
ಉಡುಪಿ: ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಭಾಗದ ಅಸಂಖ್ಯಾತ ಹಿಂದುಗಳು ಬರೋಬ್ಬರಿ 144 ವರ್ಷಗಳಿಗೊಮ್ಮೆ ಪ್ರಯಾಗ್ ರಾಜ್ ನಲ್ಲಿ ನಡೆಯುವ ಮಹಾ ಕುಂಭಮೇಳಕ್ಕೆ ತೆರಳಬೇಕು ಎನ್ನುವ ಆಸೆ ಹೊಂದಿದ್ದು ಇದನ್ನು ಈಡೇರಿಸಲು ಉಡುಪಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರ ಬಳಿ ಉಡುಪಿಯಿಂದ ಕೊಂಕಣ ಮಾರ್ಗದಲ್ಲಿ ವಿಶೇಷ ಕುಂಭಮೇಳ ರೈಲು ಓಡಿಸುವಂತೆ ಮನವಿ ಮಾಡಿದ್ದಾರೆ.
ಈ ಮನವಿಗೆ ಸ್ಪಂದಿಸಿರುವ ಕೇಂದ್ರ ರೈಲ್ವೆ ಸಚಿವರು ಶೀಘ್ರದಲ್ಲಿ ಕುಂಭಮೇಳಕ್ಕೆ ವಿಶೇಷ ರೈಲನ್ನು ಉಡುಪಿ ಪ್ರಯಾಗ್ರಾಜ್ ನಡುವೆ ಓಡಿಸುವುದಾಗಿ ಭರವಸೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಸಂಸದ ಕೋಟ ದೇಶಾದ್ಯಂತ ರೈಲು ಬೋಗಿಗಳ ಕೊರತೆಯ ಕಾರಣಗಳನ್ನು ಇಲಾಖೆ ನೀಡುತ್ತಿದ್ದರೂ ಸಾಮಾನ್ಯ ಜನರಿಗೂ ಕೈಗೆಟುಕಲಿ ಎಂಬ ದೃಷ್ಟಿಯಿಂದ ಜನರಲ್ ಮತ್ತು ಎಸಿ ಕೋಚ್ ಇರುವ ರೈಲಿನ ವ್ಯವಸ್ಥೆಗೆ ಮನವಿ ಮಾಡಿದ್ದು ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ. ಈ ಬೇಡಿಕೆ ಈಡೇರಿದ್ದಲ್ಲಿ ಕರಾವಳಿ ಭಾಗದ ಅಸಂಖ್ಯಾತ ಭಕ್ತರು ಕುಂಭಮೇಳಕ್ಕೆ ತೆರಳುವ ಅವಕಾಶ ಪಡೆಯಲಿದ್ದಾರೆ ಎಂದು ಹೇಳಿದರು.



















