
ಉಡುಪಿ: ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಗಮನಾರ್ಹ ಸಂಖ್ಯೆಯಲ್ಲಿ ‘ಜೆನ್-ಜಿ’ ಯುವಕರು ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸುವ ಸಾಧ್ಯತೆ ಇದೆ ಎಂದು ರಾಜ್ಯಸಭಾ ಕಾಂಗ್ರೆಸ್ ಸದಸ್ಯ ಹಾಗೂ ಎಐಸಿಸಿ ಮಾಧ್ಯಮ ಮತ್ತು ಪ್ರಚಾರ ಘಟಕದ ಅಧ್ಯಕ್ಷ ಪವನ್ ಖೇರಾ ಹೇಳಿದರು.
ನಗರದ ಅರಮನೆ ಮೈದಾನದ ಚಾಮರ ವಜ್ರದಲ್ಲಿ ಆಯೋಜಿಸಿದ್ದ ‘ಜೆನ್-ಜಿ ಗಳೊಂದಿಗೆ ಜನಪ್ರತಿನಿಧಿಗಳ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಕಾಂಗ್ರೆಸ್ನ ಸಾಮಾಜಿಕ ಜಾಲತಾಣ, ಮಾಧ್ಯಮ ಹಾಗೂ ಪ್ರಚಾರ ಘಟಕಗಳಲ್ಲಿ ಯುವ ಪ್ರತಿಭೆಗಳಿಗೆ ಅವಕಾಶ ನೀಡುವಂತೆ ಪಕ್ಷದ ನಾಯಕ ರಾಹುಲ್ ಗಾಂಧಿ ಸೂಚಿಸಿದ್ದಾರೆ. ‘ಜೆನ್-ಜಿ’ಗಳ ಭಾಷಾ ಬಳಕೆ, ಅವರ ವಿಭಿನ್ನ ಆಲೋಚನೆಗಳು ಹಾಗೂ ಇತ್ತೀಚಿನ ದಿನಗಳಲ್ಲಿ ಅವರು ವಹಿಸುತ್ತಿರುವ ನಿರ್ಣಾಯಕ ಪಾತ್ರವನ್ನು ಗಮನದಲ್ಲಿಟ್ಟುಕೊಂಡು ಯುವ ಪ್ರತಿಭೆಗಳ ಹುಡುಕಾಟ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಉತ್ತಮ ರಾಜಕಾರಣಿಗಿಂತ ಉತ್ತಮ ನಾಯಕ ಮುಖ್ಯ
ಪ್ರಸ್ತುತ ರಾಜಕೀಯ ಕ್ಷೇತ್ರದಲ್ಲಿ ಉತ್ತಮ ರಾಜಕಾರಣಿ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಖೇರಾ, “ಉತ್ತಮ ರಾಜಕಾರಣಿಗಿಂತ ಉತ್ತಮ ನಾಯಕನನ್ನು ಹುಡುಕುವುದು ಮುಖ್ಯ. ಸದ್ಯದ ಪರಿಸ್ಥಿತಿಯಲ್ಲಿ ರಾಹುಲ್ ಗಾಂಧಿ ಅತ್ಯುತ್ತಮ ನಾಯಕನಾಗಿದ್ದು, ದೇಶದ ನಾಡಿಮಿಡಿತ ಅರಿತು ಜನರೊಂದಿಗೆ ಬೆರೆಯುತ್ತಾರೆ ಹಾಗೂ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ” ಎಂದು ಹೇಳಿದರು.
2029ರ ಚುನಾವಣೆ ಬಳಿಕ ರಾಹುಲ್ ಗಾಂಧಿ ಪ್ರಧಾನಿಯಾಗುತ್ತಾರೆಯೇ ಎಂಬ ಪ್ರಶ್ನೆಗೆ, “ಅದಕ್ಕಿಂತ ಮೊದಲೇ ಆದರೂ ಅಚ್ಚರಿ ಇಲ್ಲ. ನನ್ನ ಪ್ರಕಾರ 2029ಕ್ಕೂ ಮೊದಲು ರಾಹುಲ್ ಪ್ರಧಾನಿ ಆಗುತ್ತಾರೆ ಎಂಬ ವಿಶ್ವಾಸ ಇದೆ” ಹೇಳಿದರು.
ವಿಪಕ್ಷಗಳ ಕಲಾಪ ಬಹಿಷ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭೂಷಣವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಕ್ಕಿಗಾಗಿ ಹೋರಾಟ ನಡೆಸುತ್ತಿರುವ ‘ಜೆನ್-ಜಿ’ಗಳ ಮೇಲೆ ಪೆಲೆಟ್ ಗನ್ ಪ್ರಯೋಗದಂತಹ ಗಂಭೀರ ವಿಷಯಗಳ ಬಗ್ಗೆ ಚರ್ಚೆ ನಡೆಯುವ ಸಂದರ್ಭದಲ್ಲೂ ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರು ಉತ್ತರಿಸಲು ಸದನಕ್ಕೆ ಬಾರದಿದ್ದಾಗ, ಸರ್ಕಾರದ ಗಮನ ಸೆಳೆಯಲು ಕಲಾಪ ಬಹಿಷ್ಕಾರವೂ ಹೋರಾಟದ ಒಂದು ಭಾಗವಾಗುತ್ತದೆ ಎಂದು ಸಮರ್ಥಿಸಿಕೊಂಡರು.
ಐಎಎಸ್ ಅಧಿಕಾರಿಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪರೀಕ್ಷೆ ಕಡ್ಡಾಯವಾಗಿರುವಾಗ, ರಾಜಕೀಯ ನಾಯಕರಿಗೆ ಪರೀಕ್ಷೆ ಯಾಕಿಲ್ಲ ಎಂಬ ‘ಜೆನ್-ಜಿ’ ಯುವಕರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಖೇರಾ, ಪರೀಕ್ಷೆ ಎಂದರೆ ಒಂದೇ ರೀತಿಯದ್ದಲ್ಲ. ಜನಪ್ರತಿನಿಧಿಗಳು ಪ್ರತಿದಿನ ವಿವಿಧ ಸಂದರ್ಭಗಳಲ್ಲಿ ಪರೀಕ್ಷೆಗಳನ್ನು ಎದುರಿಸುತ್ತಲೇ ಇರುತ್ತಾರೆ. ಹಾಗಂತ ಶಿಕ್ಷಣದ ಅಗತ್ಯವಿಲ್ಲ ಎಂದಲ್ಲ, ರಾಜಕೀಯ ನಾಯಕರಿಗೂ ಕನಿಷ್ಠ ಶೈಕ್ಷಣಿಕ ಅರ್ಹತೆ ಮುಖ್ಯ ಎಂದು ಅವರು ಪ್ರತಿಪಾದಿಸಿದರು.























































































