ಭಾಗ – 212
ಭರತೇಶ್ ಶೆಟ್ಟಿ ,ಎಕ್ಕಾರ್

ಹಿಂದೊಮ್ಮೆ ವಿಂಧ್ಯ ಪರ್ವತವು ಮೇಲೆ ಮೇಲೆ ಬೆಳೆಯುತ್ತಲೆ ಹೋಯಿತು. ಅದರಿಂದ ನಾನಾ ವಿಧದ ತೊಡಕುಗಳೂ ತಲೆದೋರಿದವು. ದೇವತೆಗಳೆಲ್ಲರೂ ಅಗಸ್ತ್ಯರನ್ನು ಕಂಡು ಪರಿಹಾರ ಒದಗಿಸಬೇಕೆಂದು ಕೇಳಿಕೊಂಡರು. ಅದರಂತೆ ಅಗಸ್ತ್ಯರು ಬಂದು ವಿಂಧ್ಯ ಪರ್ವತರಾಜನನ್ನು ಕಂಡು “ಅಯ್ಯಾ ನಾನು ದೇವತೆಗಳ ಕಾರ್ಯಾರ್ಥವಾಗಿ ದಕ್ಷಿಣ ದಿಕ್ಕಿನತ್ತ ಪತ್ನಿ ಸಮೇತನಾಗಿ ಹೋಗ ಬೇಕಾಗಿದೆ. ನೀನು ಇನ್ನೂ ಬೆಳೆಯುತ್ತಾ ಹೋದರೆ ನಿನ್ನನ್ನು ಏರಿ ದಾಟಿ ಹೋಗುವುದು ಕಷ್ಟ ಸಾಧ್ಯ. ಹಾಗಾಗಿ ನಾವು ಹೋಗಿ ಮರಳಿ ಬರುವವರೆಗೆ ನೀನು ಬೆಳೆಯುವುದನ್ನು ನಿಲ್ಲಿಸಬೇಕು” ಎಂದು ಕೇಳಿಕೊಂಡರು. ಪರ್ವತರಾಜನು “ಹಾಗೆಯೇ ಆಗಲಿ” ಎಂದು ಒಪ್ಪಿ ಕೊಂಡು ಬೆಳೆಯುವುದನ್ನು ನಿಲ್ಲಿಸಿದನು. ಅಂತೆಯೆ ದಕ್ಷಿಣಕ್ಕೆ ಸಪತ್ನೀಕರಾಗಿ ಹೋದ ಅಗಸ್ತ್ಯರು ಮರಳಲೂ ಇಲ್ಲ, ಪರ್ವತವು ಬೆಳೆಯಲೂ ಇಲ್ಲ. ಈ ಪ್ರಕರಣದಲ್ಲಿ ದೇವತೆಗಳ ಉದ್ದೇಶ ಅಗಸ್ತ್ಯರು ದಕ್ಷಿಣಕ್ಕೆ ಹೋಗಿ ಧರ್ಮ ಕಾರ್ಯದಲ್ಲಿ ಸ್ಥಿತರಾಗಬೇಕು ಎಂಬುವುದೇ ಆಗಿರಬಹುದು. ಅಗಸ್ತ್ಯರು ಅದ್ಬುತವಾದ ತಪಃಶಕ್ತಿಯಿಂದಲೂ, ಪ್ರಭಾವದಿಂದಲೂ ಕೂಡಿದ ಮಹಾತ್ಮರು ಹೌದು. ಅವರ ಪುಣ್ಯಾಶ್ರಮವನ್ನು ದರ್ಶನ ಮಾಡಿದ ಮಾತ್ರದಿಂದಲೇ ಪಾಪನಾಶವಾಗಿ ಪುಣ್ಯಪ್ರಾಪ್ತವಾಗುತ್ತದೆ ಎಂದು ಎಲ್ಲೆಡೆ ಪ್ರಸಿದ್ದವಾಗಿತ್ತು. ಹೀಗೆ ಅಗಸ್ತ್ಯರ ಮಹಿಮೆಯನ್ನು ಲೋಮಶ ಮಹರ್ಷಿಗಳು ಪಾಂಡವರಿಗೆ ಅಗಸ್ತ್ಯರ ಆಶ್ರಮ ದರ್ಶನ ಸಂದರ್ಭ ಸವಿವರವಾಗಿ ವಿವರಿಸಿದರು.
ಪಾಂಡವರು ಅಗಸ್ತ್ಯಾಶ್ರಮದಿಂದ ಹೊರಟು ಮುಂದೆ “ನಂದೆ” “ಅಪರನಂದೆ” ಎಂಬ ಪುಣ್ಯ ತೀರ್ಥಗಳಲ್ಲಿ ಸ್ನಾನ ಮಾಡಿ, ಅಲ್ಲಿಂದ “ಹೇಮಕೂಟ” ವನ್ನು ನೋಡಿಕೊಂಡು ಕೌಶಕಿ ನದಿಯ ತೀರದಲ್ಲಿದ್ದ ಋಷ್ಯಶೃಂಗರ ಆಶ್ರಮದತ್ತ ಬಂದರು.
ಋಷ್ಯಶೃಂಗ ರು ಮಹಿಮಾನ್ವಿತ ಋಷಿವರ್ಯರು ಬ್ರಹ್ಮರ್ಷಿ ಕೂಡ ಹೌದು. ವಿಭಾಂಡಕನೆಂಬ ಒಬ್ಬ ಮುನಿ ಒಮ್ಮೆ ಕೈಕಾಲು ತೊಳೆಯಲು ತೊರೆಗೆ ಇಳಿದಾಗ ಊರ್ವಶಿಯನ್ನು ಕಾಣುತ್ತಾರೆ. ಆಕೆಯ ಸೌಂದರ್ಯ ರಾಶಿಗೆ ವಿಚಲಿತರಾಗುತ್ತಾರೆ. ಪರಿಣಾಮ ವೀರ್ಯ ಸ್ಖಲನವಾಗಿ ತೊರೆಯ ನೀರಿಗೆ ಬೀಳುತ್ತದೆ. ನೀರು ಕುಡಿಯಲು ಬಂದ ಹೆಣ್ಣು ಜಿಂಕೆ ಋಷಿಯ ಜೀವಧಾತುವನ್ನೂ ಸೇವಿಸಿ, ಮುಂದೆ ಒಂದು ಗಂಡು ಮಗುವಿನ ಜನನ ವಾಗುತ್ತದೆ. ಆ ಮಗುವೇ ಋಷ್ಯಶೃಂಗರು. ಸಾಧನೆಯಿಂದ ಮಹರ್ಷಿಯೂ, ಬ್ರಹ್ಮ ಜ್ಞಾನ ಪ್ರಾಪ್ತಿಯಿಂದ ಬ್ರಹ್ಮರ್ಷಿಯೂ ಆಗಿ ಮಹಿಮಾನ್ವಿತರಾದರು. ಹೀಗಿರಲು ಆ ಕಾಲದಲ್ಲಿ ಅಂಗದೇಶದಲ್ಲಿ ಬರಗಾಲ ತಲೆದೋರುತ್ತದೆ. ಅಂಗಾಧಿಪನಾದ ರೋಮಪಾದ ಮಹಾರಾಜ ಋಷ್ಯಶೃಂಗರನ್ನು ಕಂಡು ಬರಗಾಲ ಪರಿಹಾರಕ್ಕಾಗಿ ಬೇಡಿಕೊಳ್ಳುತ್ತಾನೆ. ಆತನ ಪ್ರಾರ್ಥನೆಯನ್ನು ಮನ್ನಿಸಿ ಋಷ್ಯಶೃಂಗರು ಅಂಗದೇಶಕ್ಕೆ ಆಗಮಿಸಿ ಯಾಗಾದಿ ಸತ್ಕರ್ಮಗಳನ್ನು ನೆರವೇರಿಸಿ ಸುವೃಷ್ಟಿಯನ್ನು ಪಡೆದು ಕ್ಷಾಮ ನಿವಾರಣೆಯಾಗುತ್ತದೆ.
ಅಂಗದೇಶದ ಮಹಾರಾಜ ರೋಮಪಾದನಿಗೆ ಓರ್ವಳು ಸಾಕುಮಗಳಿದ್ದಳು. ಆಕೆ ಸೂರ್ಯ ವಂಶದ ಚಕ್ರವರ್ತಿ ದಶರಥ ಮಹಾರಾಜನ ಔರಸ ಪುತ್ರಿ “ಶಾಂತಾ”. ದಶರಥನ ಮಗಳಾಗಿ ಜನಿಸಿದವಳಾದರೂ ನಂತರ ಆಕೆ ಬೆಳೆದದ್ದು ಮಹಾರಾಜ ರೋಮಪಾದನ ಅರಮನೆಯಲ್ಲಿ. ಮುಂದೆ ಶಾಂತಾಳ ವಿವಾಹ ಋಷ್ಯ ಶೃಂಗ ಮಹರ್ಷಿಗಳ ಜೊತೆ ನೆರವೇರುತ್ತದೆ. ಈಗ ಋಷ್ಯಶೃಂಗರು ದಶರಥ ಚಕ್ರವರ್ತಿಗೆ ಸಂಬಂಧದಲ್ಲಿ ಅಳಿಯ ಆಗುತ್ತಾರೆ. ಈ ಸಂದರ್ಭ ಅಯೋಧ್ಯೆಯ ಅರಸ ದಶರಥ ಮಕ್ಕಳಿಲ್ಲದ ಕೊರಗಿನಲ್ಲಿರುತ್ತಾನೆ. ಸತ್ಸಂತಾನ ಪ್ರಾಪ್ತಿಗಾಗಿ ಮಹಿಮಾನ್ವಿತರಾದ ಋಷ್ಯಶೃಂಗರನ್ನು ಬರಮಾಡಿಕೊಂಡು ಪುತ್ರಕಾಮೇಷ್ಟಿ ಯಾಗ ಮಾಡಿಸಿದ್ದನು. ಯಾಗ ಪ್ರಸಾದ ಕ್ಷೀರ ಪಾಯಸ ಸೇವಿಸಿದ ದಶರಥನ ರಾಣಿಯರಾದ ಕೌಸಲ್ಯಾ, ಕೈಕೇಯಿ, ಸುಮಿತ್ರಾ ದೇವಿಯರಲ್ಲಿ ರಾಮ, ಭರತ, ಲಕ್ಷ್ಮಣ ಮತ್ತು ಶತ್ರುಘ್ನರು ಸುಪುತ್ರರಾಗಿ ಜನಿಸಿದ್ದರು. ಯುಗ ಯುಗಗಳು ಸದಾ ಸ್ಮರಿಸಬಹುದಾದ ಶ್ರೀರಾಮ ಚಂದ್ರ ಜನಿಸುವಲ್ಲಿ ಸಾಗಿದ್ದ ಪುತ್ರಕಾಮೇಷ್ಟಿ ಯಾಗ ಪೂರೈಸಿದ ಸತ್ಕೀರ್ತಿ ಬ್ರಹ್ಮರ್ಷಿ ಋಷ್ಯಶೃಂಗರಿಗೆ ಸಲ್ಲುತ್ತದೆ.
ಹೀಗೆ ಲೋಮಶ ಮಹರ್ಷಿಗಳಿಂದ ಕಥೆ ಕೇಳುತ್ತಾ ಪಾಂಡವರು ಮಹೇಂದ್ರ ಪರ್ವತಕ್ಕೆ ಬಂದರು. ಅದು ಪರಶುರಾಮರ ಪುಣ್ಯ ಕ್ಷೇತ್ರ.
ಮುಂದುವರಿಯುವುದು…



















































