
ಮಂಗಳೂರು: ಸೆ.18ರಂದು ಮಂಗಳೂರಿನ ಪಡೀಲ್ನಲ್ಲಿರುವ ಜಿಲ್ಲಾಧಿಕಾರಿ ಕಚೇರಿ ‘ಪ್ರಜಾಸೌಧ’ದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ನಗರದಲ್ಲಿ ತಾತ್ಕಾಲಿಕ ಸಂಚಾರ ಬದಲಾವಣೆ ಮಾಡಲಾಗಿದೆ. ಗಣ್ಯರ ಭದ್ರತೆ ಹಾಗೂ ವಾಹನ ಸಂಚಾರದ ಸುಗಮತೆಗೆ ಮಂಗಳೂರು ನಗರ ಪೊಲೀಸರು ಸಾರ್ವಜನಿಕರಿಗೆ ಮಾರ್ಗಸೂಚಿ ಪ್ರಕಟಿಸಿದ್ದಾರೆ.
ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವರು ಸೆ.17ರ ಸಂಜೆ ಮಂಗಳೂರಿಗೆ ಆಗಮಿಸಲಿದ್ದು, ಸೆ.18ರ ಬೆಳಗ್ಗೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಪ್ರಜಾಸೌಧ ತಲುಪಲಿದ್ದಾರೆ. ಸಭೆ ಬಳಿಕ ಮೇರಿಹಿಲ್ ಹೆಲಿಪ್ಯಾಡ್ ಮೂಲಕ ಉಡುಪಿಗೆ ತೆರಳಿ, ಬಳಿಕ ಮಂಗಳೂರಿಗೆ ವಾಪಸಾಗಿ ವಾಸ್ತವ್ಯ ಹೂಡಲಿದ್ದಾರೆ. ಸೆ.19ರ ಬೆಳಗ್ಗೆ ನಗರದಿಂದ ನಿರ್ಗಮಿಸಲಿದ್ದಾರೆ.
ಬಜಪೆ ವಿಮಾನ ನಿಲ್ದಾಣದಿಂದ ಕಾವೂರು, ಬೊಂದೇಲ್, ಮೇರಿಹಿಲ್, ಕೆ.ಪಿ.ಟಿ., ಕದ್ರಿ ಕಂಬಳ, ಬಂಟ್ಸ್ ಹಾಸ್ಟೆಲ್, ಅಂಬೇಡ್ಕರ್ ಜಂಕ್ಷನ್, ಹಂಪನಕಟ್ಟೆ, ಕ್ಲಾಕ್ ಟವರ್ ಹಾಗೂ ಹ್ಯಾಮಿಲ್ಟನ್ ಜಂಕ್ಷನ್ ಮಾರ್ಗದಲ್ಲಿ ಗಣ್ಯರ ಸಂಚಾರ ಇರಲಿದೆ. ಸೆ.18ರ ಬೆಳಗ್ಗೆ ಹ್ಯಾಮಿಲ್ಟನ್ ಜಂಕ್ಷನ್ನಿಂದ ಕ್ಲಾಕ್ ಟವರ್, ಹಂಪನಕಟ್ಟೆ, ಅಂಬೇಡ್ಕರ್ ಜಂಕ್ಷನ್, ಕೆ.ಪಿ.ಟಿ., ನಂತೂರು, ಪಂಪುವೆಲ್, ನಾಗುರಿ, ಬಜಾಲ್ ಕ್ರಾಸ್ ಮೂಲಕ ಪಡೀಲ್ಗೆ ಸಂಚಾರ ನಡೆಯಲಿದೆ.
ಬದ್ರಿಯಾ ಜಂಕ್ಷನ್–ತಾಜ್ ವಿವಾಂತ್ ಮಾರ್ಗದ ವಾಹನಗಳು ನಿಲೇಶ್ವರ ರಸ್ತೆ–ರೋಸಾರಿಯೋ ರಸ್ತೆ ಬಳಸಬೇಕು. ಹ್ಯಾಮಿಲ್ಟನ್ ಜಂಕ್ಷನ್ನಿಂದ ಬದ್ರಿಯಾ ಜಂಕ್ಷನ್ ಕಡೆಗೆ ತೆರಳುವವರು ನೆಲ್ಲಿಕಾಯಿ ರಸ್ತೆಯನ್ನು ಪರ್ಯಾಯವಾಗಿ ಬಳಸುವಂತೆ ಸೂಚಿಸಲಾಗಿದೆ.
ಪಂಪುವೆಲ್–ನಾಗುರಿ–ಪಡೀಲ್ ಮಾರ್ಗದ ವಾಹನಗಳು ನಂತೂರು–ಕೈಕಂಬ–ಮರೋಳಿ ಮೂಲಕ ಸಂಚರಿಸಬಹುದು. ಪರ್ಯಾಯವಾಗಿ ತೊಕ್ಕೊಟ್ಟು–ದೇರಳಕಟ್ಟೆ–ಮುಡಿಪು–ಬೊಳಿಯಾರ್–ಮೆಲ್ಕಾರ್ ಮಾರ್ಗವನ್ನೂ ಬಳಸಬಹುದಾಗಿದೆ.
ಬಜಾಲ್ ಕ್ರಾಸ್ನಿಂದ ಬಜಾಲ್ ಅಥವಾ ಕಂಕನಾಡಿ ಜಂಕ್ಷನ್ ರೈಲು ನಿಲ್ದಾಣದ ಕಡೆಗೆ ತೆರಳುವ ವಾಹನಗಳು ಪಡೀಲ್–ಬಜಾಲ್ ಮಾರ್ಗದ ಬದಲು ರಾಷ್ಟ್ರೀಯ ಹೆದ್ದಾರಿ 66 ಮೂಲಕ ಜಪ್ಪಿನಮೊಗರು ದ್ವಾರ–ಬಜಾಲ್ ಮಾರ್ಗ ಬಳಸಬೇಕು. ತೊಕ್ಕೊಟ್ಟಿನಿಂದ ಪಂಪುವೆಲ್ ಕಡೆಗೆ ಬರುವ ವಾಹನಗಳು ಮಹಾಕಾಳಿಪಡ್ಪು–ಮಂಗಳಾದೇವಿ ಮೂಲಕ ನಗರ ಪ್ರವೇಶಿಸಬಹುದು.
ಗಣ್ಯರ ಸಂಚಾರದ ಮಾರ್ಗಗಳಲ್ಲಿ ರಸ್ತೆಬದಿಯಲ್ಲಿ ವಾಹನ ನಿಲುಗಡೆ ಮಾಡದಂತೆ ಪೊಲೀಸರು ಮನವಿ ಮಾಡಿದ್ದಾರೆ. ಆಂಬ್ಯುಲೆನ್ಸ್ ಸೇರಿದಂತೆ ತುರ್ತು ಸೇವಾ ವಾಹನಗಳ ಸಂಚಾರಕ್ಕೆ ಅಡಚಣೆಯಾಗದಂತೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಾರ್ವಜನಿಕರು ಅನಗತ್ಯ ಸಂಚಾರ ತಪ್ಪಿಸಿ ಪರ್ಯಾಯ ಮಾರ್ಗ ಬಳಸುವಂತೆ ಕೋರಲಾಗಿದೆ.
ಗಣ್ಯರ ಸ್ವಾಗತಕ್ಕೆ ಸಿಂಗಾರಗೊಂಡ ಮಂಗಳೂರು
ಮುಖ್ಯಮಂತ್ರಿ ಹಾಗೂ ಸಚಿವರ ಆಗಮನದ ಹಿನ್ನೆಲೆಯಲ್ಲಿ ಮಂಗಳೂರಿನ ಪ್ರಮುಖ ರಸ್ತೆಗಳು ನವಕಳೆಯಿಂದ ಕಂಗೊಳಿಸುತ್ತಿವೆ. ಬಜಪೆ ವಿಮಾನ ನಿಲ್ದಾಣ ರಸ್ತೆ, ಪಡೀಲ್ ಪ್ರಜಾಸೌಧ ರಸ್ತೆ, ಸರ್ಕ್ಯೂಟ್ ಹೌಸ್ ಹಾಗೂ ತಾಜ್ ವಿವಾಂತ್ ಸುತ್ತಮುತ್ತ ಸ್ವಚ್ಛತಾ ಕಾರ್ಯ ನಡೆಸಲಾಗಿದೆ.
ರಸ್ತೆ ಡಿವೈಡರ್ಗಳಿಗೆ ಹೊಸ ಬಣ್ಣ ಬಳಿದು, ಹೆಚ್ಚುವರಿ ಎಲ್ಇಡಿ ದೀಪಗಳನ್ನು ಅಳವಡಿಸಲಾಗಿದೆ. ಪ್ರಜಾಸೌಧದ ಸುತ್ತಮುತ್ತಲೂ ವಿಶೇಷ ಅಲಂಕಾರ ಕೈಗೊಳ್ಳಲಾಗಿದೆ.
ತಣ್ಣೀರುಬಾವಿ ಕಡಲತೀರದಲ್ಲಿ ವಿಶೇಷ ಔತಣ
ಮುಖ್ಯಮಂತ್ರಿ ಹಾಗೂ ಸಚಿವರಿಗೆ ಕರಾವಳಿಯ ಸಂಸ್ಕೃತಿ ಮತ್ತು ಆತಿಥ್ಯ ಪರಿಚಯಿಸುವ ಉದ್ದೇಶದಿಂದ ತಣ್ಣೀರುಬಾವಿ ಕಡಲತೀರದಲ್ಲಿ ವಿಶೇಷ ಔತಣಕೂಟ ಆಯೋಜಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ನೇತೃತ್ವದಲ್ಲಿ ಸಿದ್ಧತೆಗಳು ನಡೆಯುತ್ತಿವೆ.
ಕಡಲತೀರದಲ್ಲಿ ಆಕರ್ಷಕ ವಿದ್ಯುತ್ ದೀಪಾಲಂಕಾರದ ಪೆಂಡಾಲ್ ನಿರ್ಮಿಸಲಾಗಿದ್ದು, ತುಳುನಾಡಿನ ಸಂಸ್ಕೃತಿ–ಪರಂಪರೆ ಬಿಂಬಿಸುವ ಸ್ವಾಗತ ಕಮಾನುಗಳನ್ನು ಅಳವಡಿಸಲಾಗುತ್ತಿದೆ. ಕರಾವಳಿಯ ಸಾಂಪ್ರದಾಯಿಕ ತಿನಿಸುಗಳು, ವಿವಿಧ ಮೀನಿನ ಖಾದ್ಯಗಳು ಸೇರಿದಂತೆ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿದೆ.






























































































































