ಬೈಲೂರು ಮೈನ್ ಸರ್ಕಾರಿ ಶಾಲೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವ ಹಾಗೂ ‘ಉನ್ನತಿ’ ತಂಡದ 5ನೇ ವರ್ಷದ ಸಂಭ್ರಮಾಚರಣೆ

ಬೈಲೂರು, ಆಗಸ್ಟ್ 15: ಕಾರ್ಕಳ ತಾಲೂಕಿನ ಬೈಲೂರು ಮೈನ್ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉನ್ನತಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಹಾಗೂ ‘ಉನ್ನತಿ’ ತಂಡದ 5ನೇ ವರ್ಷದ ಸಂಭ್ರಮವನ್ನು ಶನಿವಾರ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಸುದೇವ ಶೆಟ್ಟಿಗಾರ್, ವಹಿಸಿದ್ದರು. ಬೈಲೂರಿನ ಉದ್ಯಮಿ ರಾಮರಾಯ ಕಿಣಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಚಿತ್ರನಟ ಪೃಥ್ವಿ ಅಂಬರ್, ಕಾರ್ಕಳ ಕ್ರಿಯೇಟಿವ್ ಕಾಲೇಜಿನ ವಿನಾಯಕ ಜೋಗ್, ಆರೂರ್ಸ್ ನರ್ಸಿಂಗ್ ಹೋಂ ವೈದ್ಯರಾದ ಡಾ. ಶಶಿಕಿರಣ್ ಆಚಾರ್, ಉದ್ಯಮಿ ಪ್ರಶಾಂತ್ ಶೆಟ್ಟಿ (ಗುತ್ತುಮನೆ, ಬೈಲೂರು), ಬೈಲೂರು ಮೈನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ಸಚ್ಚಿದಾನಂದ ಶೆಟ್ಟಿ, ‘ಅಮ್ಮನ ನೆರವು’ ಚಾರಿಟೇಬಲ್ ಟ್ರಸ್ಟ್ನ ಅವಿನಾಶ್ ಶೆಟ್ಟಿ, ಶಾಲೆಯ ಮುಖ್ಯೋಪಾಧ್ಯಾಯರಾದ ಆಶಾ ಭಾನು, ಹಾಗೂ ಉನ್ನತಿ ತಂಡದ ಸದಸ್ಯರಾದ ವಿನೋದ್ ಶೆಟ್ಟಿ ಹಾಗೂ ಲಾವಣ್ಯ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉನ್ನತಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತಿವರ್ಷ ಆಗಸ್ಟ್ 15ರಂದು ಕಾರ್ಕಳ ತಾಲೂಕಿನ ವಿವಿಧ ಸರ್ಕಾರಿ ಶಾಲೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಅದರಂತೆ ಈ ವರ್ಷ ಬೈಲೂರು ಮೈನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯೊಂದಿಗೆ ‘ಉನ್ನತಿ’ ತಂಡದ 5ನೇ ವರ್ಷದ ಸಂಭ್ರಮವನ್ನು ಆಚರಿಸಲಾಯಿತು.
ಬೈಲೂರಿನ ಸಾಧಕರಿಗೆ ಸನ್ಮಾನ
ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬೈಲೂರಿನ ಸಾಧಕರನ್ನು ಸನ್ಮಾನಿಸಲಾಯಿತು. ಕ್ಯಾನ್ಸರ್ ಔಷಧ ಸಂಶೋಧಕರಾದ ಡಾ. ಜಿತೇಂದ್ರ ಕಿಣಿ, ವೈದ್ಯರಾದ ಡಾ. ಶಶಿಕಿರಣ್ ಆಚಾರ್, ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀಮತಿ ಕೆ. ಅರುಂಧತಿ ಶೆಟ್ಟಿ, ಕಾಷ್ಠಶಿಲ್ಪಿ ಹಾಗೂ ನಾಟಿ ವೈದ್ಯರಾದ ಶ್ರೀ ಜನಾರ್ಧನ ಆಚಾರ್ಯ, ಕೃಷಿಕರಾದ ಶ್ರೀ ಶಿವಾನಂದ ಶೆಟ್ಟಿ (ಕೌಡೂರು), ನಿವೃತ್ತ ಹೆಡ್ ಕಾನ್ಸ್ಟೇಬಲ್ ಶ್ರೀ ವಿಜಯ ದೇವಾಡಿಗ, ಬೈಲೂರು ಮೈನ್ ಶಾಲೆಯ ಶಿಕ್ಷಕರಾದ ಮೊಯ್ದಿನ್ ಎಸ್.ಕೆ., ಅಗ್ನಿವೀರ್ ಶ್ರೀ ಸಾಗರ್ ಆಚಾರ್ಯ, ರಾಷ್ಟ್ರಮಟ್ಟದ ವಾಲಿಬಾಲ್ ಪಟು ಮಣಿಕಂಠ ಹಾಗೂ ರಾಷ್ಟ್ರಮಟ್ಟದ ವೇಟ್ಲಿಫ್ಟಿಂಗ್ ಪಟು ಕು. ಜೀವಿತಾ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
32 ವಿದ್ಯಾರ್ಥಿಗಳಿಗೆ ₹2 ಲಕ್ಷ ವಿದ್ಯಾರ್ಥಿವೇತನ
ಉನ್ನತಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 32 ವಿದ್ಯಾರ್ಥಿಗಳಿಗೆ ಒಟ್ಟು ₹2,00,000 ಮೊತ್ತದ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು.
ಅಲ್ಲದೆ, ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ 15 ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಉನ್ನತಿ ಟ್ರಸ್ಟ್ನ ಅಧಿಕೃತ ವೆಬ್ಸೈಟ್ ಬಿಡುಗಡೆ
ಕಾರ್ಯಕ್ರಮದ ಮತ್ತೊಂದು ಪ್ರಮುಖ ಘಟ್ಟವಾಗಿ ಚಲನಚಿತ್ರನಟ ಪೃಥ್ವಿ ಅಂಬರ್ ಅವರು ಉನ್ನತಿ ಚಾರಿಟೇಬಲ್ ಟ್ರಸ್ಟ್ನ ಅಧಿಕೃತ ವೆಬ್ಸೈಟ್ ಅನ್ನು ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಉನ್ನತಿ ತಂಡದ ಸದಸ್ಯರು, ಶಾಲೆಯ ಎಸ್ಡಿಎಂಸಿ ಸದಸ್ಯರು ಹಾಗೂ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಉಪಸ್ಥಿತರಿದ್ದರು.ಉನ್ನತಿ ತಂಡದ ಸದಸ್ಯರಾದ ವಿನೋದ್ ಶೆಟ್ಟಿ ಸ್ವಾಗತಿಸಿದರು. ಕೌಶಿಕ್ ಅಮೀನ್ ಮುನಿಯಾಲ್ ಕಾರ್ಯಕ್ರಮ ನಿರೂಪಿಸಿದರು. ಬೈಲೂರು ಮೈನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸುಮಾ ವಂದಿಸಿದರು.



















































































