
ಬೆಂಗಳೂರು: ಸಾರಿಗೆ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಬಾಕಿ ದಂಡ ಪಾವತಿಸಲು ರಾಜ್ಯ ಸಾರಿಗೆ ಇಲಾಖೆ ವಿಶೇಷ ರಿಯಾಯಿತಿ ಯೋಜನೆ ಘೋಷಿಸಿದೆ.
ಜೂನ್ 21ರಿಂದ ಜುಲೈ 10ರವರೆಗೆ ಬಾಕಿ ದಂಡದ ಮೊತ್ತದ ಮೇಲೆ ಶೇ.50 ರಿಯಾಯಿತಿ ನೀಡಲಾಗುತ್ತದೆ. 1991ರಿಂದ 2022ರವರೆಗೆ ದಾಖಲಾಗಿರುವ 1.87 ಲಕ್ಷಕ್ಕೂ ಅಧಿಕ DSA ಪ್ರಕರಣಗಳು ಈ ಯೋಜನೆಯ ವ್ಯಾಪ್ತಿಗೆ ಬರಲಿವೆ.
ಪರವಾನಗಿ ಉಲ್ಲಂಘನೆ, ಅವಧಿ ಮೀರಿದ ಚಾಲನಾ ಪರವಾನಗಿ, ಫಿಟ್ನೆಸ್, ವಿಮೆ ಹಾಗೂ ಮಾಲಿನ್ಯ ಪ್ರಮಾಣಪತ್ರ ಸಂಬಂಧಿತ ಪ್ರಕರಣಗಳಿಗೆ ರಿಯಾಯಿತಿ ಅನ್ವಯವಾಗಲಿದೆ. ಉಲ್ಲಂಘನೆ ನಡೆದ ಸಮಯದ ದಂಡದ ದರದ ಆಧಾರದಲ್ಲೇ ಮೊತ್ತ ಲೆಕ್ಕಿಸಲಾಗುತ್ತದೆ.
ಒಂದು ಬಾರಿಯ ಇತ್ಯರ್ಥ ಯೋಜನೆಯಡಿ ವಾಹನ ಮಾಲೀಕರು ತಮ್ಮ ಬಾಕಿ ಪ್ರಕರಣಗಳನ್ನು ಮುಕ್ತಾಯಗೊಳಿಸಬಹುದು. ಬಾಕಿ ಪ್ರಕರಣ ಹೊಂದಿರುವವರು ಸಮೀಪದ ಆರ್ಟಿಒ ಕಚೇರಿಗೆ ಭೇಟಿ ನೀಡಿ ಯೋಜನೆಯ ಲಾಭ ಪಡೆಯುವಂತೆ ಇಲಾಖೆ ಮನವಿ ಮಾಡಿದೆ.

































