
ಪ್ರತಿ ವರುಷ ಬಂತೆಂದರೆ
ಸಾಕು ಡಿಸೆಂಬರ್ ಮೂವತ್ತೊಂದು
ಸ್ನೇಹಿತರೆಲ್ಲಾ ಒಂದಾಗಿ
ಸೇರುವರು ಅಂದು
ಹೊಸ ಮದ್ಯದ ಬಾಟಲಿ
ತೆರೆದು ಮದ್ಯ ಉದರಕ್ಕಿಲಿಯಲು
ಹಳೆನೆನಪುಗಳು ಎಳೆಎಳೆಯಾಗಿ
ಹೊರಬರಲು ಕೆಲವೊಂದು
ನಿರ್ಣಯಗಳನ್ನು ಕೈಗೊಳ್ಳುವರು ಅಂದು
ದುಶ್ಚಟಗಳನ್ನು ತೊರೆಯುವೆವು
ನಾಳೆಯಿಂದ….
ಸನ್ಮಾರ್ಗದಲ್ಲಿ ನಡೆಯುವೆವು
ನಾಳೆಯಿಂದ…..
ಆದರೆ ಅದೆಷ್ಟೋ ನಿರ್ಣಯಗಳು
ನಿರ್ಣಯಗಳಾಗಿಯೇ ಉಳಿಯುತ್ತದೆ
ನಾಳೆಯಿಂದ…….
ಮಧ್ಯರಾತ್ರಿ ಗಂಟೆ ಹನ್ನೆರಡು
ಹೊಡೆಯಲು ಮಧ್ಯದ ನಿಶೆಯಲ್ಲಿ
ಎದುರು ಸಿಕ್ಕಿದವರಿಗೆಲ್ಲಾ
ಹೇಳುವರು ತೊದಲುತ್ತಾ, ತೊದಲುತ್ತಾ
ಹ್ಯಾಪಿ ನ್ಯೂ ಇಯರ್
ಯುವಜನರೇ ನಿಮ್ಮೊಳಗೆ
ಹರಿಯಲು ಸದಾ ಕಾರಂಜಿಯಂತೆ
ಚಿಮ್ಮಲು ಉತ್ಸಾಹ, ಉಲ್ಲಾಸ, ಹರುಷ
ಮತ್ಯಾಕೆ ಕಾಯಬೇಕು
ಬರಲೆಂದು ಹೊಸ ವರುಷ
ನೀವು ನಿಮ್ಮ ಜೀವನದಲ್ಲಿ
ಇಡುವ ಪ್ರತಿಯೊಂದು
ಹೆಜ್ಜೆಯಿಂದ ಆಗಬೇಕು
ಸಮಾಜಕ್ಕೆ ಉತ್ಕರ್ಷ
ಮಾದರಿಯಾಗಬೇಕು ನಮಗೆ
ಗಡಿಯಲ್ಲಿ ನಮ್ಮನ್ನು ಕಾಯುತ್ತಿರುವ
ವೀರಯೋಧರು…
ಮಧ್ಯರಾತ್ರಿಯಲ್ಲಿ ಚುಮುಗುಟ್ಟುವ
ಚಳಿಯಲ್ಲಿ ಬಂದೂಕು ಹಿಡಿದು
ದೇಶವನ್ನು ಕಾಯುತ್ತಿರುವ
ಯೋಧರಿಗೆ ಎಲ್ಲಿದೆ
ಹೊಸವರುಷದ ಆಚರಣೆ
ಅವರ ಬಾಯಿಂದ ಹೊರಬರುವ
ಉದ್ಘೋಷ ಒಂದೇ..,.
” ಭಾರತ್ ಮಾತಾ ಕೀ ಜೈ “
ಎಂಬ ಘೋಷಣೆ.
ಪ್ರಕಾಶ್ ಕಾರ್ಕಳ.






















































































