
‘ಅನರ್ಹ ಬಿಪಿಎಲ್ ಕಾರ್ಡ್’ ಪರಿಷ್ಕರಣೆ ಪ್ರಕ್ರಿಯೆ ರಾಜ್ಯದಲ್ಲಿ ನಡೆಯುತ್ತಿದ್ದು ಈಗಾಗಲೇ ಕೇಂದ್ರ ಸರ್ಕಾರವು ಎರಡೆರಡು ರಾಜ್ಯಗಳಲ್ಲಿ ಪಡಿತರ ಚೀಟಿ ಹೊಂದಿದವರು, ಐಟಿ ರಿಟರ್ನ್ಸ್ ಮಾಡುವವರು ಸೇರಿ ವಿವಿಧ ಮಾನದಂಡಗಳಲ್ಲಿ ಸಂಶಯಾಸ್ಪದ ಪಡಿತರ ಕಾರ್ಡ್ ಪಟ್ಟಿ ನೀಡಿದ್ದು ಇದರ ಜೊತೆಗೆ ಸ್ಥಳೀಯವಾಗಿ ಪ್ರತಿ ನ್ಯಾಯಬೆಲೆ ಅಂಗಡಿಗಳು ಬಿಪಿಎಲ್ ಕಾರ್ಡ್ ಹೊಂದಿರುವ ಶ್ರೀಮಂತ ಫಲಾನುಭವಿಗಳನ್ನು ಗುರುತಿಸಿ ಕನಿಷ್ಠ 10 ಅನರ್ಹ ಕಾರ್ಡ್ ದಾರರನ್ನು ಪಟ್ಟಿ ಮಾಡಬೇಕೆಂದು ಸೂಚನೆ ನೀಡಲಾಗಿದೆ.
ರಾಜ್ಯದಲ್ಲಿ ಒಟ್ಟು 20,473 ನ್ಯಾಯಬೆಲೆ ಅಂಗಡಿಗಳು ಇದ್ದು ಇದರಲ್ಲಿ ಪ್ರತಿ ಅಂಗಡಿಯಿಂದ ಅತಿ ಕಡಿಮೆ ಎಂದರೂ 10 ಶ್ರೀಮಂತರ ಪತ್ತೆ ಹಚ್ಚುವ ಗುರಿ ನೀಡಲಾಗಿದೆ. ಹೀಗಾಗಿ ಕನಿಷ್ಠ ಎರಡು ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ದಾರರನ್ನು ಈ ಮೂಲದಿಂದ ತೆಗೆದು ಹಾಕುವ ಲೆಕ್ಕಾಚಾರ ಇಲಾಖೆ ಮಾಡಿದೆ ಹಾಗೂ ಈಗಾಗಲೇ ಅರ್ಜಿ ಹಾಕಿ ವರ್ಷಗಳಿಂದ ಕಾಯುತ್ತಿರುವ ಅರ್ಹರಿಗೆ ಇದೇ ಅಕ್ಟೋಬರ್ 2ರ ವೇಳೆಗೆ ಹೊಸದಾಗಿ ಕಾರ್ಡ್ ವಿತರಿಸಲು ಉದ್ದೇಶಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ








