
ಕಾರ್ಕಳ.05 : 2019 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ “ಚೌಕಿದಾರ್ ಶೇರ್ ಹೇ” ಎಂಬ ಸ್ಟಿಕರ್ ನ್ನು ಕಾರಿನ ಹಿಂಬದಿಯ ಗ್ಲಾಸ್ ಗೆ ಅಳವಡಿಸುವುದು, ಚುನಾವಣೆಯ ನೀತಿ ಸಹಿತೆಯ ಉಲ್ಲಂಘನೆಯಾಗಿದೆ. ಹಾಗು ಸ್ಟಿಕರ್ ನ್ನು ತೆಗೆಯಲು ಹೇಳಿದಾಗ ಕಾರ್ಕಳದ ಯುವ ನ್ಯಾಯವಾದಿ ಎಂ.ಕೆ ವಿಪುಲ್ ತೇಜ್ ಚುನಾವಣಾ ಅಧಿಕಾರಿ ಮೇಲೆ ಹಲ್ಲೆ ನಡೆಸಿ ಕರ್ತವ್ಯಕೆ ಅಡ್ಡಿ ಮಾಡಿರುತ್ತಾರೆಂದು ಸುಳ್ಳು ದೂರನ್ನು ಆಧರಿಸಿ ಆಗಿನ ಕಾರ್ಕಳ ನಗರ ಪೊಲೀಸ್ ಉಪ ನಿರೀಕ್ಷಕ ಪ್ರಕರಣ ದಾಖಲಿಸಿ ಬಂಧನಕ್ಕೆ ಯತ್ನಿಸಿದರು. ಸದರಿ ಪ್ರಕರಣವನ್ನು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು ಆಧಾರ ರಹಿತ ಪ್ರಕರಣವೆಂದು ರದ್ದು ಪಡಿಸಿತು.
ಈ ಹಿನ್ನಲೆಯಲ್ಲಿ ಮಾನ ಹಾನಿ ಸಂಭವಿಸಿದ ಬಗ್ಗೆ ಎಂ ಕೆ ವಿಪುಲ್ ತೇಜ್ ಅವರು ನಂಜಾ ನಾಯ್ಕ್ ಮತ್ತು ಇತರರ ವಿರುದ್ಧ ಕಾರ್ಕಳದ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಿದರು. ಈ ದಾವೆಯಲ್ಲಿ ಮಾನ್ಯ ನ್ಯಾಯಾಲಯವು ನಂಜಾ ನಾಯ್ಕ್ ಮತ್ತು ಸರ್ಕಾರ ಜಂಟಿಯಾಗಿ ಹಾಗು ಪ್ರತ್ಯೇಕವಾಗಿ ರು. 5೦,೦೦೦/- ವನ್ನು ಆದೇಶದ ದಿನಾಂಕದಿಂದ 2 ತಿಂಗಳ ಒಳಗೆ ಎಂ ಕೆ ವಿಪುಲ್ ತೇಜ್ ಅವರಿಗೆ ಪಾವತಿಸಬೇಕೆಂದು ಆದೇಶಿಸಿದೆ.



















































































