
ಸಾಣೂರು, ಜುಲೈ 29: ರಾಜೇಶ್ವರಿ ಶಿಕ್ಷಣ ಪ್ರತಿಷ್ಠಾನ, ಸಾಣೂರು, ಕಾರ್ಕಳದಲ್ಲಿ ಬುಧವಾರ ಗುರುವಂದನಾ ಹಾಗೂ ಕಾರ್ಗಿಲ್ ವಿಜಯ ದಿನಾಚರಣೆ ಕಾರ್ಯಕ್ರಮವನ್ನು ಭಕ್ತಿ, ಗೌರವ ಮತ್ತು ದೇಶಪ್ರೇಮದ ವಾತಾವರಣದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಅತಿಥಿಗಳು ಹಾಗೂ ಶಿಕ್ಷಕರನ್ನು ವಾದ್ಯವೃಂದ ಮತ್ತು ಪೂರ್ಣಕುಂಭದೊಂದಿಗೆ ವೇದಿಕೆಗೆ ಬರಮಾಡಿಕೊಳ್ಳಲಾಯಿತು. ಶ್ರೀ ಲಕ್ಷ್ಮೀ ಮತ್ತು ತಂಡದಿಂದ ಗುರುವಂದನಾ ಗೀತೆ ಪ್ರಸ್ತುತಪಡಿಸಲಾಯಿತು. ಉದಯ್ ಶೆಟ್ಟಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ಬಳಿಕ ವೇದವ್ಯಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪ್ರೊ. ಪವನ್ ಕಿರಣ್ ಕೆರೆ ಅವರು ಗುರುಗಳ ಮಹತ್ವ, ಶಿಕ್ಷಣದ ಮೌಲ್ಯ ಹಾಗೂ ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರ ಪಾತ್ರದ ಕುರಿತು ಪ್ರೇರಣಾದಾಯಕವಾಗಿ ಮಾತನಾಡಿದರು. ಗುರುವಂದನೆ ಎಂಬುದು ವ್ಯಾಸರು ನಮಗೆ ಕೊಟ್ಟ ಅತಿ ದೊಡ್ಡ ಕೊಡುಗೆ ವ್ಯಾಸರು ಹೇಳದೆ ಇರುವ ವಿಷಯ ಪ್ರಪಂಚದಲ್ಲಿ ಇಲ್ಲ ಎನ್ನುವ ಅರಿವನ್ನು ಮಹಾಭಾರತದ ಮೂಲಕ ಪುರಾಣದ ಮೂಲಕ ತೋರಿಸಿಕೊಟ್ಟರು. ವ್ಯಾಸರ ದಿವ್ಯದೃಷ್ಟಿ ,ವ್ಯಾಸರ ದೂರ ದೃಷ್ಟಿ ತುಂಬಾ ಪ್ರಮುಖವಾದದ್ದು ಎಂದು ತಿಳಿಸಿದರು.
ಇದಾದ ನಂತರ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಶಿಕ್ಷಕರಿಗೆ ಪುಷ್ಪ ಸಮರ್ಪಿಸಿ ಪಾದನಮನ ಮಾಡುವ ಮೂಲಕ ತಮ್ಮ ಗೌರವ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ಕಾರ್ಗಿಲ್ ವಿಜಯ ದಿನಾಚರಣೆಯ ಅಂಗವಾಗಿ ಶ್ರೀಯುತ ಸೂರಜ್ ಮಂಗಳೂರು ಅವರು ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಯೋಧರ ಶೌರ್ಯ, ತ್ಯಾಗ ಹಾಗೂ ದೇಶಭಕ್ತಿಯ ಕುರಿತು ಆಶಯ ನುಡಿಗಳನ್ನಾಡಿದರು. ನಾವು ದೇಶಕ್ಕೋಸ್ಕರ ಕೆಲಸ ಮಾಡಬೇಕು ಸತ್ಯ ನ್ಯಾಯ ಧರ್ಮದಲ್ಲಿ ಬದುಕಬೇಕು ರಾಮನ ಹಾಗೆ ಮೌಲ್ಯಯುತ ಜೀವನ ನಡೆಸಬೇಕು ನಾವು ಯಾವ ಕ್ಷೇತ್ರಕ್ಕೂ ಹೋದರು ನಮ್ಮ ದೇಶ ನಮ್ಮ ಸಮಾಜ ಇದನ್ನು ಮುಂದೆ ಇಟ್ಟು ನಾನು ಸದೃಢವಾಗುವುದು ಹಾಗೂ ಇನ್ನೊಬ್ಬರಿಗೆ ಹೇಗೆ ಒಳ್ಳೆಯದನ್ನು ಮಾಡುವುದು ಎಂಬ ಯೋಚನೆ ಮಾಡಬೇಕು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜೇಶ್ವರಿ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ ಅವರು ಮಾತನಾಡಿ, ಗುರುಗಳಿಗೆ ಗೌರವ ಸಲ್ಲಿಸುವುದು ಭಾರತೀಯ ಸಂಸ್ಕೃತಿಯ ಶ್ರೇಷ್ಠ ಪರಂಪರೆಯಾಗಿದ್ದು, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರ ತ್ಯಾಗವನ್ನು ಪ್ರತಿಯೊಬ್ಬರೂ ಸದಾ ಸ್ಮರಿಸಬೇಕು ಎಂದು ತಿಳಿಸಿದರು. ವಿದ್ಯಾರ್ಥಿಗಳು ಮುಂದಕ್ಕೆ ಒಂದು ಒಳ್ಳೆಯ ಸಮಾಜ ನಿರ್ಮಾಣವನ್ನು ಮಾಡಬೇಕು ಯುವ ಪೀಳಿಗೆಗೆ ಒಂದು ಶಕ್ತಿಯನ್ನು ಕೊಡಬೇಕು ಗಟ್ಟಿ ರಾಷ್ಟ್ರವನ್ನು ಕಟ್ಟಬೇಕು ಗುರುಗಳಿಗೆ ಗೌರವ ಕೊಡಲು ಸಾಧ್ಯವಿಲ್ಲದವರು ಸಾಧಕರಾಗುವುದಕ್ಕೆ ಸಾಧ್ಯವಿಲ್ಲ . ಗುರುವಂದನೆ ಮತ್ತು ದೇಶಕ್ಕಾಗಿ ಸ್ಮರಿಸುವಂತೆ ಕಾರ್ಯಕ್ರಮವನ್ನು ಶಿಕ್ಷಣ ಸಂಸ್ಥೆಯಲ್ಲಿ ನಡೆಸಬೇಕು ಅದರ ಪ್ರಾಮುಖ್ಯತೆಯನ್ನು ತಿಳಿಸಬೇಕು ಒಂದು ಇತಿಹಾಸಕ್ತಿ ಮತ್ತು ಕಲ್ಪನೆ ಬಹುಶಃ ರಾಷ್ಟ್ರ ನಿರ್ಮಾಣದ ಮೊದಲ ಮೆಟ್ಟಿಲು ಎಂದು ಹೇಳಿದರು.ಈ ಕಾರ್ಯಕ್ರಮ ನೆಪ ಮಾತ್ರದ ಕಾರ್ಯಕ್ರಮವಲ್ಲ ಕಾರ್ಯ ಸಾಧನೆಯ ಕಾರ್ಯಕ್ರಮವಾಗಬೇಕು. ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣದ ಕೆಲಸಕ್ಕೆ ಹೊರಟಿರುವಂತಹ ಕಾರ್ಯಕ್ಕೆ ಪೂರಕವಾಗಿ ಈ ಕಾರ್ಯಕ್ರಮ ಇರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಣವ್ ಭಟ್ ಅವರು ಧನ್ಯವಾದ ಸಮರ್ಪಿಸಿದರು. ಉಷಾ ಅಂಬರೀಷ್ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.






















































