್ಚಲು ತುಂಬಿಕೊಂಡು ವಿಶಾಲವಾಗಿ ಪುಷ್ಟವಾಗಿದೆ. ನಿರ್ಮಲವೂ, ಸುಕೋಮಲವೂ ಆದ ಧೇನುವಿನ ಪಕ್ಕೆಗಳು, ಕಾಲು, ಗೊರಸುಗಳು ಸುಲಕ್ಷಣವಾಗಿವೆ. ಹಣೆ, ಕಣ್ಣು ಮತ್ತು ಕಿವಿ ಈ ಮೂರೂ ಕಾಂತಿಯುತವಾಗಿವೆ. ಕೆಚ್ಚಲು ಉಬ್ಬಿಕೊಂಡು ತುಂಬಿದ ಕುಂಭದಂತಿದೆ, ಬಾಲವು ನೀಳವಾಗಿ ಪರಿಶುದ್ಧವಾಗಿದೆ. ಕಿವಿಗಳು ಕಲಶದಂತಿವೆ. ಕೊಂಬುಗಳು ಅಂಕುಶದಂತಿವೆ. ದಷ್ಟಪುಷ್ಟವಾಗಿ, ಆಕಾರ, ಅವಯವ, ಲಕ್ಷಣ ಯಾವುದರಲ್ಲೂ ಇದಕ್ಕಿಂತ ಪರಿಪೂರ್ಣತೆ ಇರಲು ಸಾಧ್ಯ ಇಲ್ಲ ಎಂಬಷ್ಟು ದೋಷರಹಿತವಾಗಿ ಮನೋಹರವಾಗಿದ್ದಾಳೆ. ನೋಡುತ್ತಿದ್ದ ಮಹಾರಾಜ ಕೌಶಿಕನ ಮನದ ಲೆಕ್ಕಾಚಾರ ಬದಲಾಯಿತು. “ಪೂಜ್ಯರೇ, ಇಂತಹ ಧೇನು ಮಹಾರಾಜನಾದ ನನಗೆ ಅತಿ ಉಪಯುಕ್ತ. ಈ ಧೇನುವಿಗೆ ಪ್ರತಿಯಾಗಿ ಹತ್ತುಕೋಟಿ ಉತ್ತಮ ಧೇನುಗಳನ್ನು, ಅವುಗಳ ಪರಿಚಾರಕರಾಗಿ ಗೋಪಾಲಕರನ್ನು, ಮೇವು, ಪಾಲನೆ ಪೋಷಣೆಗಾಗಿ ಸಾಕಷ್ಟು ಭೂಮಿಯನ್ನು ನಿಮಗೆ ಒದಗಿಸುತ್ತೇನೆ. ರಾಜ್ಯ ಹಾಗೂ ಪ್ರಜೆಗಳ ಪರಿಪಾಲಕನಾದ ನನಗೆ ಈ ಧೇನುವನ್ನು ನೀಡಬೇಕು. ಇದು ನನ್ನ ವಿನಮ್ರ ಬೇಡಿಕೆ. ಒಂದುವೇಳೆ ನೀವು ಒಪ್ಪುವುದಿಲ್ಲ ಎಂದಾದರೆ ರಾಜಾಜ್ಞೆಯಾಗಿ ಆದೇಶ ಮಾಡುತ್ತಿದ್ದೇನೆ. ಈ ಸುರಧೇನುವನ್ನು ನೀವು ನನಗೆ ನೀಡಲೇ ಬೇಕು” ಎಂದು ಅಧಿಕಾರಯುತವಾಗಿ ಕೇಳಿದನು.
ಆಗ ವಸಿಷ್ಟರು “ಅಯ್ಯಾ ರಾಜನೇ, ದೇವತೆಗಳು, ಅತಿಥಿಗಳು ಮತ್ತು ಪಿತೃಗಳು – ಇವರುಗಳ ಪೂಜೆಗೆ ಸುರಧೇನುವನ್ನು ಪ್ರಾರ್ಥಿಸಿದರೆ ಅನುಗ್ರಹಿಸುತ್ತಾಳೆ. ಈ ಸಮಯ ಲೋಕದ ಕ್ಷೇಮಕ್ಕಾಗಿ ಯಾಗ ಕಾರಣದಿಂದ ಆಕೆ ನಮ್ಮಲ್ಲಿ ಇದ್ದಾಳೆ. ಯಾಗ ಸಂಪನ್ನವಾದ ಬಳಿಕ ಆ ದಿವ್ಯ ಧೇನುವನ್ನು ಮರಳಿ ಸ್ವರ್ಗಕ್ಕೆ ಕಳುಹಿಸುವ ಜವಾಬ್ದಾರಿ ನಮ್ಮದು. ಹಾಗಾಗಿ ನೀನು ಏನು ವಿಶೇಷವಾದುದನ್ನು ನನಗಿತ್ತರೂ, ನಿನ್ನ ಪೂರ್ಣ ರಾಜ್ಯ, ರಾಜ ಪದವಿಯನ್ನು ಪ್ರತಿಯಾಗಿ ಕೊಟ್ಟರೂ ಈ ಧೇನುವನ್ನು ವ್ಯವಹಾರ ಮಾಡುವ ಸ್ವಾತಂತ್ರ್ಯ ನನಗಿಲ್ಲ. ಕಾರ್ಯ ಕಾರಣದಿಂದ ನಮ್ಮಲ್ಲಿಗೆ ಬೇಡಿ ಸುರಲೋಕದಿಂದ ಕರೆಸಿಕೊಳ್ಳಲಾಗಿದೆ. ಈ ಧೇನು ಸ್ವರ್ಗದ ಅಧಿಕಾರಕ್ಕೊಳಪಟ್ಟದ್ದು. ಪರರ ವಸ್ತುವನ್ನು ಬಯಸುವುದು ಧರ್ಮವಲ್ಲ. ಹಾಗಾಗಿ ನಿಮ್ಮ ಕೋರಿಕೆಯನ್ನು ಈಡೇರಿಸಲಾಗದು” ಎಂದು ವಿನಯದಿಂದ ವಿವರಿಸಿದರು.
ಆಗ ರಾಜ ಕೌಶಿಕನು “ಪೂಜ್ಯರೇ ನೀವು ತಪಸ್ಸು, ಧ್ಯಾನ, ವೇದಾಧ್ಯಯನಗಳನ್ನು ಸಾಧನೆಯ ಸಾಧನವಾಗಿಸಿ ಧರ್ಮ ನಿರತರಾದವರು. ಪ್ರಶಾಂತರು, ಮನೋಜಯವರು ಆದವರಾಗಿದ್ದೀರಿ. ನಿಮ್ಮ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ ನಾನು ಕ್ಷತ್ರಿಯನು. ಕ್ಷಾತ್ರಧರ್ಮ ಪಾಲನೆ ನನಗೆ ವಿಹಿತವಾದುದು. ಅರಸ ಏನಾದರು ಬಯಸಿದರೆ ಅದನ್ನು ಹಿತ ಅಥವಾ ಅಹಿತ ಮಾರ್ಗದಿಂದ ಸ್ವಾಧೀನ ಪಡಿಸಿಕೊಳ್ಳುವ ಅಧಿಕಾರ ಪ್ರದತ್ತವಾಗಿದೆ. ನಿಮ್ಮ ಜ್ಞಾನಶಕ್ತಿಯಿದ್ದರೂ ನನ್ನಂತೆ ಪರಾಕ್ರಮವಿಲ್ಲ. ಇನ್ನೊಮ್ಮೆ ನಿಮ್ಮಲ್ಲಿ ಸಾಮ, ದಾನದಿಂದ ಬೇಡಿ ಭೇದ ವ್ಯತ್ಯಾಸವನ್ನೂ ಹೇಳಿ ಕೇಳುತ್ತಿದ್ದೇನೆ. ಇದ್ಯಾವುದಕ್ಕೂ ನೀವು ಒಪ್ಪದೆ ಉಳಿದರೆ ದಂಡ ಪ್ರಯೋಗಕ್ಕೆ ನಾನು ಮುಂದಾಗಬೇಕಾಗುತ್ತದೆ. ಬಲವಂತವಾಗಿ ಈ ಧೇನುವನ್ನು ನನ್ನ ವಶಕ್ಕೆ ಪಡಕೊಳ್ಳುತ್ತೇನೆ. ಹಾಗಾಗಿ ನೀವು ಮತ್ತೊಮ್ಮೆ ಯೋಚಿಸಿ” ಎಂದು ದರ್ಪ ತೋರಿದನು.
ಶಾಂತಚಿತ್ತರಾದ ವಸಿಷ್ಟರ ತಲೆಗೇರುವ ಅಧಿಕಾರ ಕ್ರೋಧಕ್ಕಿದೆಯೆ?
“ಮಹಾರಾಜನೇ! ನಿನ್ನ ಬಳಿ ಬಲವಿದೆ, ಪರಾಕ್ರಮವಿದೆ ನಿಜ. ಕ್ಷಾತ್ರ ಧರ್ಮ ಪಾಲಿಸುವಲ್ಲೂ ಮತ್ತೊಮ್ಮೆ ವಿವೇಚಿಸಿ ತೀರ್ಮಾನ ಕೈಗೊಳ್ಳಬೇಕು. ಪರರ ಸೊತ್ತು ಬಯಸಬಾರದು. ಉಂಡ ಮನೆಗೆ ಎರಡು ಬಗೆಯಬಾರದು. ಹಾಗಾಗಿ ನಿನ್ನ ಶ್ರೇಯಸ್ಸು ಯಾವುದರಿಂದ ಆಗಲಿದೆಯೊ ಆ ಮಾರ್ಗವನ್ನು ಅನುಸರಿಸಿ ನೀನು ಮುಂದುವರಿಯಲು ಸ್ವತಂತ್ರನು. ಹಾಗಂದ ಮಾತ್ರಕ್ಕೆ ನಾನು ಧೇನುವನ್ನು ನಿನಗೆ ನೀಡಲಾಗದು. ಅದು ನನ್ನ ಸ್ವಂತದ್ದಲ್ಲ. ಎರವಲಾಗಿ ಯಾಗ ಕಾರ್ಯಕ್ಕಾಗಿ ಮಾತ್ರ ಕರೆತರಲಾಗಿದೆ” ಎಂದು ಸಮಾಧಾನದಿಂದ ಉತ್ತರಿಸಿದರು.
ರಾಜ ಕೌಶಿಕನು ತಡಮಾಡದೆ, ತನ್ನ ಸೈನಿಕರಿಗೆ ಧೇನುವನ್ನು ಎಳೆದು ತರಲು ಆಜ್ಞೆ ಮಾಡಿ ಬಿಟ್ಟನು. ರಾಜ ಭಟರು ಚಾವಟಿ ಚಮ್ಮಟಿಕೆಗಳನ್ನು ಹಿಡಿದು ಧೇನುವನ್ನು ಅಟ್ಟಿಸಿಕೊಂಡು ಬರಲು ಹೋದರೆ ಧೇನು ಕದಲಲಿಲ್ಲ. ಕೈಯಲ್ಲಿದ್ದ ಚಾವಟಿಯಿಂದ ಹೊಡೆದಾಗ ನಂದಿನಿಗೆ ನೋವಾಗಿ ಅಂತಿಂದಿತ್ತ ಓಡಾಡಿದಳಾದರೂ ವಸಿಷ್ಟರ ಆಶ್ರಮ ತೊರೆಯಲಿಲ್ಲ. ಮತ್ತೂ ಮತ್ತೂ ಬಲವಾದ ಹೊಡೆತಗಳು ಬೆನ್ನಮೇಲೆ ಬೀಳ ತೊಡಗಿದಾಗ ಜೋರಾಗಿ “ಅಂಬಾ” “ಅಂಬಾ” ಎಂದು ಆರ್ತ ಸ್ವರದಿಂದ ಕೂಗುತ್ತಾ ವಸಿಷ್ಟರು ನಿಂತಲ್ಲಿಗೆ ಓಡಿದಳು.
ಮುಂದುವರಿಯುವುದು…





























































































































