ಆದರೆ, ಅಲ್ತಾಫ್ ಸಿಕ್ಕಿದಾಗ ಮಲಗಿದ್ದವರು, ಅಭಯ್ ಎಂದಾಗ ಅರಚುವಿಕೆ ಏಕೆ…?
ಯುವತಿಗೆ ಕನಿಷ್ಠ ಸಾಂತ್ವಾನ ಹೇಳದ, ರಾಷ್ಟ್ರೀಯ ಪಕ್ಷದ ರಾಜಕೀಯ ನಡೆ ಖೇದಕರ: ರವೀಂದ್ರ ಮೊಯ್ಲಿ

ಕಾರ್ಕಳ ಆ .27: ಅಮಾಯಕ ಯುವತಿಯನ್ನು ಕಾರಿನಲ್ಲಿ ಕರೆದೊಯ್ದು ಆಕೆಗೆ ಬಿಯರಿನಲ್ಲಿ ಡ್ರಗ್ಸ್ ಬೆರೆಸಿ ಅತ್ಯಾಚಾರ ಎಸಗಿ ಪೈಶಾಚಿಕ ಕೃತ್ಯ ನಡೆಸಿರುವುದು ಅತ್ಯಂತ ಖಂಡನೀಯ. ಆದರೆ ಈ ಘಟನೆಯ ಕುರಿತಾಗಲೀ ಆರೋಪಿಯ ಬಗ್ಗೆ ಆಗಲೀ ತುಟಿ ಬಿಚ್ಚದ ಕೆಲ ಕಾಂಗ್ರೆಸ್ ಕಾರ್ಯಕರ್ತರು ಈ ಪ್ರಕರಣದಲ್ಲಿ ಅತ್ಯಾಚಾರ ಆರೋಪಿಗೆ ಡ್ರಗ್ಸ್ ಪೂರೈಕೆ ಮಾಡಿರುವ ಆರೋಪದಲ್ಲಿ ಅಭಯ್ ಎಂಬಾತನ ಬಂಧನವಾದ ಕೂಡಲೇ ಮಲಗಿದ್ದ ಕಾಂಗ್ರೆಸ್ ಕಾರ್ಯಕರ್ತರು ಅರಚಿಕೊಳ್ಳುತ್ತಿದ್ದಾರೆ ಎಂದು ಕಾರ್ಕಳ ಬಿಜೆಪಿ ವಕ್ತಾರರಾದ ರವೀಂದ್ರ ಮೊಯ್ಲಿ ಅವರು ಕಿಡಿಕಾರಿದ್ದಾರೆ.
ಹಿಂದೂ ಯುವತಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಈಗಾಗಲೇ ಬಂಧಿತನಾಗಿರುವ ಆರೋಪಿ ಅಲ್ತಾಫ್ ಡ್ರಗ್ಸ್ ಜಾಲ, ಮಹಿಳೆಯರೊಂದಿಗೆ ಅನೈತಿಕ ಸಂಬಂಧ, ಅಕ್ರಮ ಮರಳುಗಾರಿಕೆ ಸೇರಿದಂತೆ ಹತ್ತಾರು ಕ್ರಿಮಿನಲ್ ಪ್ರಕರಣಗಳು ಈತನ ಮೇಲಿದೆ ಎಂದು ಹೇಳಲಾಗುತ್ತಿದೆ. ಈ ಪ್ರಕರಣದಲ್ಲಿ ಅತ್ಯಾಚಾರ ಆರೋಪಿಗೆ ಡ್ರಗ್ಸ್ ಪೂರೈಕೆ ಮಾಡಿರುವ ಆರೋಪದಲ್ಲಿ ಮೂರನೇ ಆರೋಪಿ ಅಭಯ್ ಎಂಬಾತನನ್ನು ಈಗಾಗಲೇ ಬಂಧಿಸಲಾಗಿದೆ. ಪೊಲೀಸರ ಈ ದಿಟ್ಟಕ್ರಮವನ್ನು ಕಾರ್ಕಳ ಬಿಜೆಪಿ ಶ್ಲಾಘಿಸುತ್ತದೆ.
ಅತ್ಯಾಚಾರ ಪ್ರಕರಣದಲ್ಲಿ ಡ್ರಗ್ಸ್ ಪೂರೈಕೆಯ ಆರೋಪದಲ್ಲಿ ಬಂಧಿತ ಆರೋಪಿ ಅಭಯ್ ಗೆ ಕೂಡಾ ಕಾನೂನು ರೀತಿ ಶಿಕ್ಷೆಯಾಗಬೇಕು ಎನ್ನುವುದು ಮತ್ತು ಕಾರ್ಕಳಕ್ಕೆ ಸರಬರಾಜಾಗುವ ಡ್ರಗ್ಸ್ ನ ಜಾಲವನ್ನೂ ಕೂಡ ಭೇಧಿಸಬೇಕು ಎಂಬುದು ಬಿಜೆಪಿಯ ಒತ್ತಾಯವಾಗಿದೆ. ಆದರೆ ಯುವತಿಯ ಮೇಲೆ ಅಮಾನುಷವಾಗಿ ಅತ್ಯಾಚಾರ ಎಸಗಿದ್ದ ಅಲ್ತಾಫ್ ಬಂಧನವಾದಾಗ ಈ ಪ್ರಕರಣದ ಬಗ್ಗೆ ಏನನ್ನೂ ಮಾತನಾಡದ ಕಾಂಗ್ರೆಸ್, ಇದೀಗ ಅಲ್ತಾಫ್ ನಿಗೆ ಮಾದಕ ದ್ರವ್ಯ ನೀಡಿದ ಆರೋಪದಲ್ಲಿ ಅಭಯ್ ಬಂಧನವಾದಾಗ ಆತ ಹಿಂದೂ, ಶಾಸಕರಾದ ಸುನಿಲ್ ಕುಮಾರ್ ರ ಚೇಲಾ ಎಂದೆಲ್ಲಾ ಬಿಂಬಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಅಪಪ್ರಚಾರ ಮಾಡಲು ಶುರು ಮಾಡಿದ್ದು ಕಾಂಗ್ರೆಸ್ಸಿಗರ ಮಾನಸಿಕತೆಯ ವಿಕಾರತೆ ಯಾವ ಮಟ್ಟಕ್ಕೆ ತಲುಪಿದೆ ಎನ್ನುವುದನ್ನು ತೋರಿಸುತ್ತದೆ.
ಇಡೀ ಸಮಾಜವೇ ತಲೆತಗ್ಗಿಸುವ ಈ ಹೀನ ಕೃತ್ಯದಲ್ಲಿ ಯಾವ ಧರ್ಮದವರು ಭಾಗಿಯಾಗಿದ್ದರೂ ಬಿಜೆಪಿ ಅದನ್ನು ಅತ್ಯಂತ ಉಗ್ರವಾಗಿ ಖಂಡಿಸುತ್ತದೆ.ಆದರೆ ಕಾಂಗ್ರೆಸ್ ಪಕ್ಷದ ನಾಯಕರು ನೊಂದ ಯುವತಿಯ ಕುಟುಂಬಕ್ಕೆ ಕನಿಷ್ಟ ಸಾಂತ್ವನ ಹೇಳುವ ಕೆಲಸವನ್ನೂ ಮಾಡದೇ, ಅಭಯ್ ವಿಚಾರವನ್ನೇ ಗುರಾಣಿಯಂತೆ ಬಳಸಿಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನ ಪಡುತ್ತಿರುವುದು ದುರದೃಷ್ಟಕರ. ಸಂತ್ರಸ್ತ ಯುವತಿಯ ಕುಟುಂಬದ ಪರವಾಗಿ ನಿಲ್ಲಬೇಕಾದ ಒಂದು ರಾಷ್ಟ್ರೀಯ ರಾಜಕೀಯ ಪಕ್ಷ ಈ ಮಟ್ಟಕ್ಕೆ ತಲುಪಿರುವುದು ಅತ್ಯಂತ ಖೇದಕರ ಎಂದು ಅವರು ತಿಳಿಸಿರುತ್ತಾರೆ.













