
ಮಂಗಳೂರು: ಕಂಬಳ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಗರದ ಖಾಸಗಿ ಹೋಟೆಲಲ್ಲಿ ಕಂಬಳ ಆಯೋಜಕರು, ಮಾಲಕರು ಸಭೆ ನಡೆಸಿ ಇನ್ನು ಮುಂದೆ ಕಂಬಳ ತೀರ್ಪುಗಾರರು, ವ್ಯವಸ್ಥಾಪಕರು ಕೋಣದ ಯಜಮಾನರು, ಚಾಕರಿ ವರ್ಗದವರು ಯಾರಿಗೂ ಅವಮಾನ ಆಗದಂತೆ ನೋಡಿಕೊಳ್ಳಬೇಕು. ಕಂಬಳದಲ್ಲಿ ಶಿಸ್ತು ಬದ್ಧವಾಗಿ ಸಮಯ ಪಾಲನೆ ಮಾಡಬೇಕು. ಕಂಬಳದ ವೀಕ್ಷಕ ವಿವರಣೆಗಾರರು ಯಾರೊಬ್ಬರದ್ದು ತೇಜೊವದೇ ಮಾಡುವಂತಿಲ್ಲ ಎಂದು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಕಂಬಳ ಕೂಟದ ಭೀಷ್ಮನೆಂದೇ ಹೆಸರುವಾಸಿಯಾಗಿದ್ದ ಗುಣಪಾಲ ಕಡಂಬ ಅವರಿಗೆ ಅವಮಾನವಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಕಂಬಳ ಸಮಿತಿಯು ಈ ಸಭೆ ನಡೆಸಿದೆ.
10 ಕಂಬಳಗಳಿಗೆ ಬಿಡುಗಡೆಯಾದ ತಲಾ 5 ಲಕ್ಷ ರೂಪಾಯಿ ಅನುದಾನ ಎಲ್ಲಾ ಕಂಬಳಗಳಿಗೆ ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ ಒತ್ತಾಯಿಸುವ ನಿರ್ಧಾರ ಕೈಗೊಂಡಿದ್ದು ರಾಜ್ಯ ಸರ್ಕಾರವು ಕಂಬಳವನ್ನು ರಾಜ್ಯ ಕ್ರೀಡೆ ಎಂದು ಘೋಷಿಸಿ ಅಸೋಸಿಯೇಷನ್ ರಚಿಸಿದ ಬೆನ್ನಲ್ಲಿಯೇ ರಾಜ್ಯ ವ್ಯಾಪಿ ನಡೆಸಬಹುದು ಎಂದು ಉಚ್ಚ ನ್ಯಾಯಾಲಯವು ಆದೇಶಿಸಿದೆ. ಕಂಬಳ ಸಮಿತಿ ಅಧ್ಯಕ್ಷ ಬೆಳಪು ದೇವಿ ಪ್ರಸಾದ್ ಶೆಟ್ಟಿ, ಈ ಕುರಿತು ಪ್ರತಿಕ್ರಿಯಿಸಿ ಕಂಬಳದಲ್ಲಿ ಒಂದಲ್ಲೊಂದು ವಿವಾದಗಳು ಸಾಮಾನ್ಯವಾಗಿದ್ದು ಅದನ್ನು ಅಲ್ಲಲ್ಲೇ ನಾವೇ ಬಗೆಹರಿಸುತಿದ್ದೇವೆ ಎಂದು ತಿಳಿಸಿದರು.



















