ಭಾಗ – 632
ಭರತೇಶ ಶೆಟ್ಟಿ, ಎಕ್ಕಾರು

ಶ್ರೀಕೃಷ್ಣನ ಸಾರಥಿ ದಾರುಕನು ತಂದ ಸಂದೇಶವನ್ನು ಕೇಳಿ ತಿಳಿದು ಅರ್ಜುನನ ನಿರ್ದೇಶನದಲ್ಲಿ ಸೇನೆ ಪುರ ಪ್ರವೇಶ ಮಾಡುವ ಕ್ರಮದಲ್ಲಿ ಸಜ್ಜಾಗತೊಡಗಿತು. ಎಲ್ಲರಿಗಿಂತ ಮುಂದೆ ಬಲಗಡೆಗೆ ಪಾಂಡವರ ಯಾಗಾಶ್ವ. ಅದರ ಹಿಂದೆ ರಥಿಕನಾಗಿ ಅರ್ಜುನ ಮತ್ತು ವೃಷಕೇತು. ಹಾಗೆಯೆ ಎಡಬದಿಯಲ್ಲಿ ಎಲ್ಲರಿಗಿಂತ ಮುಂದೆ ರತ್ನಪುರದ ಯಾಗಾಶ್ವ ಅವುಗಳ ಹಿಂದೆ ಮಯೂರಧ್ವಜ ಮತ್ತು ತಾಮ್ರಧ್ವಜ. ಎಡ ಬಲಗಳಲ್ಲಿ ಪಾಂಡವರ ಮತ್ತು ಮಯೂರಧ್ವಜನ ಸೇನೆ ಮತ್ತು ಪ್ರದ್ಯುಮ್ನ, ಸಾತ್ಯಕಿ, ಕೃತವರ್ಮ, ಅನಿರುದ್ಧ ಮತ್ತು ಅವರವರ ಸೇನೆ. ಅದಕ್ಕಿಂತ ಹಿಂದೆ ಯವನಾಶ್ವ, ಅನುಸಾಲ್ವ, ನೀಲಧ್ವಜ, ಹಂಸಧ್ವಜ, ಬಬ್ರುವಾಹನ, ವೀರವರ್ಮ, ಚಂದ್ರಹಾಸ ಮತ್ತು ಅವರವರ ಸೇನೆಗಳು ಕ್ರಮವಾಗಿ ಸರ್ವಾಲಂಕಾರಗಳಿಂದ ಪದಾತಿ ಸೇನೆಗಳೊಂದಿಗೆ ನೂತನ ವಸ್ತ್ರಧಾರಣೆ ಮಾಡಿ ಸುಷೋಭಿತರಾಗಿ, ನಿಯತವಾದ ಸ್ಥಾನಗಳಲ್ಲಿ ನಿಂತು ಸಜ್ಜಾದವು. ರಥಿಕರ ರಥಗಳು ಧ್ವಜ ಪತಾಕೆಗಳಿಂದ ಶೋಭಿಸುತ್ತಾ ಸರತಿಯಲ್ಲಿ ಕ್ರಮವಾಗಿ ಮೆರುಗು ನೀಡುತ್ತಿವೆ. ಇಷ್ಟಾದ ಮೇಲೆ ಅನುಸರಿಸಿ ಹನ್ನೆರಡು ಸಾಲುಗಳಲ್ಲಿ ಕಪ್ಪವಾಗಿ ಸಂಗ್ರಹಿಸಿದ ಮುತ್ತು ರತ್ನ, ಧನ ಕನಕ, ವಸ್ತು ವಾಹನ, ಧಾನ್ಯ, ವನಸ್ಪತಿ, ವಸ್ತ್ರ ಒಡವೆ, ಅಮೂಲ್ಯ ಅನರ್ಘ್ಯ ವಸ್ತುಗಳು, ಸುಗಂಧ ದ್ರವ್ಯಗಳು, ಗೋವು, ತುರಗ, ಗಜ, ಒಂಟೆ, ಎತ್ತುಗಳು ಹೀಗೆ ಎಲ್ಲವೂ ಅವುಗಳ ಬಳಕೆಗನುಗುಣವಾಗಿ ಸ್ಥಾನ ಪಡೆದಿವೆ. ಗೋವುಗಳು ಮುಂದಿದ್ದರೆ ಆನೆ, ಹೇಸರಗತ್ತೆ, ಎತ್ತು, ಒಂಟೆಗಳು ಹೊರೆ ಹೊತ್ತುಕೊಂಡು ಸಜ್ಜಾಗಿವೆ. ತಲೆಹೊರೆಯವರು, ಬಂಡಿಗಳು, ಕನ್ನಡಿ ಹಿಡಿದವರು, ಈಟಿ ಭರ್ಚಿಯ ಕಾಳಾಳುಗಳು, ಎಲ್ಲರಿಗಿಂತ ಹಿಂದೆ ಕುದುರೆಯೇರಿದ ಕಟ್ಟಾಳುಗಳು. ಹೀಗೆ ಸಿದ್ಧವಾದ ಬಳಿಕ ಮಹಾನ್ ರಥಿಕರನ್ನೂ, ಗಜಾರೋಹಿಗಳಾದ ವಿಕ್ರಮಿಗಳನ್ನೂ, ವಿಶೇಷ ಬಲುಹುಳ್ಳ ತುರಗರೂಢ ಭಟರನ್ನೂ ಆರಿಸಿ ಇಷ್ಟೂ ಉದ್ದದ ಮೆರವಣಿಗೆ ಅಂತರ ಅಂತರದ ರಕ್ಷಾ ಆವರಣಗಳಾಗಿ ಮರು ನಿಯೋಜನೆಗೊಳಿಸಿ ಭದ್ರತೆಯ ವ್ಯವಸ್ಥೆಯನ್ನೂ ಮಾಡಲಾಯಿತು. ಸೇನೆಯಲ್ಲಿದ್ದ ವಾದ್ಯ, ವಾದನ, ಭೇರಿ, ಶಂಖ, ಹೀಗೆ ಸಂಗೀತ ಪರಿಕರಗಳೊಂದಿಗೆ ಇದ್ದ ಸಕಲ ಕಲಾ ವಾದ್ಯಗಾರರನ್ನು ಸರ್ವಾಂಗ ಸುಶೋಭಿತರನ್ನಾಗಿಸಿ ಮುಂದೆ ನಿಲ್ಲಿಸಿ ಮಂಗಳಕರ ವಿಜಯೋತ್ಸವಕ್ಕೊಪ್ಪುವ ವಾದನ ಮಾಡುವಂತೆ ಸೂಚನೆ ನೀಡಲಾಯಿತು. ಹೀಗೆ ಅಶ್ವಮೇಧ ಯಾಗದ ದಿಗ್ವಿಜಯ ಪೂರೈಸಿ ಬಂದಿದ್ದ ಸೇನೆ ಅರ್ಜುನನ ನಿರ್ದೇಶನ ಹಾಗು ಸೇನಾಪ್ರಮುಖರ ಸಲಹೆಯನ್ನಾಧರಿಸಿ ಸುಸಜ್ಜಿತವಾಗಿ ಪುರಪ್ರವೇಶಕ್ಕೆ ಸನ್ನದ್ಧ ವಾಯಿತು.
ಇತ್ತ ಹಸ್ತಿನೆಯ ಯಾಗಶಾಲೆಯಲ್ಲೂ ಆದರದ ಸ್ವಾಗತದೊಂದಿಗೆ ಸರ್ವತ್ರ ವಿಜಯ ಸಾಧಿಸಿ ಸಂಪದ್ಭರಿತವಾಗಿ ಬಂದಿರುವ ಸೇನಾಸಾಗರವನ್ನು ಇದಿರುಗೊಳ್ಳಲು ಸಕಲ ಸಿದ್ಧತೆಗಳಾದವು. ಎಲ್ಲರಿಗಿಂತ ಮುಂದೆ ಮಂಗಲದ್ರವ್ಯಗಳನ್ನು ಹಿಡಿದಿರುವ ಸುಮಂಗಲೆಯರು, ಕಲಶ ಕನ್ನಡಿಗಳನ್ನು ಹಿಡಿದಿರುವ ಮುತ್ತೈದೆಯರು, ಪರಿಮಳ ದ್ರವ್ಯಗಳನ್ನು ಹಿಡಿದಿರುವ ಸುಹಾಸಿನಿಯರು, ಆರತಿಗಳನ್ನು ಹಿಡಿದಿರುವ ಕನ್ನಿಕೆಯರು. ಹೀಗೆ ಒಂದು ವಿಭಾಗದ ಸ್ವಾಗತ ವ್ಯವಸ್ಥೆಯಾದರೆ, ಅದನ್ನು ಅನುಸರಿಸಿ ಪರಿವಾರ ಪರಿವೃತರಾಗಿ ಮಾದ್ರೇಯರು, ಅವರ ಹಿಂದೆ ಗಜಾರೋಹಿಯಾಗಿ ಭೀಮಸೇನ, ಮಂಗಳ ರಥಿಕನಾಗಿ ಶ್ರೀಕೃಷ್ಣ, ಅವರ ಹಿಂದೆ ಗೌರವ ರಕ್ಷಾ ಪಡೆ ನಿಯೋಜನೆಗೊಂಡಿತು. ಇವರ ಹಿಂಭಾಗದಲ್ಲಿ ಶ್ರೀಕೃಷ್ಣನ ಪಟ್ಟ ಮಹಿಷಿಯರಾದ ರುಕ್ಮಿಣಿ, ಸತ್ಯಭಾಮಾ, ಜಾಂಬವತಿ, ನಗ್ನಜಿತಿ, ಕಾಳಿಂದಿ, ಮದ್ರಾ, ಮಿತ್ರವೃಂದಾ, ಮತ್ತು ಭದ್ರಾ. ಅವರ ಜೊತೆಯಲ್ಲಿ ಸುಭದ್ರಾ ತನ್ನ ಅಂತಃಪುರದ ಸ್ತ್ರೀ ಪರಿವಾರದ ಜೊತೆ ಸ್ಥಿತಳಾದಳು. ಆಮೇಲೆ ಪುರ ಪ್ರಮುಖರು, ಪುರಜನ ಸ್ತ್ರೀಯರು, ಪ್ರಜಾ ಪರಿವಾರ ಇವರೆಲ್ಲರ ಸುತ್ತಲೂ ಸಂರಕ್ಷಣಾ ಸೇನೆ, ವಿವಿಧ ವಾದ್ಯ, ವಿನೋದಗಳು, ಆನೆಗಳು, ಕುದುರೆಗಳು, ರಥಗಳು, ಪದಾಥಿಗಳು, ಎಲ್ಲವೂ ಸಂಯೋಜನೆಗೊಂಡವು. ಇತ್ತ ನಕುಲ, ಸಹದೇವರ ನಾಯಕತ್ವದಲ್ಲಿ ಬಲಾಢ್ಯ ಸೇನೆ ಧರ್ಮರಾಯ ದ್ರೌಪದಿಯರು ಯಾಗದೀಕ್ಷಿತರಾಗಿರುವ ಯಾಗಮಂಟಪದ ರಕ್ಷಣೆಯಲ್ಲಿ ನಿಯೋಜನೆಗೊಂಡಿದೆ.
ಲೆಕ್ಕಾಚಾರದಂತೆ ಮುಹೂರ್ತವನ್ನು ಗಮನದಲ್ಲಿಟ್ಟುಕೊಂಡು ಸ್ವಾಗತ ಮೆರವಣಿಗೆ ಹೊರಟಿದೆ. ಅಂತರಿಕ್ಷವೇರಿ ಆಕಾಶ ಮಾರ್ಗದಿಂದ ನೋಡಿದರೆ ಹಸ್ತಿನೆಯ ಸಾಮ್ರಾಜ್ಯವೇ ಮಹಾ ನದಿಯಂತೆ ಎತ್ತಲೋ ಹರಿದು ಸಾಗುವಂತೆ ಕಾಣಿಸುತ್ತಿದೆ.
ಮುಂದುವರಿಯುವುದು…






















































































