ತುಳುನಾಡಿನ ದೈವಭಕ್ತರ ಆಕ್ರೋಶ

ಮಂಗಳೂರು: ಕಳೆದ 19 ವರ್ಷಗಳ ಹಿಂದೆ ಎಂಎಸ್ಇಝಡ್ಗಾಗಿ ಸಾವಿರಾರು ಎಕರೆ ಕೃಷಿ ಭೂಮಿ, ಮಠ, ಮಂದಿರ, ಮಸೀದಿ, ಚರ್ಚ್ ಎಲ್ಲವೂ ನಾಶವಾದರೂ 800 ವರ್ಷಗಳ ಇತಿಹಾಸ ಇರುವ ನೆಲ್ಲಿದಡಿಗುತ್ತು ಶ್ರೀಕಾಂತೇರಿ ಧೂಮಾವತಿ ದೈವಸ್ಥಾನವನ್ನು ಸ್ಥಳಾಂತರಿಸಲು ಯಾರಿಗೂ ಸಾಧ್ಯವಾಗಿಲ್ಲ. ಅಂದಿನಿಂದ ಇಂದಿನವರೆಗೂ ಆ ದೈವಸ್ಥಾನ ಎಂಎಸ್ಇಝಡ್ನ ಆವರಣದೊಳಗೆ ಉಳಿದುಕೊಂಡು ಆರಾಧನೆಗೊಳ್ಳುತ್ತಿತ್ತು. ಇದೀಗ ಆ ದೈವಸ್ಥಾನಕ್ಕೆ ಪೂಜೆ ಸಲ್ಲಿಸಲು ಹೋಗದಂತೆ ಅಧಿಕಾರಿಗಳು ತಡೆಯೊಡ್ಡಿದ್ದಾರೆ.
2006ರಲ್ಲಿ ಮಂಗಳೂರು ಹೊರವಲಯ ಬಜಪೆ ಸಮೀಪ ಸುಮಾರು ಎರಡೂವರೆ ಸಾವಿರ ಎಕರೆ ಭೂಮಿಯನ್ನು ಎಂಇಝಢ್ಗಾಗಿ ಭೂಸ್ವಾಧೀನ ಮಾಡಲಾಗಿತ್ತು. ಸಾವಿರಾರು ಎಕರೆ ಕೃಷಿ ಭೂಮಿ ಸೇರಿ ಮನೆ, ಮಠ, ಮಂದಿರ, ಮಸೀದಿ, ಚರ್ಚ್ ಧ್ವಂಸ ಮಾಡಿ ಜನರನ್ನು, ದೈವ-ದೇವರನ್ನು ಸ್ಥಳಾಂತರ ಮಾಡಿ ಕೈಗಾರಿಕಾ ವಲಯವನ್ನು ಸ್ಥಾಪಿಸಲಾಗಿತ್ತು. ಆದರೆ, ಅಲ್ಲೇ ಇದ್ದ ನೆಲ್ಲಿದಡಿಗುತ್ತು ಶ್ರೀಕಾಂತೇರಿ ಧೂಮಾವತಿ ದೈವಸ್ಥಾನವನ್ನು ಮಾತ್ರ ಧ್ವಂಸ ಮಾಡಲು, ಸ್ಥಳಾಂತರ ಮಾಡಲು ಯಾರಿಗೂ ಸಾಧ್ಯವಾಗಿಲ್ಲ. ಅದನ್ನು ಮುಟ್ಟಲು ಬಂದಾಗ ದೈವದ ಶಕ್ತಿಯಿಂದಲೇ ದೈವದ ಭೂಮಿ ಹಾಗೂ ದೈವ ಅಲ್ಲೇ ಉಳಿದಿತ್ತು. ಇಡೀ ಊರಿಗೆ ಊರನ್ನೇ ಒಕ್ಕಲೆಬ್ಬಿಸಿದರೂ ಈ ಕಾಂತೇರಿ ಧೂಮಾವತಿ ದೈವವನ್ನು ಒಕ್ಕಲೆಬ್ಬಿಸಲು ಸಾಧ್ಯವಾಗಿಲ್ಲ. ಹೀಗಾಗಿ ಕೈಗಾರಿಕಾ ಪ್ರದೇಶದ ಒಳಗೇ ಉಳಿದುಕೊಂಡ ದೈವದ ಪೂಜೆ, ಉತ್ಸವ, ನೇಮೋತ್ಸವ ಮಾಡಲಾಗುತ್ತಿತ್ತು. ಪ್ರತಿ ತಿಂಗಳ ಸಂಕ್ರಮಣದಂದು ದೈವದ ಪೂಜೆ ಮಾಡಲು ನೆಲ್ಲಿದಡಿಗುತ್ತಿನ ಕುಟುಂಬಸ್ಥರು ಎಂಎಸ್ಇಝಡ್ನಿಂದ ಒಳ ಹೋಗುವ ಅನುಮತಿ ಪಡೆಯುತ್ತಿದ್ದರು. ನೇಮೋತ್ಸವ ನಡೆಯುವಾಗಲೂ ಅನುಮತಿ ಪಡೆದು ನಡೆಸುತ್ತಿದ್ದರು. ಅಧಿಕಾರಿ, ಸಿಬ್ಬಂದಿ ಕೂಡ ಭಾಗಿಯಾಗುತ್ತಿದ್ದರು. ಕಳೆದ 19 ವರ್ಷದಿಂದ ಇದು ನಡೆಯುತ್ತಿದ್ದರೂ, ಇದೀಗ ಬಂದ ಅಧಿಕಾರಿಗಳು ಅದಕ್ಕೂ ತಡೆಯೊಡ್ಡಿದ್ದು, ಇದು ತುಳುನಾಡಿನ ದೈವ ಭಕ್ತರನ್ನು ರೊಚ್ಚಿಗೆಬ್ಬಿಸಿದೆ..









