
ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಅಂಬಾಜೋಗಾಯಿಯ 47 ವರ್ಷದ ರಮಾಬಾಯಿ ರಣವೀರ್ ಅವರು ತಮ್ಮ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಸೀರೆಯಲ್ಲೇ ಬರಿಗಾಲಿನಲ್ಲಿ 3 ಕಿ.ಮೀ ಓಡಿ ಸ್ಥಳೀಯ ಮ್ಯಾರಥಾನ್ ಗೆದ್ದು ಗಮನ ಸೆಳೆದಿದ್ದಾರೆ.
ಪಟ್ಟಣದಲ್ಲಿ ಶಿಕ್ಷಣ ಸಂಕೀರ್ಣದ ಮೈಲಿಗಲ್ಲು ಆಚರಣೆಯ ಅಂಗವಾಗಿ ‘ಅಮೃತ್ ದೌಡ್’ ಓಟವನ್ನು ಆಯೋಜಿಸಲಾಗಿತ್ತು. ಛತ್ರಪತಿ ಶಿವಾಜಿ ಮಹಾರಾಜ್ ಚೌಕ್ನಿಂದ ಭಾಗ್ಯನಗರ ಚೌಕ್ವರೆಗೆ ನಡೆದ ಈ ಓಟದಲ್ಲಿ ವಿವಿಧ ವಯೋಮಾನದ ಸ್ಪರ್ಧಿಗಳು ಭಾಗವಹಿಸಿದ್ದರು.
ರಮಾಬಾಯಿ ಆರಂಭದಲ್ಲಿ ಸೀರೆ ಹಾಗೂ ಚಪ್ಪಲಿ ಧರಿಸಿ ಓಡಲು ಆರಂಭಿಸಿದ್ದರು. ಆದರೆ ಚಪ್ಪಲಿ ಜಾರುತ್ತಿದ್ದರಿಂದ ವೇಗಕ್ಕೆ ಅಡ್ಡಿಯಾದ ಕಾರಣ, ಅದನ್ನು ಕಳಚಿ ಬರಿಗಾಲಿನಲ್ಲೇ ಓಟ ಮುಂದುವರಿಸಿದರು.
ಟ್ರ್ಯಾಕ್ಸೂಟ್ ಮತ್ತು ವೃತ್ತಿಪರ ಶೂ ಧರಿಸಿದ್ದ ಕಿರಿಯ ಸ್ಪರ್ಧಿಗಳ ನಡುವೆ ಸ್ಪರ್ಧಿಸಿದ ಅವರು, ಅಂತಿಮವಾಗಿ ಎಲ್ಲರಿಗಿಂತ ಮೊದಲು ಗುರಿ ತಲುಪಿ ಗೆಲುವು ಸಾಧಿಸಿದರು. ಅವರ ಸಾಧನೆ ಪ್ರೇಕ್ಷಕರು ಮತ್ತು ಇತರ ಸ್ಪರ್ಧಿಗಳ ಮೆಚ್ಚುಗೆಗೆ ಪಾತ್ರವಾಯಿತು.
ಈ ಓಟದಲ್ಲಿ ಪಾಲ್ಗೊಳ್ಳಲು ನಗದು ಬಹುಮಾನವೇ ರಮಾಬಾಯಿಗೆ ಪ್ರಮುಖ ಪ್ರೇರಣೆಯಾಗಿತ್ತು. ಬಹುಮಾನದ ಹಣವನ್ನು ತಮ್ಮ ಪುತ್ರಿಯರಾದ ಪೂಜಾ ಮತ್ತು ಆರತಿಯ ಶಿಕ್ಷಣ ಹಾಗೂ ಪುಸ್ತಕಗಳಿಗಾಗಿ ಬಳಸುವ ಉದ್ದೇಶ ಹೊಂದಿದ್ದರು.
ಅಧಿಕೃತವಾಗಿ ಘೋಷಿಸಿದ್ದ ₹3,000 ಬದಲಿಗೆ ಅವರಿಗೆ ₹5,000 ಬಹುಮಾನ ನೀಡಲಾಗಿದೆ. ಈ ಹಣದಿಂದ ಪೂಜಾಗಾಗಿ ನೋಟ್ಬುಕ್ ಮತ್ತು ಪೆನ್ನುಗಳನ್ನು ಖರೀದಿಸಿದ್ದು, ಉಳಿದ ಮೊತ್ತವನ್ನು ಆರತಿಯ ಶಿಕ್ಷಣಕ್ಕಾಗಿ ಬಳಸುವುದಾಗಿ ರಮಾಬಾಯಿ ತಿಳಿಸಿದ್ದಾರೆ.






















































































