
ಬೆಂಗಳೂರು: ಭಾರತ ತಂಡವು ಚೊಚ್ಚಲ ಆವೃತ್ತಿಯ ಅಂಧ ಮಹಿಳೆಯರ ಟಿ20 ವಿಶ್ವಕಪ್ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದು ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಶುಭಹಾರೈಸಿ, ರಾಜ್ಯದ 3 ಆಟಗಾರ್ತಿಯರಿಗೆ ಭರ್ಜರಿ ನಗದು ಬಹುಮಾನ ಹಾಗೂ ಸರ್ಕಾರಿ ಉದ್ಯೋಗ ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ.
ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಚೊಚ್ಚಲ ಆವೃತ್ತಿಯ ಅಂಧ ಮಹಿಳೆಯರ ಟಿ20 ವಿಶ್ವಕಪ್ ಫೈನಲ್ನಲ್ಲಿ ನೇಪಾಳ ಎದುರು ಏಳು ವಿಕೆಟ್ಗಳ ಐತಿಹಾಸಿಕ ಗೆಲುವು ಸಾಧಿಸುವ ಮೂಲಕ ಭಾರತವು ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ವಿಶ್ವಕಪ್ ವಿಜೇತ ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡದ ಸದಸ್ಯರಿಗೆ ಅಭಿನಂದಿಸಿ, ಮುಂದಿನ ಕ್ರೀಡಾ ಬದುಕು ಹೀಗೆಯೇ ಯಶಸ್ಸುಗಳಿಂದ ಕೂಡಿರಲಿ ಎಂದು ಶುಭ ಹಾರೈಸಿದರು.
ತಂಡದಲ್ಲಿದ್ದ ಕರ್ನಾಟಕದ ದೀಪಿಕಾ, ಶಿವಮೊಗ್ಗ ಜಿಲ್ಲೆಯ ರಿಪ್ಪನ್ಪೇಟೆಯ ಕಾವ್ಯಾ.ವಿ ಹಾಗೂ ಕಾವ್ಯಾ ಎನ್.ಆರ್.ಗೆ ತಲಾ 10 ಲಕ್ಷ ರು., ಸರ್ಕಾರಿ ಉದ್ಯೋಗ ನೀಡುವುದಾಗಿ ಘೋಷಿಸಿದ್ದಾರೆ. ಇದಲ್ಲದೆ ಭಾರತ ತಂಡದಲ್ಲಿದ್ದ ಬೇರೆ ರಾಜ್ಯಗಳ ಒಟ್ಟು 13 ಆಟಗಾರ್ತಿಯರಿಗೆ ತಲಾ 2 ಲಕ್ಷ ರು. ಬಹುಮಾನವನ್ನು ಸಿಎಂ ಘೋಷಿಸಿದ್ದಾರೆ.



















